ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ 
ದೇಶ

ಹುಲಿ ಮೀಸಲು ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣ: ಮಾಜಿ ಅರಣ್ಯ ಸಚಿವನ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!

Manjula VN

ನವದೆಹಲಿ: ಜಿಮ್‌ ಕಾರ್ಬೆಟ್‌ ಹುಲಿ ಮೀಸಲು ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲು ಬೇಕಾಬಿಟ್ಟಿಯಾಗಿ ಮರ ಕಡಿದ ಆರೋಪದಲ್ಲಿ ಸುಪ್ರೀಂ ಕೋರ್ಟ್‌, ಉತ್ತರಾಖಂಡದ ಮಾಜಿ ಅರಣ್ಯ ಸಚಿವ ಹರಕ್‌ ಸಿಂಗ್‌ ರಾವತ್‌ ಹಾಗೂ ಮಾಜಿ ಡಿಎಫ್‌ಓ ಕಿಶನ್‌ ಚಂದ್‌ ಅವರನ್ನು ಸುಪ್ರೀಂಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.

ವಿಶ್ವ ವಿಖ್ಯಾತ ಜಿಮ್‌ ಕಾರ್ಬೆಟ್‌ ಹುಲಿ ಮೀಸಲು ಅರಣ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉತ್ತರಾಖಂಡದ ಮಾಜಿ ಅರಣ್ಯ ಸಚಿವ ಹರಕ್‌ ಸಿಂಗ್‌ ರಾವತ್‌ ಹಾಗೂ ಡಿಎಫ್‌ಓ ಕಿಶನ್‌ ಚಂದ್‌, ಬೇಕಾಬಿಟ್ಟಿಯಾಗಿ ಮರಗಳನ್ನು ಕಡಿದು ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರು.

ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮಾಜಿ ಅರಣ್ಯ ಸಚಿವ ಹರಕ್‌ ಸಿಂಗ್‌ ರಾವತ್‌ ಹಾಗೂ ಡಿಎಫ್‌ಓ ಕಿಶನ್‌ ಚಂದ್‌ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐಗೆ ಸ್ಪಷ್ಟ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್‌, ಮುಂದಿನ3 ತಿಂಗಳ ಒಳಗಾಗಿ ಈ ಪ್ರಕರಣದ ಸ್ಥಿತಿಗತಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ, ಇದು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಾರ್ವಜನಿಕ ನಂಬಿಕೆಯನ್ನು ಸಂಪೂರ್ಣವಾಗಿ ಕಸದ ಬುಟ್ಟಿಗೆ ಎಸೆದಿರುವ ಘಟನೆ ಇದಾಗಿದೆ ಎಂದು ಆದೇಶ ನೀಡುವಾಗ ಸುಪ್ರೀಂ ಕೋರ್ಟ್‌ ಕಟು ಪದಗಳನ್ನು ಬಳಸಿದೆ.

“ಅವರು (ರಾವತ್‌ ಮತ್ತು ಚಾಂದ್)‌ ಕಾನೂನನ್ನು ಉಲ್ಲಂಘಿಸಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದ ನೆಪದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಸಾಮೂಹಿಕ ಮರಗಳ ಕಡಿತಕ್ಕೆ ಅನುಮತಿಸಿದ್ದರು. ಆದರೆ, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಸ್ತುತ ಪ್ರಕರಣದಲ್ಲಿ, ಆಗಿನ ಅರಣ್ಯ ಸಚಿವರು ತಾವು ಕಾನೂನಿಗೆ ಅತೀತರು ಎಂದು ಪರಿಗಣಿಸಿದ್ದರು ಎನ್ನುವುದು ನಿಸ್ಸಂದೇಹವಾಗಿ ಗೊತ್ತಾಗುತ್ತಿದೆ. ಅವರೊಂದಿಗೆ ಡಿಎಫ್‌ಓ ಕಿಶನ್‌ ಚಂದ್‌ ಕೂಡ ಸಾರ್ವಜನಿಕರ ನಂಬಿಕೆಯನ್ನು ಗಾಳಿಗೆ ತೂರಿಸಿದ್ದಾರೆ. ಸ್ವಲ್ಪ ಸಡಿಲ ಬಿಟ್ಟರೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹೇಗೆ ಕಾನೂನನ್ನು ತಮ್ಮ ಕೈಗಳಲ್ಲಿ ಆಡಿಸುತ್ತಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ' ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಇವರು ಮಾತ್ರವೇ ಅಲ್ಲ, ಇನ್ನೂ ಅನೇಕರು ಭಾಗಿಯಾಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಆದರೆ, ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ನಾವು ಹೆಚ್ಚೇನೂ ಹೇಳುತ್ತಿಲ್ಲ" ಎಂದು ತಿಳಿಸಿದೆ.

ಹರಕ್‌ ಸಿಂಗ್‌ ರಾವತ್‌ಗೆ ನಂಟು ಹೊಂದಿದ ಅರಣ್ಯ ಹಗರಣವೊಂದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೆಲ ದಿನಗಳ ಹಿಂದೆ ದೆಹಲಿ, ಉತ್ತರಾಖಂಡ ಮತ್ತು ಚಂಡೀಗಢದ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ರಾವತ್‌ ಅವರ ಡಿಫೆನ್ಸ್‌ ಕಾಲನಿ ನಿವಾಸ ಮತ್ತು ಡೆಹ್ರಾಡೂನ್‌ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲೂ ಇಡಿ ಶೋಧ ನಡೆಸಿತ್ತು.

ಕಾರ್ಬೆಟ್‌ ನ್ಯಾಷನಲ್‌ ಪಾರಕ್‌ ವ್ಯಾಪ್ತಿ ಪಖ್ರೋ ಹುಲಿ ಸಂರಕ್ಷಿತ ಪ್ರದೇಶದಲ್ಲಿ 2019ರಲ್ಲಿ ಸಾವಿರಾರು ಮರಗಳ ಮಾರಣಹೋಮ, ಆರ್ಥಿಕ ಅವ್ಯವಹಾರಗಳು ಮತ್ತು ಅಕ್ರಮ ನಿರ್ಮಾಣ ಕುರಿತ ಪ್ರಕರಣ ಸಂಬಂಧ ಈಡಿ ದಾಳಿ ನಡೆಸಿತ್ತು.

ರಾವತ್‌ ಅವರು ಆಗಿನ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗ ಪಖ್ರೋ ಹುಲಿ ಸಂರಕ್ಷಿತ ಪ್ರದೇಶ ಅಭಿವೃದ್ಧಿ ಅವರ ನೆಚ್ಚಿನ ಯೋಜನೆಯಾಗಿತ್ತು. ಆದರೆ 2022 ಉತ್ತರಾಖಂಡ ವಿಧಾನಸಭಾ ಚುನಾವಣೆ ವೇಳೆ ಅವರು ಕಾಂಗ್ರೆಸ್‌ ಸೇರಿದ್ದರು. ಇದಕ್ಕೂ ಮುನ್ನ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಲಾಗಿತ್ತಲ್ಲದೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅವರನ್ನು ಅಮಾನತುಗೊಳಿಸಲಾಗಿತ್ತು.

SCROLL FOR NEXT