ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವಿನ ಭೇಟಿ ವೇಳೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಾತುಕತೆ ಫಲ ಪ್ರದವಾಗಿದೆ ಎಂದು ಹೇಳಲಾಗುತ್ತಿದೆ.
ಅನೇಕ ರಂಗಗಳಲ್ಲಿ ಉಭಯ ರಾಷ್ಟ್ರಗಳ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕೂಡಾ ಹೇಳಿದ್ದಾರೆ. ಆದಾಗ್ಯೂ, ಪಾಕಿಸ್ತಾನ ಮಂಗಳವಾರ ಭಾರತಕ್ಕೆ ದೊಡ್ಡ ಶಾಕ್ ನೀಡಿದೆ.
ಚೀನಾ ವಿದೇಶಾಂಗ ಸಚಿವರು ದೋವಲ್, ಜೈಶಂಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ ಬೆನ್ನಲ್ಲೇ ಆಗಸ್ಟ್ 21 ರಂದು ಇಸ್ಲಾಮಾಬಾದ್ ಗೆ ತೆರಳುತ್ತಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದು ಭಾರತದ ಕಳವಳಕ್ಕೆ ಕಾರಣವಾಗಿದೆ.
ಈ ಸಂಬಂಧ ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ, ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಆಹ್ವಾನದ ಮೇರೆಗೆ 6ನೇ ಪಾಕಿಸ್ತಾನ-ಚೀನಾ ವಿದೇಶಾಂಗ ಸಚಿವರ ಕಾರ್ಯತಂತ್ರ ಮಾತುಕತೆಯಲ್ಲಿ ಪಾಲ್ಗೊಳ್ಳಲು ಚೀನಾ ವಿದೇಶಾಂಗ ಸಚಿವರು ಆಗಸ್ಟ್ 21 ರಂದು ಇಸ್ಲಾಮಾಬಾದ್ ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.
ಪಾಕಿಸ್ತಾನ ಮತ್ತು ಚೀನಾ ನಡುವಿನ ಕಾರ್ಯತಂತ್ರದ ಸಹಕಾರದ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಆರ್ಥಿಕ-ವ್ಯಾಪಾರ ಕ್ಷೇತ್ರದಲ್ಲಿ ಬೆಂಬಲ ಹೆಚ್ಚಳ ಹಾಗೂ ಪ್ರಾದೇಶಿಕ ಶಾಂತಿ, ಅಭಿವೃದ್ಧಿ ಮತ್ತು ಸ್ಥಿರತೆಯಲ್ಲಿ ಉಭಯ ರಾಷ್ಟ್ರಗಳ ಬದ್ಧತೆಯ ಭಾಗವಾಗಿ ಚೀನಾ ವಿದೇಶಾಂಗ ಸಚಿವರು ಇಸ್ಲಾಮಾಬಾದ್ ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಈ ಕಾರ್ಯತಂತ್ರದ ಮಾತುಕತೆಯು ಮತ್ತೊಮ್ಮೆ 'ಆಪರೇಷನ್ ಸಿಂಧೂರ' ದಲ್ಲಿ ಚೀನಾದ ಪಾತ್ರವನ್ನು ಗುರುತಿಸಿದೆ. ಇತ್ತೀಚೆಗಷ್ಟೇ ಸೇನಾಪಡೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್ ಸಿಂಗ್ ಅವರು ಕಾರ್ಯಾಚರಣೆಯ ವೇಳೆ ಭಾರತೀಯ ಸೇನಾ ನೆಲೆಗಳ ಬಗ್ಗೆ ಚೀನಾ, ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿ ನೀಡುತಿತ್ತು ಎಂದು ಆರೋಪಿಸಿದ್ದರು.
ಪಾಕಿಸ್ತಾನದ ಮಿಲಿಟರಿ ಉಪಕರಣಗಳಲ್ಲಿ ಶೇ. 81 ರಷ್ಟು ಚೀನಾ ದೇಶಕ್ಕೆ ಸೇರಿವೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಡಿ ಪಾಕಿಸ್ತಾನದಲ್ಲಿ ಚೀನಾ ಗಮನಾರ್ಹ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ. ಅಲ್ಲದೇ ಪ್ರಮುಖ ಮಿತ್ರ ರಾಷ್ಟ್ರವಾದ ಪಾಕಿಸ್ತಾನಕ್ಕೆ ಶಸಾಸ್ತ್ರಗಳು, ಯುದ್ಧ ವಿಮಾನಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತಿತರ ಉಪಕರಣಗಳನ್ನು ಚೀನಾ ಪೂರೈಸಿದೆ.
ಹೀಗೆ ವಾಂಗ್ ಯಿ ನವದೆಹಲಿಯಲ್ಲಿ ವಾಂಗ್ ಯಿ ಭಾರತದ ಉನ್ನತ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವಂತೆಯೇ ಇಸ್ಲಾಮಾಬಾದ್ ನಲ್ಲಿ ಅವರಿಗೆ ಆತಿಥ್ಯ ನೀಡಲು ಪಾಕಿಸ್ತಾನ ಸಜ್ಜಾಗಿದೆ. ಇದು ಸಾಕಷ್ಟು ಅನುಮಾನ ಹಾಗೂ ಕಳವಳಕ್ಕೆ ಕಾರಣವಾಗಿದೆ.