ವಿಜಯವಾಡ: ಕುಡಿಯಲು ನೀರು ಬೇಕೆಂದು ಬಂದ ಕಾಮುಕನೊಬ್ಬ ಮಹಿಳೆ ನೀರು ತರಲು ಒಳಗೆ ಹೋದಾಗ ಮನೆಗೆ ನುಗ್ಗಿ, ಮಹಿಳೆಯ ಕೈ ಕಟ್ಟಿ, ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿರುವ ಘಟನೆಯೊಂದು ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆಯು (30) ಸರ್ಕಾರಿ ಉದ್ಯೋಗಿಯಾಗಿದ್ದು, ಮನೆಯಲ್ಲಿ ಒಬ್ಬರೇ ಇರುವಾಗ ಬಂದು ದುಷ್ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ ಸುಮಾರು 3:30 ರಿಂದ 4 ಗಂಟೆಯೊಳಗೆ ಆರೋಪಿ “ಕುಡಿಯುವ ನೀರು ಬೇಕು” ಎಂದು ಹೇಳಿ ಮಹಿಳೆಯ ಮನೆಗೆ ಬಂದಿದ್ದಾನೆ. ಬಳಿಕ ಮಹಿಳೆಯ ಕೈ ಕಾಲು ಕಟ್ಟಿ, ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಈ ವೇಳೆ ಮಹಿಳೆ ತಾನು ಹೆಚ್ಐವಿ ಸೋಂಕು ಪೀಡಿತೆ ಎಂದು ಹೇಳಿದರೂ ಮತ್ತಷ್ಟು ಕ್ರೂರವಾಗಿ ನಡೆದುಕೊಂಡಿರುವ ಕಾಮುಕ, ಆಕೆಯ ಖಾಸಗಿ ಅಂಗದೊಳಗೆ ಕಬ್ಬಿಣದ ಸಲಾಕೆ ಹಾಕಿ, ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ನಡೆದ ಬಳಿಕ ನೆರೆಹೊರೆಯವರು ಹಾಗೂ ಸಂಬಂಧಿಕರ ಸಂಪರ್ಕಕ್ಕೆ ಮಹಿಳೆ ಸಿಗದ ಕಾರಣ ಮನೆಗೆ ಧಾವಿಸಿದ್ದಾರೆ.
ಆಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಕೂಡಲೇ ಮಾಚೆರ್ಲಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನರಸರಾವ್ಪೇಟ ಏರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ಆರೋಗ್ಯವಾಗಿದ್ದು, ನಿಗಾದಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೂ ಸಂತ್ರಸ್ತ ಮಹಿಳೆಯ ಮನೆಗೆ ವಿಧಿವಿಜ್ಞಾನ ತಂಡ ಆಗಮಿಸಿ, ಬೆರಳಚ್ಚು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸದ್ಯ ಆರೋಪಿಯನ್ನು ಗುರುತಿಸಲು ವಿಶೇಷ ತಂಡ ರಚಿಸಲಾಗಿದ್ದು, ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ.
ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಬಗ್ಗೆ ವದಂತಿ ಹರಡಬೇಡಿ. ಮಾಹಿತಿ ಇರುವ ಯಾರಾದರೂ ಮುಂದೆ ಬಂದು ವಿಚಾರಣೆಗೆ ಸಹಾಯ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದ್ದಾರೆ.
ಘಟನೆಗೆ ಸ್ಥಳೀಯ ಶಾಸಕರಾದ ಜೂಲಕಂಟಿ ಬ್ರಹ್ಮಾನಂದ ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಸರ್ವಶ್ರೇಷ್ಠ ತ್ರಿಪಾಠಿ ಅವರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.