ತಿರುವನಂತಪುರಂ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ಹೆಸರಿನಲ್ಲಿ ಅನಧಿಕೃತ ಚಲನಚಿತ್ರ ವೆಬ್ಸೈಟ್ಗೆ ಪ್ರವೇಶಿಸಿದ್ದಕ್ಕಾಗಿ ದಂಡ ಪಾವತಿ ಮಾಡವಂತೆ ನಕಲಿ ಸಂದೇಶ ಬಂದಿದ್ದಕ್ಕೇ ಭಯಗೊಂಡ 16 ವರ್ಷದ ಅಪ್ರಾಪ್ತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಉತ್ತರ ಕೇರಳದ ಕೋಝಿಕೋಡ್ನಲ್ಲಿ ಈ ಘಟನೆ ವರದಿಯಾಗಿದ್ದು, ಮೃತ ಅಪ್ರಾಪ್ತ ಯುವಕನನ್ನು ಪ್ರಥಮ ಪಿಯುಸಿ ವಿದ್ಯಾರ್ಥಿ ಆದಿನಾಥ್ ಎಂದು ಗುರುತಿಸಲಾಗಿದೆ. ನಗರದ ಶಾಲೆಯೊಂದರಲ್ಲಿ 11ನೇ ತರಗತಿ ಓದುತ್ತಿದ್ದ ಆದಿನಾಥ್ ಬುಧವಾರ ಸಂಜೆ ಕೋಝಿಕ್ಕೋಡ್ನ ಚೇವಾಯೂರ್ನಲ್ಲಿರುವ ತನ್ನ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಕೊಠಡಿಯಿಂದ ವಶಪಡಿಸಿಕೊಂಡ ಸೂಸೈಡ್ ನೋಟ್ ಆನ್ಲೈನ್ ವಂಚನೆಯ ಬಗ್ಗೆ ಸೂಚನೆಗಳನ್ನು ನೀಡಿದ್ದು, ದಂಡ ಪಾವತಿ ಕುರಿತ ಮೆಸೇಜ್ ನಿಂದಲೇ ಭಯಗೊಂಡು ಆದಿನಾಥ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಭಾರತದ ಅತಿದೊಡ್ಡ ವಂಚಕ ಸಂಸ್ಥೆ: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್
ತನ್ನ ತಾಯಿಯನ್ನು ಉದ್ದೇಶಿಸಿ ಸೂಸೈಡ್ ನೋಟ್ನಲ್ಲಿ, ಹುಡುಗ ತಾನು ಯಾವುದೇ ಅನಧಿಕೃತ ವೆಬ್ಸೈಟ್ಗೆ ಲಾಗ್ ಇನ್ ಮಾಡಿಲ್ಲ. ಆದರೆ ಅವಳ ಲ್ಯಾಪ್ಟಾಪ್ನಲ್ಲಿ ಕಾನೂನುಬದ್ಧ ವೆಬ್ಸೈಟ್ನಲ್ಲಿ ಚಲನಚಿತ್ರವನ್ನು ವೀಕ್ಷಿಸಿದ್ದೇನೆ ಎಂದು ಬರೆದಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
"ಲ್ಯಾಪ್ಟಾಪ್ನಲ್ಲಿ, ಎನ್ಸಿಆರ್ಬಿ ಹೆಸರಿನಲ್ಲಿ ಅವರು ಅನಧಿಕೃತ ವೆಬ್ಸೈಟ್ಗೆ ಪ್ರವೇಶಿಸಿದ್ದರಿಂದ, ಅವರು ರೂ 30,000 ಕ್ಕಿಂತ ಹೆಚ್ಚು ಮೊತ್ತವನ್ನು ದಂಡವಾಗಿ ಪಾವತಿಸಬೇಕು. ದಂಡ ಪಾವತಿಸದಿದ್ದರೆ ಅದು ದೊಡ್ಡ ಮೊತ್ತದ ದಂಡ ಮತ್ತು ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದೂ ಎಚ್ಚರಿಸಲಾಗಿತ್ತು. ಈ ಸಂದೇಶ ಹುಡುಗನನ್ನು ಹೆದರಿಸಿದಂತಿದೆ ಎಂದು ಅವರು ಶಂಕಿಸಿದ್ದಾರೆ.
ಇದನ್ನೂ ಓದಿ: ವೈದ್ಯಕೀಯ ಲೋಕದ ವಿಚಿತ್ರ ಕೇಸ್: ವ್ಯಕ್ತಿಯ ಹೊಟ್ಟೆಯಲ್ಲಿತ್ತು ರಾಖಿ, ಇಯರ್ಫೋನ್, ಕೀ ಸೇರಿ 100 ವಸ್ತುಗಳು
ಪೊಲೀಸರು ಲ್ಯಾಪ್ಟಾಪ್ನ ಬ್ರೌಸರ್ ಇತಿಹಾಸವನ್ನು ಪರಿಶೀಲಿಸಿದ್ದಾರೆ. ಆದರೆ ಮೃತ ವಿದ್ಯಾರ್ಥಿ ಯಾವುದೇ ಅಕ್ರಮ ವೆಬ್ಸೈಟ್ಗೆ ಪ್ರವೇಶಿಸಿರುವ ಯಾವುದೇ ಸೂಚನೆಯಿಲ್ಲ. ಅಂತೆಯೇ ಬ್ರೌಸರ್ ಹಿಸ್ಚರಿ ಅಳಿಸಲಾಗಿದೆಯೇ ಎಂದು ನಮಗೆ ತಿಳಿದಿಲ್ಲ ... ಆದರೆ ಹೇಗಾದರೂ ಸತ್ಯವನ್ನು ಹೊರತರಲು ವಿವರವಾದ ವೈಜ್ಞಾನಿಕ ತನಿಖೆಯ ಅಗತ್ಯವಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಬಾಲಕನ ಸಾವಿನ ನಂತರ ಬೇರೆ ಮನೆಗೆ ಸ್ಥಳಾಂತರಗೊಂಡ ಬಾಲಕನ ಪೋಷಕರಿಂದ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಸಂಗ್ರಹಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.