ಪಾಕ್ ಪ್ರಧಾನಿ- ವಿದೇಶಾಂಗ ಸಚಿವ ಎಸ್ ಜೈಶಂಕರ್  online desk
ದೇಶ

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

"ನೆರೆ ರಾಷ್ಟ್ರ" ಎಂಬ ಉಲ್ಲೇಖ ಪಿಒಕೆ ಕುರಿತಂತೆ ಪಾಕ್‌ಗೆ ತೀಕ್ಷ್ಣವಾದ ಉತ್ತರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನವದೆಹಲಿ: ಶುಕ್ರವಾರ ಮಧ್ಯಾಹ್ನ ಭಾರತ ಪಾಕಿಸ್ತಾನದ ವಿರುದ್ಧ ಬಲವಾದ ಮತ್ತು ಸ್ಪಷ್ಟವಾದ ಸಂದೇಶವನ್ನು ಕಳುಹಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಫ್ಘಾನಿಸ್ತಾನವನ್ನು "ಪಕ್ಕದಲ್ಲೇ ಇರುವ ನೆರೆ ದೇಶ" ಎಂದು ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ವಖಾನ್ ಕಾರಿಡಾರ್ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನ 106 ಕಿಮೀ ಕಿರಿದಾದ ಭೂ ಗಡಿಯನ್ನು ಹಂಚಿಕೊಂಡಿವೆ. ಇದು ಚೀನಿಯರು ಕಣ್ಣಿಟ್ಟಿರುವ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಪಾಕಿಸ್ತಾನ ಕಾನೂನುಬಾಹಿರವಾಗಿ ನಿಯಂತ್ರಿಸುವ ಕಾಶ್ಮೀರದ ಭೂ ಪ್ರದೇಶದಿಂದ ಈ ವಖಾನ್ ಕಾರಿಡಾರ್ ಅಫ್ಘಾನಿಸ್ತಾನವನ್ನು ಭಾರತದೊಂದಿಗೆ ಸಂಪರ್ಕಿಸುತ್ತದೆ.

"ನೆರೆ ರಾಷ್ಟ್ರ" ಎಂಬ ಉಲ್ಲೇಖ ಪಿಒಕೆ ಕುರಿತಂತೆ ಪಾಕ್‌ಗೆ ತೀಕ್ಷ್ಣವಾದ ಉತ್ತರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

"ಪಕ್ಕದ ರಾಷ್ಟ್ರವಾಗಿ ಮತ್ತು ಅಫ್ಘಾನ್ ಜನರ ಹಿತೈಷಿಯಾಗಿ, ಭಾರತ ನಿಮ್ಮ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದೆ" ಎಂದು ಸಚಿವರು ಕಾಬೂಲ್‌ನಲ್ಲಿರುವ ಮಿಷನ್ ನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಅಫ್ಘಾನಿಸ್ತಾನದೊಂದಿಗೆ ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಭಾರತ ಮತ್ತು ಅಫ್ಘಾನಿಸ್ತಾನ ಎರಡೂ 'ಗಡಿಯಾಚೆಗಿನ ಭಯೋತ್ಪಾದನೆಯ ಸಮಸ್ಯೆಯನ್ನು ಎದುರಿಸುತ್ತಿವೆ' ಎಂದು ಅವರು ಇದೇ ಸಭೆಯಲ್ಲಿ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಪಾಕ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸಚಿವ ಜೈಶಂಕರ್ ಅವರ ಹೇಳಿಕೆ ಬಂದಿದೆ. ಅಫ್ಘಾನ್ ಬೆಂಬಲಿತ ಭಯೋತ್ಪಾದಕರು ತನ್ನ ಭೂಪ್ರದೇಶದ ಮೇಲೆ ದಾಳಿ ಮಾಡಿದ್ದಾರೆ ಎಂದು ಪಾಕ್ ಆರೋಪಿಸಿತ್ತು.

ದೆಹಲಿಯಲ್ಲಿ ಜೈಶಂಕರ್-ಮುತ್ತಕಿ ಸಭೆ ನಡೆಯುವುದಕ್ಕೂ ಕೆಲವೇ ಗಂಟೆಗಳ ಮೊದಲು ಪಾಕ್ ವಾಯುಪಡೆ ಕಾಬೂಲ್‌ನಲ್ಲಿ ದಾಳಿ ನಡೆಸಿರುವುದು ವರದಿಯಾಗಿತ್ತು.

