ನವದೆಹಲಿ: 2017ರ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ಕುಲದೀಪ್ ಸಿಂಗ್ ಸೆಂಗಾರ್ ಅವರಿಗೆ ನೋಟಿಸ್ ಜಾರಿ ಮಾಡಿ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸುವಂತೆ ನಿರ್ದೇಶಿಸಿದೆ.
ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಗುವಿನ ಮೇಲಿನ ಅತ್ಯಾಚಾರದ ಭಯಾನಕ ಪ್ರಕರಣವಾಗಿದ್ದು, ಸೆಂಗಾರ್ಗೆ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಆದೇಶಗಳನ್ನು ಓದಿದ ಅವರು, ಒಬ್ಬ ವ್ಯಕ್ತಿಯು ಪ್ರಬಲ ಸ್ಥಾನದಲ್ಲಿದ್ದರೆ, ಅಪರಾಧವನ್ನು ಮರೆ ಮಾಚುವ ಸಾಧ್ಯತೆ ಹೆಚ್ಚಿರುತ್ತದೆ. ಈ ಪ್ರಕರಣದಲ್ಲಿ ಅವರು ಆ ಪ್ರದೇಶದ ಅತ್ಯಂತ ಪ್ರಭಾವಿ ಶಾಸಕರಾಗಿದ್ದರು. ಹೀಗಾಗಿ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬಾರದು ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ನಾವು ಸಿಬಿಐ ಪರ ಸಾಲಿಸಿಟರ್ ಜನರಲ್ ಮೆಹ್ತಾ ಮತ್ತು ಅಪರಾಧಿಯ ಪರ ಹಿರಿಯ ವಕೀಲರ ವಿಚಾರಣೆ ನಡೆಸಿದ್ದೇವೆ. ಕಾನೂನಿನ ಹಲವಾರು ಗಣನೀಯ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ. ನಾಲ್ಕು ವಾರಗಳಲ್ಲಿ ಪ್ರತಿ-ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿತು
ಅಪರಾಧಿ ಅಥವಾ ವಿಚಾರಣಾಧೀನದಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಿದ ನಂತರ ನ್ಯಾಯಾಲಯವು ಸಾಮಾನ್ಯವಾಗಿ ಬಿಡುಗಡೆ ಆದೇಶಗಳನ್ನು ತಡೆಹಿಡಿಯುವುದಿಲ್ಲ ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ, ಆದರೆ, ಪ್ರತ್ಯೇಕ ಪ್ರಕರಣದಲ್ಲಿ ಅಪರಾಧಿ ಈಗಾಗಲೇ ಶಿಕ್ಷೆಗೊಳಗಾಗಿರುವ ವಿಶಿಷ್ಟ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ಡಿಸೆಂಬರ್ 23 ರ ದೆಹಲಿ ಹೈಕೋರ್ಟ್ ಆದೇಶದ ಕಾರ್ಯಾಚರಣೆಯನ್ನು ನಾವು ತಡೆ ಹಿಡಿಯುತ್ತೇವೆ. ಅದರಂತೆ, ಪ್ರತಿವಾದಿಯಾದ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಆ ಆದೇಶದ ಪ್ರಕಾರ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳಿತು.
2017ನೇ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ ಉನ್ನಾವೋ ಅತ್ಯಾಚಾರ ಪ್ರಕರಣ ನಡೆದಿತ್ತು. ಅಂದಿನ ಪ್ರಭಾವಿ ಬಿಜೆಪಿ ಶಾಸಕ (ಈಗ ಉಚ್ಚಾಟಿತ) ಕುಲದೀಪ್ ಸಿಂಗ್ ಸೆಂಗಾರ್ ಅವರು ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರದ ಪ್ರಮುಖ ಆರೋಪಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬವು ನಿರಂತರವಾಗಿ ಬೆದರಿಕೆ ಎದುರಿಸಿತ್ತು.
ಆಕೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದರು ಮತ್ತು ಸಂಬಂಧಿಕರು ಅನುಮಾನಾಸ್ಪದ ರೀತಿಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಸೆಂಗಾರ್ ಎನ್ನುವ ವ್ಯಕ್ತಿಯನ್ನು 2019 ರಲ್ಲಿ ದೋಷಿ ಎಂದು ಘೋಷಿಸಲಾಯಿತು. ಆದರೆ ಸೆಂಗಾರ್ಗೆ ಈಚೆಗೆ ಜಾಮೀನು ಸಿಕ್ಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಸಿಬಿಐ ಮೇಲ್ಮನವಿ ಸಲ್ಲಿಕೆ ಮಾಡಿತ್ತು.