ಪ್ರಾತಿನಿಧಿಕ ಚಿತ್ರ 
ದೇಶ

ರಾಜಸ್ಥಾನ: 'ಕುಟುಂಬ, ಪರೀಕ್ಷೆ ಕಾರಣವಲ್ಲ!'; ಬಿಹಾರ ಮೂಲದ ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ

ಬಿಹಾರದ ಛಪ್ರಾ ಮೂಲದ ವಿದ್ಯಾರ್ಥಿ ಸುಮಾರು ಒಂದು ವರ್ಷದಿಂದ ಇಲ್ಲಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್-ಯುಜಿಗೆ ತಯಾರಿ ನಡೆಸುತ್ತಿದ್ದರು.

ಕೋಟಾ (ರಾಜಸ್ಥಾನ): ಬಿಹಾರದ 18 ವರ್ಷದ ನೀಟ್ ಆಕಾಂಕ್ಷಿ ಮಂಗಳವಾರ ಮುಂಜಾನೆ ಇಲ್ಲಿನ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿಯಲ್ಲಿ ಪತ್ತೆಯಾಗಿರುವ ಡೆತ್‌ನೋಟ್‌ನಲ್ಲಿ, ತನ್ನ ಕುಟುಂಬವಾಗಲಿ ಅಥವಾ ನೀಟ್-ಯುಜಿಗೆ ತಾನು ತಯಾರಿ ನಡೆಸಿದ್ದಾಗಲಿ ಆತ್ಮಹತ್ಯೆಗೆ ಕಾರಣವಲ್ಲ ಎಂದು ವಿದ್ಯಾರ್ಥಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿಹಾರದ ಛಪ್ರಾ ಮೂಲದ ವಿದ್ಯಾರ್ಥಿ ಸುಮಾರು ಒಂದು ವರ್ಷದಿಂದ ಇಲ್ಲಿನ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್-ಯುಜಿಗೆ ತಯಾರಿ ನಡೆಸುತ್ತಿದ್ದರು. ಲ್ಯಾಂಡ್‌ಮಾರ್ಕ್ ಸಿಟಿ ಪ್ರದೇಶದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಕುನ್ಹಾಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅರವಿಂದ್ ಭಾರದ್ವಾಜ್ ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ತನ್ನ ಸಹೋದರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಸೋದರಿ ಹಾಸ್ಟೆಲ್ ಕೇರ್‌ಟೇಕರ್‌ಗೆ ಕರೆ ಮಾಡಿ ತನ್ನ ಸಹೋದರನ ಕೋಣೆಯನ್ನು ಪರಿಶೀಲಿಸುವಂತೆ ಕೇಳಿದ್ದಾರೆ ಎಂದು ಭಾರದ್ವಾಜ್ ಹೇಳಿದರು.

ಕೇರ್‌ಟೇಕರ್ ಬಂದು ಕೋಣೆಯ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಹಾಸ್ಟೆಲ್ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ನಲ್ಲಿ ಆತ್ಮಹತ್ಯೆ ನಿಗ್ರಹ ಸಾಧನ ಅಳವಡಿಸಲಾಗಿದ್ದರೂ, ವಿದ್ಯಾರ್ಥಿ ಹಗ್ಗವನ್ನು ಆ ಸಾಧನದ ಮೇಲಿರುವ ಕಬ್ಬಿಣದ ಕೊಕ್ಕೆಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ವಿದ್ಯಾರ್ಥಿಯು, ತನ್ನ ನಿರ್ಧಾರಕ್ಕೆ ತನ್ನ ಕುಟುಂಬ ಅಥವಾ ನೀಟ್ ಪರೀಕ್ಷೆಯನ್ನು ದೂಷಿಸಬಾರದು ಎಂದು ಬರೆದಿದ್ದು, ನಿಖರ ಕಾರಣ ಏನೆಂಬುದನ್ನು ತಿಳಿಸಿಲ್ಲ. ಅಲ್ಲದೆ, ತನ್ನ ಹೆಸರು, ಕುಟುಂಬದ ವಿವರಗಳು ಅಥವಾ ಛಾಯಾಚಿತ್ರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳದಂತೆ ವಿನಂತಿಸಿದ್ದಾರೆ ಎಂದು ಭಾರದ್ವಾಜ್ ಹೇಳಿದರು.

ಮೃತದೇಹವನ್ನು ಎಂಬಿಎಸ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದ್ದು, ಅವರ ಕುಟುಂಬ ಸದಸ್ಯರು ಇಲ್ಲಿಗೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದರು.

ದೇಶದ ಕೋಚಿಂಗ್ ಕೇಂದ್ರವಾದ ಕೋಟಾದಲ್ಲಿ ಈ ವರ್ಷ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ 11ನೇ ಪ್ರಕರಣ ಇದಾಗಿದೆ. ಕಳೆದ ವರ್ಷ ಈ ಸಂಖ್ಯೆ 17 ರಷ್ಟಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Guarantee scheme: ಅರ್ಹವಲ್ಲದ ಫಲಾನುಭವಿಗಳ ಕೈಬಿಟ್ಟು ಹಣ ಉಳಿತಾಯಕ್ಕೆ ಸರ್ಕಾರ ಮುಂದು; ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಕಡಿತ?

ಅಧಿಕಾರ ಹಸ್ತಾಂತರ ಗೊಂದಲ, ನಾಯಕರ ಹೇಳಿಕೆಗಳು: ವಿದೇಶಕ್ಕೆ ಹಾರಿದ ಸಿದ್ದು ಬಣದ 11 ಮಂದಿ 'ಕೈ' ಶಾಸಕರು

ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ದರೋಡೆ!

ಕಾಂಗ್ರೆಸ್ ಭವನಕ್ಕಾಗಿ ಸರ್ಕಾರಿ ಭೂಮಿ ಗುಳುಂ: ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಹೇಗೆ ಲಭ್ಯವಾಯಿತು? ಸರ್ಕಾರದ ವಿರುದ್ಧ BJP ಗಂಭೀರ ಆರೋಪ

SSLC, PUC Exam 2026: ಪರೀಕ್ಷೆ ಜೊತೆಗೆ ಫಲಿತಾಂಶ ದಿನಾಂಕ ಪ್ರಕಟ, 16 ಲಕ್ಷ ವಿದ್ಯಾರ್ಥಿಗಳು ನೋಂದಣಿ

SCROLL FOR NEXT