ಅಹಮದಾಬಾದ್: 3 ವರ್ಷದ ಬಾಲಕನೊಬ್ಬನ ಅಪಹರಣ ಮತ್ತು ಹತ್ಯೆ ಪ್ರಕರಣದಿಂದ ಗುಜರಾತಿನ ಸೂರತ್ ನಗರವನ್ನು ಬೆಚ್ಚಿ ಬೀಳಿಸಿದೆ. ಬಾಲಕನ ಸಂಬಂಧಿಯೇ ಪ್ರಮುಖ ಆರೋಪಿಯಾಗಿದ್ದು, ತಾಯಿಯ ಮೊಬೈಲ್ ಫೋನ್ನೊಂದಿಗೆ ಪರಾರಿಯಾಗುವ ಮುನ್ನಾ ಬಾಲಕನ ದೇಹವನ್ನು ಮುಂಬೈನ ರೈಲೊಂದರ ಶೌಚಾಲಯದಲ್ಲಿ ಎಸೆದಿದ್ದಾನೆ. ಆತನ ಪತ್ತೆಗಾಗಿ ಅನೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಮಹಾರಾಷ್ಟ್ರ ಮತ್ತು ಬಿಹಾರದಾದ್ಯಂತ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಸೂರತ್ ನ ಅಮ್ರೋಲಿ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಪೊಲೀಸರು ಇದೀಗ ಆರೋಪಿ 26 ವರ್ಷದ ವಿಕಾಸ್ಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಗಸ್ಟ್ 21 ರಂದು ಬಿಹಾರದಿಂದ ಸೂರತ್ನ ಅಮ್ರೋಲಿ ಪ್ರದೇಶದಲ್ಲಿರುವ ತನ್ನ ಚಿಕ್ಕಮ್ಮ ದುರ್ಗಾದೇವಿ ಮನೆಯಲ್ಲಿ ಇರಲು ಬಂದ ವಿಕಾಸ್, ಆಕೆಯ ಮಗ ಆಕಾಶ್ ಆಲಿಯಾಸ್ ಆರಾವ್ ನನ್ನು ಆಟವಾಡಲು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾನೆ.
ತದನಂತರ ದುರ್ಗಾದೇವಿ ಮೊಬೈಲ್ ಫೋನ್ ನೊಂದಿಗೆ ಇಬ್ಬರು ನಾಪತ್ತೆಯಾಗಿದ್ದರು. ಕೆಲವು ದಿನಗಳ ನಂತರ ಮುಂಬೈಯ ಲೋಕಮಾನ್ಯ ತಿಲಕ್ ನಿಲ್ದಾಣದಲ್ಲಿ ರೈಲಿನ ಟಾಯ್ಲೆಟ್ ನ ಕಸದ ಡಬ್ಬಿಯಲ್ಲಿ ಆಕಾಶ್ ಮೃತದೇಹ ಪತ್ತೆಯಾಗಿದೆ. ಬಾಲಕನ ಕುತ್ತಿಗೆಗೆ ಹಗ್ಗ ಬಿಗಿದು ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು.
ಬಿಹಾರದ ಸಿವಾನ್ ಮೂಲದ ಆರೋಪಿ ಹತ್ಯೆ ಮಾಡಿದ ತಕ್ಷಣ ಪರಾರಿಯಾಗಿದ್ದಾನೆ. ಈ ಹಿಂದೆ ಆತನ ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್ನಂತಹ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡಿದ್ದ ಎನ್ನಲಾಗಿದೆ. ಅಲ್ಲಿಂದ ಮರಳಿದ ನಂತರ ಏಕಾಂತ, ಆತಂತ್ರ ಬದುಕು ನಡೆಸುತ್ತಿದ್ದ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.
ಕುಶಿನಗರ ರೈಲು ಮಾರ್ಗದ ರೈಲು ನಿಲ್ದಾಣಗಳು ಮತ್ತು ಲೋಕಮಾನ್ಯ ತಿಲಕ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು ತನಿಖೆಯ ಕೇಂದ್ರಬಿಂದುವಾಗಿದೆ. ಈ ಮಧ್ಯೆ ಮಗನನ್ನು ಕಳೆದುಕೊಂಡ ಕುಟುಂಬದಿಂದ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಪಡೆಯುತ್ತಿದ್ದಾರೆ.
ಆರೋಪಿ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಿಮಿನಲ್ ಕೇಸ್ ಗಳು ದಾಖಲಾಗಿಲ್ಲ. ಆದರೆ ಆತನ ಹಠಾತ್ ಹಿಂಸಾತ್ಮಕ ಕೃತ್ಯ ತನಿಖಾಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಕುಟುಂಬದಲ್ಲಿ ಜಗಳ ನಡೆದಿತ್ತು ಎಂದು ವರದಿಯಾಗಿದೆ.
ವಿಕಾಸ್ನ ತಾಯಿ ರಾಬ್ರಿ ದೇವಿ ತನ್ನ ಸಹೋದರಿ ದುರ್ಗಾದೇವಿಯೊಂದಿಗೆ ಸೂರತ್ನಲ್ಲಿ ವಾಸಿಸುತ್ತಿದ್ದರು. ಆದರೆ ಮನೆ ಮತ್ತು ಕೆಲಸದ ವಿಷಯದಲ್ಲಿ ಜಗಳ ನಡೆಯುತಿತ್ತಂತೆ. ಇದೇ ಕೊಲೆಗೆ ಪ್ರಚೋದನೆ ನೀಡಿದೆಯೇ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಪ್ರಸ್ತುತ, ಆರೋಪಿ ಬಂಧನಕ್ಕಾಗಿ ಸೂರತ್ ನಗರದ ಅಮ್ರೋಲಿ ಪೊಲೀಸ್, ಅಪರಾಧ ವಿಭಾಗ ಮತ್ತು ಸ್ಥಳೀಯ ಅಪರಾಧ ವಿಭಾಗದ ಐದು ತಂಡಗಳನ್ನು ಮುಂಬೈ, ಥಾಣೆ ಮತ್ತು ಬಿಹಾರದಲ್ಲಿ ನಿಯೋಜಿಸಲಾಗಿದೆ.