ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (ಎಡ), ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್. 
ದೇಶ

'ಇದು ವ್ಯಂಗ್ಯವಲ್ಲ, ಕರಾಳ ರಾಜಕೀಯದ ಕಪ್ಪು ಹಾಸ್ಯ': ತ್ರಿಭಾಷಾ ಸೂತ್ರ-ಕ್ಷೇತ್ರ ಮರುವಿಂಗಡಣೆ​ ಕುರಿತ ಸಿಎಂ ಯೋಗಿ ಹೇಳಿಕೆಗೆ ಸ್ಟಾಲಿನ್ ತಿರುಗೇಟು

ತಮಿಳುನಾಡಿನ ದ್ವಿಭಾಷಾ ನೀತಿ ಮತ್ತು ನ್ಯಾಯಯುತ ಕ್ಷೇತ್ರ ಮರು​ವಿಂಗಡನೆ ಬಿಜೆಪಿಗೆ ಕಿರಿಕಿರಿ ಮೂಡಿಸುತ್ತಿದೆ.

ಚೆನ್ನೈ: ತ್ರಿಭಾಷಾ ಸೂತ್ರ ಹಾಗೂ ಕ್ಷೇತ್ರ ಮರುವಿಂಗಡಣೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಟೀಕಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಗುರುವಾರ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು, ತಮಿಳುನಾಡಿನ ದ್ವಿಭಾಷಾ ನೀತಿ ಮತ್ತು ನ್ಯಾಯಯುತ ಕ್ಷೇತ್ರ ಮರು​ವಿಂಗಡನೆ ಬಿಜೆಪಿಗೆ ಕಿರಿಕಿರಿ ಮೂಡಿಸುತ್ತಿದೆ ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ದ್ವೇಷದ ಬಗ್ಗೆ ನಮಗೆ ಉಪನ್ಯಾಸ ನೀಡಲು ಬಯಸುತ್ತಿದ್ದಾರೆಯೇ? ನಮ್ಮನ್ನು ಬಿಡಿ. ಇದು ವ್ಯಂಗ್ಯವಲ್ಲ ಇದು ಅತ್ಯಂತ ಕರಾಳ ರಾಜಕೀಯ ಕಪ್ಪು ಹಾಸ್ಯ ಎಂದು ತಿರುಗೇಟು ನೀಡಿದ್ದಾರೆ.

ತಮಿಳುನಾಡು ರಾಜ್ಯವು ಯಾವುದೇ ನಿರ್ದಿಷ್ಟ ಭಾಷೆಯನ್ನು ವಿರೋಧಿಸುವುದಿಲ್ಲ. ಬದಲಿಗೆ 'ಭಾಷಾ ಹೇರಿಕೆ' ಮತ್ತು 'ಜನಾಂಗೀಯತೆ'ಯನ್ನು ವಿರೋಧಿಸುತ್ತಿದೆ. ಇದು ವೋಟ್‌ ಬ್ಯಾಂಕ್ ರಾಜಕೀಯ ಅಲ್ಲ, ಘನತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ತಿಳಿಸಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸ್ಟಾಲಿನ್ ತಮ್ಮ ಮತ ಬ್ಯಾಂಕ್ ಅಪಾಯದಲ್ಲಿದೆ ಎಂದು ಭಾವಿಸಿ ಒಂದು ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಟ್ವಿಟ್ಟರ್ ಮೂಲಕ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನದಲ್ಲಿ ತಮಿಳುನಾಡಿನಲ್ಲಿ ಹಿಂದಿ ಭಾಷೆಗೆ ಇರುವ ವಿರೋಧದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಹಿಂದಿಯನ್ನೇಕೆ ದ್ವೇಷಿಸಬೇಕು? ದೇಶವನ್ನು ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ವಿಭಜಿಸಬಾರದು. ವಾರಣಾಸಿಯಲ್ಲಿ ಮೂರನೇ ತಲೆಮಾರಿನ ಕಾಶಿ ತಮಿಳು ಸಂಗಮವನ್ನು ಆಯೋಜಿಸಿದ್ದಕ್ಕಾಗಿ ನಾವು ಪ್ರಧಾನಿ ಮೋದಿ ಅವರಿಗೆ ಕೃತಜ್ಞರಾಗಿರುತ್ತೇವೆ. ತಮಿಳು ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಅದರ ಇತಿಹಾಸವು ಸಂಸ್ಕೃತದಷ್ಟೇ ಪ್ರಾಚೀನವಾಗಿದೆ. ಭಾರತೀಯ ಪರಂಪರೆಯ ಹಲವು ಅಂಶಗಳು ಇನ್ನೂ ಭಾಷೆಯಲ್ಲಿ ಜೀವಂತವಾಗಿರುವುದರಿಂದ ಪ್ರತಿಯೊಬ್ಬ ಭಾರತೀಯನಿಗೂ ತಮಿಳಿನ ಬಗ್ಗೆ ಗೌರವ ಮತ್ತು ಪೂಜ್ಯ ಭಾವನೆ ಇದೆ. ಹಾಗಿರುವಾಗ ಹಿಂದಿಯನ್ನೇಕೆ ದ್ವೇಷಿಸಬೇಕು? ಎಂದು ಪ್ರಶ್ನಿಸಿದ್ದರು.

ಇದೇ ವೇಳೆ ಜನಸಂಖ್ಯೆಗೆ ತಕ್ಕಂತೆ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಸ್ಟಾಲಿನ್ ಅವರ ಕಳವಳಗಳನ್ನು ಯೋಗಿ ಆದಿತ್ಯನಾಥ್ ಅವರು ತಳ್ಳಿ ಹಾಕಿದ್ದರು.

ಇದೊಂದು ರಾಜಕೀಯ ಕಾರ್ಯಸೂಚಿ, ನೋಡಿ, ಗೃಹ ಸಚಿವರು ಈ ವಿಷಯದ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಸಭೆಯ ನೆಪದಲ್ಲಿ ಸ್ಟಾಲಿನ್ ಅವರ ರಾಜಕೀಯ ಕಾರ್ಯಸೂಚಿಯಾಗಿದೆ. ಗೃಹ ಸಚಿವರ ಹೇಳಿಕೆಯ ನಂತರ, ಈ ವಿಷಯದ ಬಗ್ಗೆ ಯಾವುದೇ ಪ್ರಶ್ನೆಗಳು ಉದ್ಭವಿಸಬಾರದು ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT