ಮುಂಬೈ: ಎನ್ಸಿಪಿ(ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್ ಒಡೆತನದ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.
ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್(MSCB) ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯ ಭಾಗವಾಗಿ ಈ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಔರಂಗಾಬಾದ್ ಜಿಲ್ಲೆಯ ಕನ್ನಡ್ ಗ್ರಾಮದಲ್ಲಿ ನೆಲೆಗೊಂಡಿರುವ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನಾ ಲಿಮಿಟೆಡ್ನ(ಕನ್ನಡ ಎಸ್ಎಸ್ಕೆ) ಒಟ್ಟು 161.30 ಎಕರೆ ಭೂಮಿ, ಸ್ಥಾವರ, ಯಂತ್ರೋಪಕರಣಗಳು ಮತ್ತು ಕಟ್ಟಡವನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಕ್ಕರೆ ಕಾರ್ಖಾನೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ಶರದ್ ಪವಾರ್ ಬಣದ ಶಾಸಕರೂ ಆಗಿರುವ ರೋಹಿತ್ ಪವಾರ್ ಅವರ ಕಂಪನಿಯಾದ ಬಾರಾಮತಿ ಆಗ್ರೋ ಲಿಮಿಟೆಡ್ ಒಡೆತನದಲ್ಲಿದೆ.