ದೇಶ

ದೇಶದ ಒಳಿತಿಗೆ ನನ್ನ ಸಮಯ ಬಳಸಿಕೊಂಡೆ, ನಮ್ಮ ಯಾತ್ರಾಸ್ಥಳದ ಮೇಲೆ ದಾಳಿ ಸ್ವೀಕಾರಾರ್ಹವಲ್ಲ: ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಮೂರು ದೇಶಗಳ ಪ್ರವಾಸ ಮುಗಿಸಿ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಇಂದು ಗುರುವಾರ ಅದ್ಧೂರಿಯಾಗಿ ಸ್ವಾಗತಿಸಿದರು.

"ಮೂರೂ ರಾಷ್ಟ್ರಗಳಲ್ಲಿ ನಾನು ಭೇಟಿಯಾದ ಎಲ್ಲಾ ನಾಯಕರು ಮತ್ತು ನಾನು ಮಾತನಾಡಿದ ಎಲ್ಲಾ ವ್ಯಕ್ತಿಗಳು ಭಾರತದ ಬಗ್ಗೆ ಸಾಕಷ್ಟು ಹೊಗಳಿಕೆಯ ಮಾತುಗಳನ್ನು ಹೇಳಿದ್ದು ಇಲ್ಲಿಯ ಬಗ್ಗೆ ಮಂತ್ರಮುಗ್ಧರಾಗಿದ್ದಾರೆ. G20 ಅಧ್ಯಕ್ಷ ಸ್ಥಾನವನ್ನು ಭಾರತವು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ಭಾರತೀಯರಿಗೆ ಬಹಳ ಹೆಮ್ಮೆಯ ವಿಷಯವಾಗಿದೆ" ಎಂದು ಮೋದಿ ಹೇಳಿದರು.

ಗ್ರೂಪ್ ಆಫ್ ಸೆವೆನ್ ಅಥವಾ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಜಪಾನ್‌ನ ಹಿರೋಷಿಮಾಗೆ ಭೇಟಿ ನೀಡಿದ್ದರು. ನಂತರ ಅವರು ಪಪುವಾ ನ್ಯೂಗಿನಿಯಾಗೆ ಪ್ರಯಾಣಿಸಿದರು, ಈ ದೇಶಕ್ಕೆ ಪ್ರಧಾನಿ ಮೋದಿಯವರ  ಮೊದಲ ಪ್ರವಾಸವಾಗಿತ್ತು, ಜೊತೆಗೆ ಇಂಡೋ-ಪೆಸಿಫಿಕ್ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ.

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಸಿಡ್ನಿಗೆ ಪ್ರಯಾಣ ಬೆಳೆಸಿದರು. ತಮ್ಮ ಪ್ರಯಾಣದ ಸಮಯದಲ್ಲಿ ಸಿಕ್ಕಿದ ಪ್ರತಿಯೊಂದು ಸಮಯವನ್ನು ದೇಶದ ಒಳಿತಿಗಾಗಿ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದೇನೆ ಎಂದು ಹೇಳಿದರು. 

ತಮ್ಮ ವಿರುದ್ಧ ಟೀಕಿಸುವವರ ಮೇಲೆ ವಾಗ್ದಾಳಿ ನಡೆಸಿದ ಅವರು, COVID-19 ಸಾಂಕ್ರಾಮಿಕ ಸಮಯದಲ್ಲಿ ಬೇರೆ ದೇಶಗಳಿಗೆ ಲಸಿಕೆಗಳನ್ನು ನೀಡುವ ನಿರ್ಧಾರವನ್ನು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದರು. ನಮ್ಮ ಭಾರತ ದೇಶ ಬುದ್ಧನ ಭೂಮಿ, ಇದು ಗಾಂಧಿಯ ನಾಡು. ನಾವು ನಮ್ಮ ಶತ್ರುಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ, ನಾವು ಸಹಾನುಭೂತಿ ಪ್ರೇರಿತ ಜನರು ಎಂದರು. 

ಜಗತ್ತು ಭಾರತದ ಕಥೆಯನ್ನು ಕೇಳಲು ಉತ್ಸುಕವಾಗಿದೆ ಎಂದು ಹೇಳಿರುವ ಪ್ರಧಾನ ಮಂತ್ರಿಗಳು, ಭಾರತೀಯರು ತಮ್ಮ ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಮಾತನಾಡುವಾಗ "ಗುಲಾಮ ಮನಸ್ಥಿತಿ" ಯಿಂದ ಬಳಲಬಾರದು. ಬದಲಿಗೆ ಧೈರ್ಯದಿಂದ ಮಾತನಾಡಬೇಕು ಎಂದು ಹೇಳಿದರು.

ಯಾತ್ರಾ ಸ್ಥಳದ ಮೇಲೆ ದಾಳಿ ಸ್ವೀಕಾರಾರ್ಹವಲ್ಲ: ಬೇರೆ ದೇಶಗಳಲ್ಲಿರುವ ಭಾರತದ ಯಾತ್ರಾಸ್ಥಳದ ಮೇಲೆ ದಾಳಿ ನಡೆಸುವುದು, ಧ್ವಂಸ ಮಾಡುವ ಅತಿರೇಕದ ವರ್ತನೆ ಸ್ವೀಕಾರಾರ್ಹವಲ್ಲ, ತಮ್ಮ ಮಾತನ್ನು ಬೇರೆ ದೇಶಗಳೂ ಒಪ್ಪುತ್ತವೆ ಎಂದು ಪ್ರಧಾನಿ ಹೇಳಿದ್ದಾರೆ.

SCROLL FOR NEXT