ಮುಂಬೈ: ನಾಸಿಕ್ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ 150ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿಗೆ 17 ಬಾರಿ ಕರೆ ಮಾಡಿರುವ ಮಾಹಿತಿ ಹೊರಬಿದ್ದಿದೆ.
ಸೆಕ್ಸ್ ವಿಡಿಯೋ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ತೇಜಸ್ವಿ ಸತ್ಪುಟೆ ನೇತೃತ್ವದಲ್ಲಿ ಎಸ್ಐಟಿಯನ್ನು ರಚಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.
ತನಿಖೆಯ ವೇಳೆ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಇದೀಗ ಸಾಮಾಜಿಕ ಹೋರಾಟಗಾರ್ತಿಯೊಬ್ಬರು ಸಿಡಿಆರ್ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ಅಂಜಲಿ ದಮಾನಿಯಾ ಅವರು ಅಶೋಕ್ ಖರತ್ ಅವರ ಕಾಲ್ ಡಿಟೇಲ್ ರೆಕಾರ್ಡ್(ಸಿಡಿಆರ್) ಬಿಡುಗಡೆ ಮಾಡಿದ್ದು, 2025ರಲ್ಲಿ ಆರೋಪಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆ ಫೋನ್ ಮೂಲಕ 17 ಬಾರಿ ಮಾತನಾಡಿದ್ದಾರೆ.
2025ರಲ್ಲಿ ಅಶೋಕ್ ಖರತ್ ಹಾಗೂ ಏಕನಾಥ್ ಶಿಂಧೆ ಅವರು ಒಟ್ಟು 17 ಬಾರಿ ಫೋನ್ ಮೂಲಕ ಮಾತನಾಡಿದ್ದಾರೆ. ಈ ಪೈಕಿ 10 ಬಾರಿ ಅಶೋಕ್ ಖರತ್ ಕರೆ ಮಾಡಿದ್ದರೆ, 7 ಬಾರಿ ಏಕನಾಥ್ ಶಿಂಧೆ ಅವರು ಕರೆ ಮಾಡಿದ್ದಾರೆ ಎಂದು ಹೋರಟಗಾರ್ತಿ ಸಿಡಿಆರ್ ಅಂಕಿ ಅಂಶ ಬಹಿರಂಗಪಡಿಸಿದ್ದಾರೆ.
ಅಶೋಕ್ ಖರತ್ ಹಾಗೂ ಏಕನಾಥ್ ಶಿಂಧೆ ಫೋನ್ ಸಂಭಾಷಣೆಯಲ್ಲಿ ಒಂದು ಕರೆ 21 ನಿಮಿಷಗಳವರೆಗೆ ಸಾಗಿದೆ. ಇದು ಸುದೀರ್ಘ ಫೋನ್ ಮಾತುಕತೆಯಾಗಿದೆ.
ಶಿಂಧೆ ಅಲ್ಲದೆ ಇನ್ನೂ ಹಲವು ಸಚಿವರು, ರಾಜಕಾರಾಣಿಗಳು ಹಾಗೂ ಇದೇ ಪ್ರಕರಣದಲ್ಲಿ ರಾಜೀನಾಮೆ ನೀಡಿರುವ ಮಹಾರಾಷ್ಟ್ರ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ರೂಪಾಲಿಗೂ ಖರತ್ ಕರೆ ಮಾಡಿದ್ದಾರೆ.