ದೇಶ

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತ: ಕೇಂದ್ರ ಸಚಿವ ಆರ್ ಕೆ ಸಿಂಗ್ ಭೇಟಿಯಾದ ಕೆ.ಜೆ.ಜಾರ್ಜ್!

Nagaraja AB

ನವದೆಹಲಿ: ರಾಜ್ಯದಲ್ಲಿ ಮಳೆ ಕೊರೆತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಬೆನ್ನಲ್ಲೇ, ಇಂಧನ ಸಚಿವ ಕೆ. ಜೆ. ಜಾರ್ಜ್ ಬುಧವಾರ ಸಂಜೆ ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ. ಸಿಂಗ್ ಅವರನ್ನು ಭೇಟಿಯಾಗಿ, ರಾಜ್ಯದ ಇಂಧನ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟರು. 

ವಿದ್ಯುತ್ ಬೇಡಿಕೆಯ ಹೆಚ್ಚಳದ ದೃಷ್ಟಿಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ಪಾಲು ನೀಡುವ ಮೂಲಕ ಕರ್ನಾಟಕದ ಹೆಚ್ಚುವರಿ ವಿದ್ಯುತ್ ಅಗತ್ಯವನ್ನು ಪೂರೈಸಲು ಬೆಂಬಲಿಸಬೇಕೆಂದು ಕೇಂದ್ರ ಸಚಿವರ ಬಳಿ ಮನವಿ ಮಾಡಿಕೊಂಡರು. 

ಕರ್ನಾಟಕ ಇಂಧನ ಸಚಿವಾಲಯದ ವಿವಿಧ ನವೀನ ಯೋಜನೆಗಳ ವಿವರಗಳನ್ನು ಕೇಂದ್ರ ಸಚಿವರೊಂದಿಗೆ ಹಂಚಿಕೊಂಡ ಕೆಜೆ ಜಾರ್ಜ್, ರಾಜ್ಯವು ವಾಯು ಮತ್ತು ಸೌರ ಶಕ್ತಿಯ ಮೂಲಗಳಿಂದ ಶಕ್ತಿ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದ್ದು, ನವೀಕರಿಸಲಾಗದ ಇಂಧನ ಉತ್ಪಾದನೆಯ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದರು. 

ಶುದ್ಧ ಮತ್ತು ಸಮರ್ಥ ನವೀಕರಿಸಬಹುದಾದ ಇಂಧನ ಮೂಲಗಳತ್ತ ಸಾಗುತ್ತಿರುವ ಬಗ್ಗೆ ಸಚಿವರು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ  ರಾಜ್ಯ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.

SCROLL FOR NEXT