ಸಂಜಯ್ ಸಿಂಗ್
ಸಂಜಯ್ ಸಿಂಗ್ 
ದೇಶ

ಶರತ್ ರೆಡ್ಡಿ ಬಿಜೆಪಿಗೆ 60 ಕೋಟಿ ರೂ. ದೇಣಿಗೆ; ಆದರೂ ಇಡಿ ಕ್ರಮ ಕೈಗೊಂಡಿಲ್ಲ: AAP

Lingaraj Badiger

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಆರೋಪಿಯಿಂದ ಬಿಜೆಪಿ 60 ಕೋಟಿ ರೂಪಾಯಿ ದೇಣಿಗೆ ಪಡೆದಿದ್ದರೂ ಜಾರಿ ನಿರ್ದೇಶನಾಲಯ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಶನಿವಾರ ಕೇಸರಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಂಗ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ತಾವು ಸೇರಿದಂತೆ ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.

"ಇಡಿ ತನ್ನ ಚಾರ್ಜ್ ಶೀಟ್‌ನಲ್ಲಿ ಅಬಕಾರಿ ಹಗರಣದ ಕಿಂಗ್‌ಪಿನ್ ಎಂದು ಕರೆದಿರುವ ಶರತ್ ರೆಡ್ಡಿ, ಚುನಾವಣಾ ಬಾಂಡ್‌ಗಳ ಮೂಲಕ 60 ಕೋಟಿ ರೂ.ಗಳನ್ನು ನೀಡಿದ್ದಾರೆ. ಆದರೆ ಈ ವಿಷಯದಲ್ಲಿ ಇಡಿ ಯಾರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಸಿಂಗ್ ಆರೋಪಿಸಿದ್ದಾರೆ.

ಈ ಬಗ್ಗೆ ರೆಡ್ಡಿ ಅಥವಾ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಬಕಾರಿ ಹಗರಣದಲ್ಲಿ ಬಂಧನಕ್ಕೊಳಗಾದ ನಂತರ, ಶರತ್ ರೆಡ್ಡಿ ಅವರು ನವೆಂಬರ್ 15, 2022 ರಂದು ಬಿಜೆಪಿಗೆ 5 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

ಆರು ತಿಂಗಳ ಜೈಲುವಾಸದ ನಂತರ, ರೆಡ್ಡಿ ಮೇ 8, 2023 ರಂದು ಜಾಮೀನು ಪಡೆದರು ಮತ್ತು ಮುಂದಿನ ಕೆಲವೇ ದಿನಗಳಲ್ಲಿ ಅವರು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 50 ಕೋಟಿ ರೂ. ನೀಡಿದರು ಎಂದು ಎಎಪಿ ಸಂಸದ ಆರೋಪಿಸಿದ್ದಾರೆ.

ರೆಡ್ಡಿ ಬಂಧನಕ್ಕೂ ಮುನ್ನ 2022ರಲ್ಲಿ ಬಿಜೆಪಿಗೆ 5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.

SCROLL FOR NEXT