ದೇಶ

ಶೀಘ್ರದಲ್ಲೇ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಅಮಿತ್ ಶಾ ಭೇಟಿ; ಶಾಂತಿ ಸ್ಥಾಪನೆಗೆ ಮನವಿ

Lingaraj Badiger

ಗುವಾಹಟಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಶೀಘ್ರದಲ್ಲೇ ಮೂರು ದಿನಗಳ ಕಾಲ ಭೇಟಿ ನೀಡುವುದಾಗಿ ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಶಾಂತಿ ಮರುಸ್ಥಾಪಿಸಲು ಎಲ್ಲಾ ಸಹೋದರ ಸಹೋದರಿಯರೊಂದಿಗೆ ಮಾತನಾಡುವುದಾಗಿ ಗುರುವಾರ ತಿಳಿಸಿದ್ದಾರೆ.

ನ್ಯಾಯಾಲಯದ ತೀರ್ಪಿನಿಂದಾಗಿ ಮಣಿಪುರದಲ್ಲಿ ಕೆಲವು ಘರ್ಷಣೆಗಳು ಸಂಭವಿಸಿವೆ. ನಾವು ಶಾಂತಿ ಕಾಪಾಡಬೇಕು ಎಂದು ನನ್ನ ಮಣಿಪುರ ಸಹೋದರರಿಗೆ ಹೇಳಲು ಬಯಸುತ್ತೇನೆ. ಎರಡೂ ಗುಂಪುಗಳಿಗೆ ಸೇರಿದ ಜನ(ಮೈಟೈಸ್ ಮತ್ತು ಕುಕಿಗಳು) ಶಾಂತಿಯನ್ನು ಕಾಪಾಡುವ ಬಗ್ಗೆ ಮೊದಲು ನಿರ್ಧರಿಸಬೇಕು ಎಂದು ಅಮಿತ್ ಶಾ ಗುವಾಹಟಿಯಲ್ಲಿ ಹೇಳಿದ್ದಾರೆ.

ಅಸ್ಸಾಂನಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಸಮಾಜದ ಎಲ್ಲಾ ವರ್ಗದವರಿಗೂ ನ್ಯಾಯ ಸಿಗುತ್ತದೆ. ಹಿಂಸಾಚಾರ ಎಸಗಿದವರನ್ನು ಬಿಡುವುದಿಲ್ಲ ಎಂದು ಹೇಳಿದರು. 

ನರೇಂದ್ರ ಮೋದಿ ಸರ್ಕಾರದ ಮೇಲೆ ಜನ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.

“ನಾವು ಮಣಿಪುರದಲ್ಲಿ ಆರು ವರ್ಷಗಳ ಕಾಲ(ಬಿಜೆಪಿ ಅಡಿಯಲ್ಲಿ) ಆಡಳಿತ ನಡೆಸಿದ್ದೇವೆ. ಈ ವೇಳೆ ಯಾವುದೇ ಬಂದ್ ಅಥವಾ ದಿಗ್ಬಂಧನ ಇರಲಿಲ್ಲ. ನಾವು ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುತ್ತೇವೆ. ನಾನು ಶೀಘ್ರದಲ್ಲೇ ಮಣಿಪುರಕ್ಕೆ ಮೂರು ದಿನಗಳ ಕಾಲ ಭೇಟಿ ನೀಡುತ್ತೇನೆ ಮತ್ತು ಶಾಂತಿ ಸ್ಥಾಪಿಸಲು ಎಲ್ಲಾ ಸಹೋದರ, ಸಹೋದರಿಯರೊಂದಿಗೆ ಮಾತನಾಡುತ್ತೇನೆ ಎಂದು ಶಾ ತಿಳಿಸಿದ್ದಾರೆ.

SCROLL FOR NEXT