ಜೈಪುರ: ರಾಜಸ್ಥಾನ ಕಾಂಗ್ರೆಸ್ನಲ್ಲಿ ಸಚಿನ್ ಪೈಲಟ್ ಮತ್ತೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಚುನಾವಣಾ ವರ್ಷದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಶಾಸಕಾಂಗ ಪಕ್ಷದ ಸಭೆ ಆಯೋಜಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದ ಹಿಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯು ಗೆಹ್ಲೋಟ್ ಪರ ಶಾಸಕರಿಂದ ಸಾಕಷ್ಟು ಗೊಂದಲ ಮತ್ತು ಬಂಡಾಯಕ್ಕೆ ಕಾರಣವಾಗಿತ್ತು. ಅಂದಿನಿಂದ ಈ ವೈಫಲ್ಯಕ್ಕೆ ಕಾರಣರಾದ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಸಚಿನ್ ಪೈಲಟ್ ಗುಂಪಿನ ಅಸಹನೆಗೆ ಕಾರಣವಾಗಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದೆ.
ಹಿರಿಯ ನಾಯಕರ ತೇಪೆ ಪ್ರಯತ್ನಗಳ ಹೊರತಾಗಿಯೂ ರಾಜಸ್ಥಾನ ಕಾಂಗ್ರೆಸ್ನಲ್ಲಿ ಗೊಂದಲ ಮುಂದುವರಿದಿದೆ. ಇದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ನಡೆಯುತ್ತಿರುವ ರಾಜಕೀಯ ಶೀತಲ ಸಮರ ಶೀಘ್ರದಲ್ಲೇ ಮತ್ತೆ ಸ್ಫೋಟಗೊಳ್ಳಬಹುದು ಎಂಬ ಗುಸುಗುಸು ಹುಟ್ಟಿಕೊಂಡಿದೆ. ಸೆಪ್ಟೆಂಬರ್ 25 ರಂದು ನಡೆದಿದ್ದ ಗೆಹ್ಲೋಟ್ ಗುಂಪಿನ ಶಾಸಕರ ರಾಜೀನಾಮೆ ಮತ್ತು ಶಾಸಕಾಂಗ ಪಕ್ಷದ ಸಭೆ ಬಹಿಷ್ಕರಿಸಿದ ನಾಯಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಪೈಲಟ್ ಮತ್ತೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಸುದ್ದಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ನಡೆದ ಸಂವಾದದ ಸಂದರ್ಭದಲ್ಲಿ ರಾಜಸ್ಥಾನ ಕಾಂಗ್ರೆಸ್ ನಲ್ಲಿನ ಗುಂಪುಗಾರಿಕೆ ಬಗ್ಗೆ ಗೆಹ್ಲೋಟ್ ಹೆಸರು ಹೇಳದೆ ಪೈಲಟ್ ವಾಗ್ದಾಳಿ ನಡೆಸಿದ್ದರು. ತಮ್ಮನ್ನು ದೇಶದ್ರೋಹಿ ಎಂದು ಗೆಹ್ಲೋಟ್ ಕರೆದಿರುವುದು ಎಲ್ಲರಿಗೂ ಕೆಟ್ಟದು ಅನಿಸಿದೆ. ಅದನ್ನು ಮುಂದುವರೆಸಲ್ಲ, ಏಕೆಂದರೆ ಅದರಿಂದ ಏನು ಪ್ರಯೋಜನ ಇಲ್ಲ. ಶಾಸಕಾಂಗ ಪಕ್ಷದ ಸಭೆ ಏಕೆ ನಡೆದಿಲ್ಲ? ಎಂಬುದು ಈಗಿನ ಪ್ರಶ್ನೆಯಾಗಿದೆ. ಅದು ನಾಯಕತ್ವ ಯೋಚಿಸಬೇಕಾದ ವಿಷಯವಾಗಿದೆ ಎಂದಿದ್ದರು.
ಕಳೆದ ಸೆಪ್ಟೆಂಬರ್ನಲ್ಲಿ ಶಾಸಕರ ಬಂಡಾಯದ ನಂತರ ಗೆಹ್ಲೋಟ್ ಬಣದ ಮೂವರು ಹಿರಿಯ ನಾಯಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು ಆದರೆ ಶಿಸ್ತು ಸಮಿತಿಯು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.