ದೇಶ

ಕೂದಲೆಳೆ ಅಂಚಿನಲ್ಲಿ ತಪ್ಪಿದ ಏರ್ ಇಂಡಿಯಾ, ನೇಪಾಳ ಏರ್ ಲೈನ್ಸ್ ಘರ್ಷಣೆ ಅನಾಹುತ!

Srinivas Rao BV

ಕಠ್ಮಂಡು: ಏರ್ ಇಂಡಿಯಾ ಹಾಗೂ ನೇಪಾಳ ಏರ್ ಲೈನ್ಸ್ ವಿಮಾನಗಳು ಮಾರ್ಗ ಮಧ್ಯದಲ್ಲಿ ಘರ್ಷಣೆಗೆ ಒಳಗಾಗಬಹುದಾಗಿದ್ದ ಅನಾಹುತ ಕೂದಲೆಳೆ ಅಂಚಿನಲ್ಲಿ ತಪ್ಪಿದೆ. 

ವಾರ್ನಿಂಗ್ ವ್ಯವಸ್ಥೆಗಳು ಪೈಲಟ್ ಗಳನ್ನು ಎಚ್ಚರಿಸಿದ್ದು, ಸಮಯೋಚಿತ ಕ್ರಮಗಳಿಂದಾಗಿ ಈ ಅನಾಹುತ ತಪ್ಪಿದೆ ಎಂದು ಕಠ್ಮಂಡುವಿನಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.  ಈ ಘಟನೆ ಬಗ್ಗೆ ಸಿಎಎಎನ್ ವಕ್ತಾರ ಜಗನ್ನಾಥ್ ನಿರೋಲಾ ಮಾಹಿತಿ ನೀಡಿದ್ದು, ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಏರ್ ಸ್ಟ್ರಾಫಿಕ್ ಕಂಟ್ರೋಲರ್ ವಿಭಾಗದ ಇಬ್ಬರು ಉದ್ಯೋಗಿಗಳನ್ನು "ಅಜಾಗರೂಕತೆ"ಗಾಗಿ ಅಮಾನತುಗೊಳಿಸಿದೆ ಎಂದು ತಿಳಿಸಿದ್ದಾರೆ. 

ಶುಕ್ರವಾರ ಬೆಳಿಗ್ಗೆ ಮಲೇಷ್ಯಾದ ಕೌಲಾಲಂಪುರದಿಂದ ಕಠ್ಮಂಡುವಿಗೆ ಬರುತ್ತಿದ್ದ ನೇಪಾಳ ಏರ್‌ಲೈನ್ಸ್ ವಿಮಾನ ಮತ್ತು ನವದೆಹಲಿಯಿಂದ ಕಠ್ಮಂಡುವಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಬಹುತೇಕ ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು.
 
ಏರ್ ಇಂಡಿಯಾ ವಿಮಾನ 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನ ಅದೇ ಸ್ಥಳದಲ್ಲಿ 15,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ನಿರೋಲಾ ಮಾಹಿತಿ ನೀಡಿದ್ದಾರೆ.

ಎರಡು ವಿಮಾನಗಳು ಸಾಮೀಪ್ಯದಲ್ಲಿವೆ ಎಂದು ರಾಡಾರ್‌ನಲ್ಲಿ ತೋರಿಸಿದ ನಂತರ, ನೇಪಾಳ ಏರ್‌ಲೈನ್ಸ್ ವಿಮಾನ 7,000 ಅಡಿಗಳಿಗೆ ಇಳಿದಿತ್ತು ಎಂದು ವಕ್ತಾರರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ನಾಗರಿಕ ವಿಮಾನಯಾನ ಪ್ರಾಧಿಕಾರ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಘಟನೆಯ ಸಮಯದಲ್ಲಿ ನಿಯಂತ್ರಣ ಕೊಠಡಿಯ ಉಸ್ತುವಾರಿ ವಹಿಸಿದ್ದ ಇಬ್ಬರು ಅಧಿಕಾರಿಗಳನ್ನು ಸಿಎಎಎನ್ ಅಮಾನತುಗೊಳಿಸಲಾಗಿದೆ.
 

SCROLL FOR NEXT