ಹೈದರಾಬಾದ್: ಬಿಆರ್ಎಸ್, ಬಿಜೆಪಿ ಮತ್ತು ಎಐಎಂಐಎಂ ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಎಐಎಂಐಎಂ ನಾಯಕರ ವಿರುದ್ಧ ಏಕೆ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಕೇಳಿದರು. ತೆಲಂಗಾಣದಲ್ಲಿ ಕಾಂಗ್ರೆಸ್ ಈ ಮೂವರ ವಿರುದ್ಧ ಹೋರಾಟ ನಡೆಸುತ್ತಿದೆ ಎಂದರು.
ಹೈದರಾಬಾದ್ನಲ್ಲಿ ನಡೆದ ಎರಡು ದಿನಗಳ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಭೆಯ ಕೊನೆಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಮೂರು ಪಕ್ಷಗಳು ವಿಭಿನ್ನವಾಗಿರುವುದಾಗಿ ಹೇಳುತ್ತವೆ ಆದರೆ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ತೆಲಂಗಾಣ: ಮಹಿಳೆಯರಿಗೆ ಮಾಸಿಕ ರೂ. 2,500 ಆರ್ಥಿಕ ನೆರವು ಸೇರಿದಂತೆ 6 ಗ್ಯಾರಂಟಿ ಘೋಷಿಸಿದ ಸೋನಿಯಾ ಗಾಂಧಿ
ಬಿಜೆಪಿ ಸರ್ಕಾರವು ಹಲವು ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ತೆಲಂಗಾಣ ಮುಖ್ಯಮಂತ್ರಿ ಮತ್ತು ಎಂಐಎಂ ನಾಯಕರ ವಿರುದ್ಧ ಏಕೆ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಕೆಸಿಆರ್ ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ ಎಂದು ಆರೋಪಿಸಿದ ಅವರು, ಕೆಸಿಆರ್ ರಾಜ್ಯದ ಸಂಪತ್ತನ್ನು ಲೂಟಿ ಮಾಡಿದರೂ ಅವರ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಪಾಲುದಾರಿಕೆ ಹೊಂದಿರುವುದರಿಂದ ತನಿಖೆಗೆ ಆದೇಶಿಸಲಿಲ್ಲ ಎಂದರು.
"ಇಡಿ, ಸಿಬಿಐ ಮತ್ತು ಐಟಿ ಎಲ್ಲವೂ ಪ್ರತಿಪಕ್ಷ ನಾಯಕರ ಹಿಂದೆ ಇದೆ ಆದರೆ ತೆಲಂಗಾಣ ಮುಖ್ಯಮಂತ್ರಿ ಮತ್ತು ಎಐಎಂಐಎಂ ನಾಯಕರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ನರೇಂದ್ರ ಮೋದಿ ತಮ್ಮ ಜನರ ಮೇಲೆ ದಾಳಿ ಮಾಡುವುದಿಲ್ಲ. ಕೆಸಿಆರ್ ಮತ್ತು ಎಂಐಎಂ ನಾಯಕರನ್ನು ತಮ್ಮವರು ಎಂದು ಪರಿಗಣಿಸಿದ್ದಾರೆ .ಕಾಳೇಶ್ವರಂ ಯೋಜನೆಯಲ್ಲಿ 1 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದ್ದರೆ, ಧರಣಿ ಪೋರ್ಟಲ್ ಹೆಸರಿನಲ್ಲಿ ರೈತರು ಮತ್ತು ದಲಿತರ ಜಮೀನು ಕಿತ್ತುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ರೈತ ಬಂಧು ಯೋಜನೆಯು ಶ್ರೀಮಂತ ಭೂಮಾಲೀಕರಿಗೆ ಮಾತ್ರ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.