ದೇಶ

ಚಂದ್ರಬಾಬು ನಾಯ್ಡುಗೆ ಬಿಗ್ ರಿಲೀಫ್: ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಆಂಧ್ರ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

Vishwanath S

ಹೈದರಾಬಾದ್: ಬಹುಕೋಟಿ ಕೌಶಲ್ಯಾಭಿವೃದ್ಧಿ  ಹಗರಣ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.

ಸಿಐಡಿ ಸಲ್ಲಿಸಿರುವ ಚಂದ್ರಬಾಬು ನಾಯ್ಡು ಅವರ ಕಸ್ಟಡಿ ಅರ್ಜಿಯನ್ನು ಸೆಪ್ಟೆಂಬರ್ 18ರ ಸೋಮವಾರದವರೆಗೆ ವಿಚಾರಣೆ ನಡೆಸದಂತೆ ವಿಜಯವಾಡ ನ್ಯಾಯಾಲಯಕ್ಕೆ ನ್ಯಾಯಾಲಯ ಸೂಚಿಸಿದೆ. ಮುಂದಿನ ಸೋಮವಾರದವರೆಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳದಂತೆ ಸಿಐಡಿಗೆ ಸೂಚಿಸಲಾಗಿದ್ದು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ. ಪ್ರಕರಣದಲ್ಲಿ ತಮ್ಮ ನ್ಯಾಯಾಂಗ ಬಂಧನವನ್ನು ರದ್ದುಗೊಳಿಸುವಂತೆ ಹಾಗೂ ಪ್ರಕರಣವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಾಯ್ಡು ಅವರು ಮಂಗಳವಾರ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಈ ಹಿಂದೆ, ವಿಜಯವಾಡದ ವಿಶೇಷ ನ್ಯಾಯಾಲಯವು ಮಾಜಿ ಸಿಎಂ ವಿರುದ್ಧ ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ, ನಕಲಿ ಮತ್ತು ಭ್ರಷ್ಟಾಚಾರದ ಆರೋಪ ಪ್ರಾಥಮಿಕ ಹಂತದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ನಿನ್ನೆಯಷ್ಟೇ ಅವರ ಗೃಹ ಬಂಧನದ ಅರ್ಜಿಯೂ ತಿರಸ್ಕೃತಗೊಂಡಿದೆ.

ರಾಜಕೀಯ ದ್ವೇಷಕ್ಕಾಗಿ ತನ್ನ ವಿರುದ್ಧ ಸುಳ್ಳು ಪ್ರಕರಣವನ್ನು ಹಾಕಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಮಾಜಿ ಸಿಎಂ ಹೇಳಿಕೊಂಡಿದ್ದಾರೆ. ಪ್ರಕರಣ 2021ರ ಡಿಸೆಂಬರ್ ನಲ್ಲಿ ದಾಖಲಾದ 22 ತಿಂಗಳ ನಂತರ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸುವಾಗ ಎಪಿಸಿಐಡಿ ಅವರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಸೂಕ್ತ ಕ್ರಮ ಅನುಸರಿಸಿಲ್ಲ ಎಂಬ ವಾದವೂ ಕೇಳಿಬಂದಿದೆ.

ಅವರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳನ್ನು ಮಾಡಲಾಗಿಲ್ಲ. ಅವರ ವಿರುದ್ಧ ಯಾವುದೇ ಆರೋಪಗಳನ್ನು ಸಾಬೀತುಪಡಿಸಲು ಪ್ರಾಥಮಿಕ ಪುರಾವೆಗಳನ್ನು ಸಂಗ್ರಹಿಸಲು ಸಿಐಡಿ ವಿಫಲವಾಗಿದೆ ಎಂಬುದು ಅವರ ವಾದವಾಗಿದೆ.

SCROLL FOR NEXT