ನವದೆಹಲಿ: ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯಗಳು ಈಗ ವಾಸಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದರ ಬೆನ್ನಲ್ಲೇ ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಪ್ರಧಾನಿ ಮೋದಿಯವರು ಹಾರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಶತಮಾನಗಳಷ್ಟು ಹಳೆಯದಾದ ಗಾಯಗಳು ವಾಸಿಯಾಗುತ್ತಿದ್ದಂತೆ ಪ್ರತಿಯೊಬ್ಬ ರಾಮ ಭಕ್ತನ ಹೃದಯವು ಆಳವಾದ ತೃಪ್ತಿ, ಅಪಾರ ಕೃತಜ್ಞತೆ ಮತ್ತು ದೈವಿಕ ಸಂತೋಷದಿಂದ ತುಂಬಿರುತ್ತದೆ ಎಂದು ಹೇಳಿದರು.
ಈ ಧರ್ಮ ಧ್ವಜವು ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆಯ ಪುನರ್ ಜಾಗೃತಿಯ ಧ್ವಜವಾಗಿದೆ. 500 ವರ್ಷಗಳ ಹಳೆಯ ಸಂಕಲ್ಪದ ನೆರವೇರಿದ್ದು, ಧ್ವಜವು ಭಗವಾನ್ ಶ್ರೀ ರಾಮನ ಆದರ್ಶಗಳನ್ನು ಸಾಕಾರಗೊಳಿಸಿತು. ಸತ್ಯ ಮತ್ತು ಸದಾಚಾರದ ವಿಜಯವನ್ನು ಸಂಕೇತಿಸುತ್ತದೆ ಎಂದು ತಿಳಿಸಿದರು.
ಧ್ವಜದಲ್ಲಿರುವ ಕೇಸರಿ ಬಣ್ಣ, ಸೂರ್ಯವಂಶದ ಚಿಹ್ನೆ, ‘ಓಂ’ ಪದ ಮತ್ತು ಕೋವಿದಾರ ಮರವು ರಾಮ ರಾಜ್ಯದ ವೈಭವವನ್ನು ಅನಾವರಣಗೊಳಿಸುತ್ತದೆ. ಈ ಧ್ವಜವು ಒಂದು ಸಂಕಲ್ಪ, ಯಶಸ್ಸು, ಸೃಷ್ಟಿಗಾಗಿ ನಡೆದ ಹೋರಾಟದ ಕಥೆ, 100 ವರ್ಷಗಳ ಹೋರಾಟದ ಭೌತಿಕ ರೂಪ. ಮುಂಬರುವ ಸಾವಿರಾರು ಶತಮಾನಗಳವರೆಗೆ, ಈ ಧ್ವಜವು ಭಗವಾನ್ ರಾಮನ ಮೌಲ್ಯಗಳನ್ನು ಪೋಷಿಸುತ್ತದೆ ಎಂದರು.
ಅಯೋಧ್ಯೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದೆ. ಇಡೀ ದೇಶ ಮತ್ತು ಜಗತ್ತು ರಾಮನ ಜಪದಲ್ಲಿ ಮುಳುಗಿದೆ. ಅಂತಿಮವಾಗಿ ಸತ್ಯವು ಸುಳ್ಳಿನ ಮೇಲೆ ವಿಜಯ ಸಾಧಿಸುತ್ತದೆ ಎಂಬುದಕ್ಕೆ ಈ ಧ್ವಜ ಸಾಕ್ಷಿಯಾಗಿದೆ. ದೇವಾಲಯ ನಿರ್ಮಾಣಕ್ಕೆ ಕೊಡುಗೆ ನೀಡಿದ ಎಲ್ಲರಿಗೂ ಅಭಿನಂದಿಸುತ್ತೇನೆಂದು ಹೇಳಿದರು.
