ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಗುರುವಾರ ಬಹುಪತ್ನಿತ್ವ ನಿಷೇಧ ಮಸೂದೆ -2025 ಅನ್ನು ಅಂಗೀಕರಿಸಲಾಗಿದ್ದು, ಕಾನೂನು ಉಲ್ಲಂಘಿಸಿ ಹಲವು ಮದುವೆಯಾದರೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಸಲು ಅವಕಾಶ ನೀಡಲಾಗಿದೆ. ಆದರೆ ಬುಡಕಟ್ಟು ಜನಾಂಗಕ್ಕೆ ವಿನಾಯಿತಿ ನೀಡಲಾಗಿದೆ.
ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿದ ಜನರು ಮತ್ತು ಆರನೇ ವೇಳಾಪಟ್ಟಿಯ ಅಡಿಯಲ್ಲಿರುವ ಪ್ರದೇಶಗಳನ್ನು ಬಹುಪತ್ನಿತ್ವ ನಿಷೇಧ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಯಿತು.
2025ರ ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆಯ ಅಂಗೀಕಾರದ ಸಂದರ್ಭದಲ್ಲಿ ಮಾತನಾಡಿದ ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಈ ಕಾನೂನು 'ಎಲ್ಲಾ ಧರ್ಮಗಳಿಗೂ ಅನ್ವಯವಾಗುತ್ತದೆ. ಒಂದು ವಿಭಾಗವು ಗ್ರಹಿಸಿದಂತೆ ಇಸ್ಲಾಂ ಧರ್ಮಕ್ಕೆ ಇದು ವಿರುದ್ಧವಾಗಿಲ್ಲ' ಎಂದು ಹೇಳಿದರು.
"ಹಿಂದೂಗಳು ಬಹುಪತ್ನಿತ್ವದಿಂದ ಮುಕ್ತರಾಗಬೇಕು. ಅದು ನಮ್ಮ ಜವಾಬ್ದಾರಿಯೂ ಆಗಿದೆ. ಈ ಮಸೂದೆಯು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರ ಎಲ್ಲಾ ಸಮಾಜಗಳ ಜನರನ್ನು ಒಳಗೊಳ್ಳುತ್ತದೆ" ಎಂದು ಅವರು ಹೇಳಿದರು.
ಬಹುಪತ್ನಿತ್ವವನ್ನು ತೊಲಗಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಬಹುಪತ್ನಿತ್ವವನ್ನು ಅಪರಾಧ ಎಂದು ಪರಿಗಣಿಸಿ ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ.
ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಮಾತನಾಡಿದ ಸಿಎಂ ಶರ್ಮಾ, ಮುಂದಿನ ವರ್ಷ ಅಸ್ಸಾಂ ವಿಧಾನಸಭಾ ಚುನಾವಣೆಯ ನಂತರ ತಾವು ಮತ್ತೆ ಮುಖ್ಯಮಂತ್ರಿಯಾದರೆ ಅಸ್ಸಾಂನಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.