ಶಿಮ್ಲಾದಲ್ಲಿ ಡಿಕೆ ಶಿವಕುಮಾರ್ ಮತ್ತಿತರರು
ಶಿಮ್ಲಾದಲ್ಲಿ ಡಿಕೆ ಶಿವಕುಮಾರ್ ಮತ್ತಿತರರು 
ದೇಶ

ಹಿಮಾಚಲ ಬಿಕ್ಕಟ್ಟು: ಸಿಂಘ್ವಿ ಸೋಲಿನ ಹೊಣೆ ಸುಖ್ ಹೆಗಲಿಗೆ, ಬಗೆಹರಿದ ಭಿನ್ನಾಭಿಪ್ರಾಯ- ಡಿಕೆ ಶಿವಕುಮಾರ್

Nagaraja AB

ಶಿಮ್ಲಾ: ರಾಜ್ಯಸಭಾ ಚುನಾವಣೆಯಲ್ಲಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲಿನ ಹೊಣೆಯನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ ಹೊತ್ತುಕೊಂಡಿದ್ದು, ಪಕ್ಷದ ಶಾಸಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ನಂತರ ಎಲ್ಲಾ ಭಿನ್ನಾಭಿಪ್ರಾಯಗಳು ಬಗೆಹರಿದಿವೆ ಎಂದು ಕಾಂಗ್ರೆಸ್ ಕೇಂದ್ರ ವೀಕ್ಷಕರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.

ಪಕ್ಷದ ಇತರ ವೀಕ್ಷಕರಾದ ಭೂಪೇಂದರ್ ಹೂಡಾ ಅವರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಇರುತ್ತದೆ ಎಂದರು. ಸುಖ್ ಸಿಎಂ ಆಗಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೂಡಾ, “ಸುಖ್ ಸಿಎಂ ಆಗಿರುವಾಗ ಏಕೆ ಕಾಲ್ಪನಿಕ ಪ್ರಶ್ನೆ ಕೇಳುತ್ತಿದ್ದೀರಿ? ಎಂದರು.

ಕೇಂದ್ರ ವೀಕ್ಷಕರು ಸುಖ್, ಪಕ್ಷದ ಶಾಸಕರು ಮತ್ತು ರಾಜ್ಯ ಘಟಕದ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರೊಂದಿಗೆ ಮಾತನಾಡಿದ್ದು, ಎಲ್ಲಾ ಭಿನ್ನಾಭಿಪ್ರಾಯಗಳನ್ನು ನಿವಾರಿಸಲಾಗಿದೆ. ಎಲ್ಲಾ ಆಂತರಿಕ ವಿಷಯಗಳನ್ನು ಬಗೆಹರಿಸಲು ಸಮನ್ವಯ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಬುಧವಾರ ರಾಜೀನಾಮೆ ನೀಡಲು ಮುಂದಾಗಿದ್ದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್, ರಾಜೀನಾಮೆ ನೀಡಲ್ಲ ಎಂದು ಹೇಳಿದ್ದು, ಸಂಜೆಯ ನಂತರ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಿಸ್ತು ಕಾಯ್ದುಕೊಳ್ಳುವುದು ಕಾಂಗ್ರೆಸ್‌ನ ಮೊದಲ ಆದ್ಯತೆಯಾಗಿದೆ. ಸರ್ಕಾರವು ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿದೆ ಮತ್ತು ಪಕ್ಷದ ಎಲ್ಲಾ ಶಾಸಕರು ಮತ್ತು ಇತರ ನಾಯಕರು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ವೀಕ್ಷಕರು ತಿಳಿಸಿದರು.

ಹಿಮಾಚಲ ಪ್ರದೇಶದ ಏಕೈಕ ಸ್ಥಾನಕ್ಕೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರು ಕಾಂಗ್ರೆಸ್ ಶಾಸಕರನ್ನು ಹಿಮಾಚಲ ಪ್ರದೇಶದ ವಿಧಾನಸಭಾ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅನರ್ಹಗೊಳಿಸಿದ ನಂತರ ಕಾಂಗ್ರೆಸ್ ವೀಕ್ಷಕರು ಈ ಘೋಷಣೆಗಳನ್ನು ಮಾಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಪ್ರತಿಭಾ ಸಿಂಗ್, ಬಂಡಾಯ ಶಾಸಕರ ಅಸಮಾಧಾನವನ್ನು ನಿವಾರಿಸಿದ್ದರೆ ಆರು ಶಾಸಕರ ಅನರ್ಹತೆಯನ್ನು ತಪ್ಪಿಸಬಹುದಿತ್ತು. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದು ದುರದೃಷ್ಟಕರ ಎಂದರು.

ಪಕ್ಷ ಪ್ರಬಲವಾಗಿದ್ದು, ಭಿನ್ನಾಭಿಪ್ರಾಯಗಳನ್ನು ಪರಿಹರಿಸಲಾಗಿದೆ. ಸಮಿತಿಯು ರಾಜ್ಯ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯವನ್ನು ಖಚಿತಪಡಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲುವುದು ಸವಾಲಾಗಿದ್ದು, ಅದಕ್ಕಾಗಿ ನಾವು ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಸ್ಥಿರವಾಗಿದೆ ಮತ್ತು ಐದು ವರ್ಷಗಳ ಕಾಲ ಮುಂದುವರಿಯುತ್ತದೆ ಮತ್ತು ಬಂಡಾಯ ಕಾಂಗ್ರೆಸ್ ಶಾಸಕರು ಸಾರ್ವಜನಿಕರನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಅವರು ಹಿಂತಿರುಗಲು ಬಯಸಿದರೆ

ತಪ್ಪುಗಳನ್ನು ಕ್ಷಮಿಸಬಹುದು ಆದರೆ ಅವರ ಮೊಬೈಲ್ ಫೋನ್‌ಗಳು ತಲುಪದ ಕಾರಣ ಅವರನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

ತಮ್ಮ ರಾಜೀನಾಮೆಗೆ ಸಂಬಂಧಿಸಿದ ವದಂತಿಗಳನ್ನು ಉಲ್ಲೇಖಿಸಿದ ಸುಖ್, ಇದು ಬಜೆಟ್ ಮೇಲಿನ ಮತದಾನದ ಸಮಯದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆಯನ್ನು ಕಡಿಮೆ ಮಾಡುವ ಪಿತೂರಿಯಾಗಿದೆ ಮತ್ತು "ನಾನು ರಾಜೀನಾಮೆ ನೀಡಿಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.

SCROLL FOR NEXT