ನಮ್ಮ ರಾಮನು ತಾರತಮ್ಯ ಮಾಡುವುದಿಲ್ಲ ಮತ್ತು ನಾವು ಕೂಡ ಅದೇ ಮನೋಭಾವದಿಂದ ಮುಂದುವರಿಯುತ್ತಿದ್ದೇವೆ. 2047 ರ ಹೊತ್ತಿಗೆ ನಾವು ಭಾರತದ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುವಾಗ, ನಾವು ಅಭಿವೃದ್ಧಿ ಹೊಂದಿದ ಭಾರತವಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಮ ಮಂದಿರಕ್ಕೆ ಬಂದಾಗ ಪ್ರತಿಯೊಬ್ಬ ನಾಗರಿಕನೂ ಸಪ್ತ ಮಂಟಪಕ್ಕೆ ಭೇಟಿ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. ಈ ಮಂಟಪಗಳು ನಂಬಿಕೆ, ಸ್ನೇಹ, ಕರ್ತವ್ಯ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಬಲಪಡಿಸುತ್ತವೆ. ನಮ್ಮ ರಾಮನು ಭಾವನೆಗಳ ಮೂಲಕ ಒಂದಾಗುತ್ತಾನೆ, ವಿಭಜನೆಯಲ್ಲ, ಅವನಿಗೆ ಮುಖ್ಯವಾದುದು ಭಕ್ತಿ, ವಂಶಾವಳಿಯಲ್ಲ.
ಕೆಲವು ದಿನಗಳ ಹಿಂದೆ, ಮುಂದಿನ 10 ವರ್ಷಗಳಲ್ಲಿ ಭಾರತವನ್ನು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಗೊಳಿಸುವುದು ನಮ್ಮ ಗುರಿ ಎಂದು ನಾನು ಹೇಳಿದ್ದೆ. ನಾವು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ. ಆದರೆ, ನಾವು ಕೀಳರಿಮೆಯಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿದೇಶಿ ಶ್ರೇಷ್ಠ ಮತ್ತು ನಮ್ಮದು ಕೀಳು ಎಂದು ನಾವು ನಂಬಲು ಪ್ರಾರಂಭಿಸಿದೆವು. ನಮ್ಮ ಸಂವಿಧಾನವು ವಿದೇಶಿ ಸಂವಿಧಾನಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತಿತ್ತು, ಆದರೆ, ಸತ್ಯವೆಂದರೆ ಭಾರತ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವ ನಮ್ಮ ಡಿಎನ್ಎಯಲ್ಲಿದೆ ಎಂದು ತಿಳಿಸಿದರು.
ಧ್ವಜಾರೋಹಣ ಸಮಾರಂಭಕ್ಕೂ ಮುನ್ನ, ಪ್ರಧಾನಿ ಮೋದಿಯವರು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವಾಲಯ ಸಂಕೀರ್ಣದವರೆಗೆ ರೋಡ್ ಶೋ ನಡೆಸಿದರು.
ಭಾರೀ ಭದ್ರತಾ ನಿಯೋಜನೆಯ ನಡುವೆ ಮೋದಿ ಅವರ ಬೆಂಗಾವಲು ಪಡೆ ಹಾದು ಹೋಗುವಾಗ ಮಹಿಳೆಯರು ಮತ್ತು ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ನಿವಾಸಿಗಳು ಮತ್ತು ಭಕ್ತರು ಮಾರ್ಗದುದ್ದಕ್ಕೂ ಸಾಲುಗಟ್ಟಿ ನಿಂತು ಹೂವಿನ ಮಳೆಯನ್ನೇ ಸುರಿಸಿರು. ಹಲವರು ತ್ರಿವರ್ಣ ಧ್ವಜವನ್ನು ಬೀಸಿದರೆ, ಇತರರು ಕಮಲದ ಲಾಂಛನವಿರುವ ಬಿಜೆಪಿ ಧ್ವಜಗಳನ್ನು ಹಿಡಿದು ನಿಂತಿರುವುದು ಕಂಡು ಬಂದಿತು.
ಮೋದಿಯವರು ಅಯೋಧ್ಯೆಗೆ ಆಗಮಿಸಿದ ವೇಳೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ಔಪಚಾರಿಕವಾಗಿ ಸ್ವಾಗತಿಸಿದರು.
ಮುಖ್ಯ ಕಾರ್ಯಕ್ರಮಕ್ಕೆ ಹೋಗುವ ಮೊದಲು, ಪ್ರಧಾನಿ ಮೋದಿಯವರು ರಾಮ ಜನ್ಮಭೂಮಿ ಮಂದಿರ ಸಂಕೀರ್ಣದೊಳಗಿನ ಸಪ್ತ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.