ದೇಶ

ಇಡಿ ಅಧಿಕಾರಿಗಳ ಮೇಲೆ ದಾಳಿ: ಟಿಎಂಸಿ ನಾಯಕ ಅಧ್ಯ ಬಂಧನ, ನಾಯಕನ ಉಗ್ರರ ಸಂಪರ್ಕ ಕುರಿತು ತನಿಖೆ ನಡೆಸಿ ಎಂದ ರಾಜ್ಯಪಾಲ

Srinivasamurthy VN

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕನನ್ನು ಬಂಧಿಸಲಾಗಿದ್ದು, ಆತನ ಉಗ್ರ ಸಂಘಟನೆಗಳೊಂದಿಗಿನ ಸಂಪರ್ಕದ ಕುರಿತು ತನಿಖೆ ನಡೆಸುವಂತೆ ಬಂಗಾಳ ರಾಜ್ಯಪಾಲರು ಸೂಚನೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಪಡಿತರ ಹಗರಣದ ತನಿಖೆಗೆ ಆಗಮಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಮೇಲೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆನ್ನಲ್ಲೇ ಹಗರಣದ ಆರೋಪಿ ಹಾಗೂ ಬೊಂಗಾವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯ ಅವರನ್ನು ಶನಿವಾರ ಮಧ್ಯರಾತ್ರಿ ಇ.ಡಿ. ಬಂಧಿಸಿದೆ.

ಅಂತೆಯೇ ಪರಾರಿಯಾಗಿರುವ ಹಗರಣದ ಇನ್ನೊಬ್ಬ ಆರೋಪಿ ಹಾಗೂ ತೃಣಮೂಲ ಕಾಂಗ್ರೆಸ್‌ ನಾಯಕ ಶಹಜಹಾನ್‌ ಶೇಖ್‌ ವಿರುದ್ಧ ಶನಿವಾರ ಇ.ಡಿ. ಲುಕೌಟ್‌ ನೋಟಿಸ್‌ ಜಾಗೊಳಿಸಿದೆ. ಆಧ್ಯ ಅವರನ್ನು ತೀವ್ರ ಶೋಧದ ಬಳಿಕ ಇ.ಡಿ. ಬಂಧಿಸಿದರೆ, ಶೇಖ್‌ಗೆ ಹುಡುಕಾಟ ಮುಂದುವರಿದಿದೆ. ಗುರುವಾರ ರಾತ್ರಿ ಇ.ಡಿ. ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಡಿತರ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಾ ಮತ್ತು ಶೇಖ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದರು. ಆಗ ಅಧಿಕಾರಿಗಳ ಮೇಲೆ ಸಾವಿರಾರು ತೃಣಮೂಲ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿದ್ದರು. 

ಟಿಎಂಸಿ ನಾಯಕನ ಉಗ್ರರ ಸಂಪರ್ಕ ಕುರಿತು ತನಿಖೆ ನಡೆಸಿ ಎಂದ ರಾಜ್ಯಪಾಲ
ಇನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಗಡಿ ದಾಟಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್, ಕೂಡಲೇ ಆತನನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ ಆರೋಪಿಗಳ ಭಯೋತ್ಪಾದಕರ ಜತೆಗಿನ ನಂಟಿನ ಕುರಿತು ತನಿಖೆ ನಡೆಸುವಂತೆ ಡಿಜಿಪಿಗೆ ಸೂಚನೆ ನೀಡಿದ್ದಾರೆ. .

ಶೇಖ್‌ಗೆ ಭಯೋತ್ಪಾದಕರೊಂದಿಗೆ ಸಂಪರ್ಕವಿದೆ ಎಂಬ ಅವರ ಹೇಳಿಕೆಯು ಭಾನುವಾರ ಆಡಳಿತಾರೂಢ ಟಿಎಂಸಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಶಾಂತಿ ಕೊಠಡಿಯಲ್ಲಿ ದೂರು ಸ್ವೀಕರಿಸಿದ ರಾಜ್ಯಪಾಲರು ಅಪರಾಧಿಯನ್ನು ತ್ವರಿತವಾಗಿ ಬಂಧಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ರಾಜಭವನದ ಶಾಂತಿ ಕೊಠಡಿಯಲ್ಲಿ ಷಹಜಹಾನ್‌ ಶೇಖ್‌ಗೆ ಕೆಲವು ರಾಜಕೀಯ ಮುಖಂಡರು ಬೆಂಬಲ ನೀಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ರಾಜ್ಯಪಾಲರು ಆರೋಪಿಯನ್ನು ಕೂಡಲೇ ಬಂಧಿಸಿ ವರದಿ ನೀಡುವಂತೆ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದರು. ಶೇಖ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರು ಒತ್ತಿ ಹೇಳಿದರು.
 

SCROLL FOR NEXT