"ಕಾಬೂಲ್‌ನಲ್ಲಿ ಸ್ಫೋಟದ ಶಬ್ದ ಕೇಳಿಸಿತು. ಆದರೆ ಯಾರೂ ಚಿಂತಿಸಬಾರದು. ಎಲ್ಲವೂ ಚೆನ್ನಾಗಿದೆ, ಮತ್ತು ಇಲ್ಲಿಯವರೆಗೆ ಯಾವುದೇ ಹಾನಿಯ ವರದಿ ಬಂದಿಲ್ಲ" ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

ಏತನ್ಮಧ್ಯೆ, ಭಾರತದ ಮೇಲಿನ ಭಯೋತ್ಪಾದಕ ದಾಳಿ ಅಥವಾ ಭಾರತ ವಿರೋಧಿ ಚಟುವಟಿಕೆಗಳಿಗೆ ಅಫ್ಘಾನ್ ಪ್ರದೇಶವನ್ನು ಎಂದಿಗೂ ಬಳಸಲು ಬಿಡುವುದಿಲ್ಲ ಎಂಬ ತನ್ನ ಸರ್ಕಾರದ ಉದ್ದೇಶವನ್ನು ಮುತ್ತಕಿ ಒತ್ತಿ ಹೇಳಿದ್ದಾರೆ.

ಆಗಸ್ಟ್‌ನಲ್ಲಿ 2,000ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಭೂಕಂಪ ಮತ್ತು ಭಾರತ ಕೋವಿಡ್ ಲಸಿಕೆಗಳನ್ನು ಕಳುಹಿಸಿದ ಸಾಂಕ್ರಾಮಿಕ ರೋಗ ಸೇರಿದಂತೆ ನಿರ್ಣಾಯಕ ಸಮಯಗಳಲ್ಲಿ ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಬೆಂಬಲವನ್ನು ಅವರು ಶ್ಲಾಘಿಸಿದರು.

"ಅಫ್ಘಾನಿಸ್ತಾನವು ಭಾರತವನ್ನು ಆಪ್ತ ಸ್ನೇಹಿತನಂತೆ ನೋಡುತ್ತದೆ (ಮತ್ತು) ಪರಸ್ಪರ ಗೌರವ, ವ್ಯಾಪಾರ ಮತ್ತು ಜನರ-ಜನರ ಸಂಬಂಧಗಳ ಆಧಾರದ ಮೇಲೆ ಸಂಬಂಧಗಳನ್ನು ಬಯಸುತ್ತದೆ. ನಮ್ಮ ಸಂಬಂಧಗಳನ್ನು ಬಲಪಡಿಸಲು ತಿಳುವಳಿಕೆಯ ಸಮಾಲೋಚನಾ ಕಾರ್ಯವಿಧಾನವನ್ನು ರಚಿಸಲು ನಾವು ಸಿದ್ಧರಿದ್ದೇವೆ." ಎಂದು ಅಫ್ಘಾನಿಸ್ತಾನ ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡಿಗೋ ವಿಮಾನಗಳ ಅಸ್ಥಿರತೆ: ಪ್ರಯಾಣ ದರ ಏರಿಕೆಗೆ ಸರ್ಕಾರ ಕಡಿವಾಣ; ನಾಲ್ಕು ವಿಶೇಷ ರೈಲುಗಳ ಸೌಲಭ್ಯ

BBK12: ಮನುಷತ್ವ ಕಳೆದುಕೊಂಡ ರಘು; ತಟ್ಟಗೆ ಕೈ ಹಾಕಬೇಡ; ಗಿಲ್ಲಿ ನಟ ಕೇಳಿದರೂ ಒಂದು ತುತ್ತು ಕೊಡದೆ ಗದರಿದ Raghu, Video!

IndiGo ಅವಾಂತರ: 'ಭಾನುವಾರದೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ' ಕೇಂದ್ರ ಸರ್ಕಾರ ಖಡಕ್ ಸೂಚನೆ

ಪಶ್ಚಿಮ ಬಂಗಾಳ: ಅಮಾನತುಗೊಂಡ TMC ಶಾಸಕನಿಂದ 'ಬಾಬ್ರಿ ಮಸೀದಿ'ಗೆ ಶಂಕುಸ್ಥಾಪನೆ!

Video: 'ನನ್ನ ಕೈಯಾರೆ ಜೀವನ ಹಾಳುಮಾಡಿಕೊಂಡೆ': ಬಿಕ್ಕಿ ಬಿಕ್ಕಿ ಅತ್ತ ನಟಿ Katrina Kaif, ಕಾರಣ ಏನು ಗೊತ್ತಾ?

SCROLL FOR NEXT