ನವದೆಹಲಿ: 2,000 ರೂಪಾಯಿ ನೋಟುಗಳನ್ನು ನಿಷೇಧಿಸಿರುವ ಬಗ್ಗೆ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಈ ನಡೆ ನಮ್ಮ ಸ್ವಯಂ ಘೋಷಿತ ವಿಶ್ವಗುರುವಿನ ಎಂದಿನಂತೆ ಮಾಡುವ ಮೊದಲು ನಿರ್ಧಾರ ಕೈಗೊಂಡು ಆ ನಂತರ ಚಿಂತಿಸುವ ನಡೆಯಾಗಿದೆ ಎಂದು ಹೇಳಿದೆ.
ಪಕ್ಷದ ಸಂಸದರೊಬ್ಬರು ಈ ಬಗ್ಗೆ ಮಾತನಾಡಿದ್ದು, ಇದು ಎರಡನೇ ನೋಟು ನಿಷೇಧದ ವಿಪತ್ತಿನ ಆರಂಭ ಎಂದು ಹೇಳಿದ್ದಾರೆ.
ನಮ್ಮ ಸ್ವ-ಘೋಷಿತ ವಿಶ್ವಗುರು ಮಾದರಿ. ಮೊದಲು ನಿರ್ಧಾರ, ಎರಡನೇಯದು ಚಿಂತಿಸುವುದು (First Act.Second Think= FAST) ಆಗಿದೆ. 2016 ರಲ್ಲಿ ನವೆಂಬರ್ 8 ರಲ್ಲಿ ವಿನಾಶಕಾರಿ 'ತುಘಲಕಿ ಫರ್ಮಾನು' ಹೊರಡಿಸಿದ ನಂತರ ಈಗ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲಾಗುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಟ್ವಿಟರ್ ನಲ್ಲಿ ಹೇಳಿದ್ದಾರೆ.
ಮತ್ತೋರ್ವ ಕಾಂಗ್ರೆಸ್ ಸಂಸದ, ಮಾಣಿಕ್ಕಂ ಠಾಗೋರ್ ಟ್ವೀಟ್ ಮಾಡಿ ಎರಡನೇ ಡಿಮಾನಿಟೈಸೇಷನ್ ವಿಪತ್ತು ಎಂ ಅಂದರೆ ಮ್ಯಾಡ್ನೆಸ್ (ಹುಚ್ಚು) ನಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.