ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ನಾಯಕರಾದ ಪವನ ಖೇರಾ ಮತ್ತು ಗೌರವ ಗೊಗೊಯಿ ನಡೆಸಿದ ಇತ್ತೀಚಿನ ಪತ್ರಿಕಾಗೋಷ್ಠಿಗಳಲ್ಲಿ ಬಳಸಿದ ವಿಷಯಕ್ಕೆ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಗುಂಪಿನ ಸಂಪರ್ಕವಿದೆ ಎಂದು ಆರೋಪಿಸಿದ್ದಾರೆ. ಇದರಿಂದ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ರಾಜಕೀಯ ವಾಗ್ವಾದ ಹೆಚ್ಚಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ನಿನ್ನೆ ಪವನ್ ಖೇರಾ ಮತ್ತು ಗೌರವ ಗೊಗೊಯಿ ಇಬ್ಬರೂ ಪತ್ರಿಕಾಗೋಷ್ಠಿ ನಡೆಸಿದರು, ಒಂದು ದೆಹಲಿಯಲ್ಲಿ, ಮತ್ತೊಂದು ಗುವಾಹಟಿಯಲ್ಲಿ. ನಿನ್ನೆ ನಡೆದ ಪತ್ರಿಕಾಗೋಷ್ಠಿಗೆ ಬಳಸಿದ ಸಂಪೂರ್ಣ ವಿಷಯವನ್ನು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಗುಂಪು ಒದಗಿಸಿದೆ ಎಂಬುದು ನಮಗೆ ಗೊತ್ತಾಗಿದೆ ಎಂದು ಆರೋಪಿಸಿದರು.
ಪಾಕಿಸ್ತಾನ ಮೂಲದ ಡಿಜಿಟಲ್ ವೇದಿಕೆಗಳು ಅಸ್ಸಾಂ ಚುನಾವಣಾ ಚರ್ಚೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದು ಆರೋಪಿಸಿದರು.
ಕಳೆದ 10 ದಿನಗಳಲ್ಲಿ ಪಾಕಿಸ್ತಾನದ ಚಾನೆಲ್ಗಳು ಅಸ್ಸಾಂ ಚುನಾವಣೆಯ ಕುರಿತು ಕನಿಷ್ಠ 11 ಟಾಕ್ ಶೋಗಳನ್ನು ನಡೆಸಿವೆ. ಹಿಂದೆಂದೂ ಹೀಗೆ ನಡೆದಿಲ್ಲ. ಪ್ರತಿಯೊಂದು ಚರ್ಚೆಯಲ್ಲೂ ಕಾಂಗ್ರೆಸ್ ಗೆಲ್ಲಬೇಕು ಎಂಬ ನಿರ್ಣಯವೇ ಬಂದಿದೆ. ನಿನ್ನೆ ನಡೆದ ಪತ್ರಿಕಾಗೋಷ್ಠಿಗೂ ಪಾಕಿಸ್ತಾನದ ಸಂಪರ್ಕ ಈಗ ಸ್ಪಷ್ಟವಾಗಿದೆ, ಇದಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಾರ್ವಜನಿಕ ವೇದಿಕೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಆರೋಪ ಮಾಡುವುದು ಐಪಿಸಿ ಸೆಕ್ಷನ್ 420 ಮತ್ತು 468 ಅಡಿಯಲ್ಲಿ ಬರುತ್ತದೆ. ಹೊಸ ಬಿಎನ್ ಎಸ್ ಕಾನೂನಲ್ಲಿಯೂ ಇದಕ್ಕೆ ಸಮಾನ ವಿಧಿಗಳು ಇವೆ. ಇಂತಹ ಸುಳ್ಳು ದಾಖಲೆಗಳನ್ನು ಬಳಸಿಕೊಂಡು ಚುನಾವಣಾ ಫಲಿತಾಂಶವನ್ನು ಪ್ರಭಾವಿಸಲು ಯತ್ನಿಸಿದರೆ, ಹೆಚ್ಚು ಕಠಿಣ ಶಿಕ್ಷೆಗಳಿದ್ದು ಜೀವಾವಧಿ ಶಿಕ್ಷೆಯೂ ವಿಧಿಸಬಹುದು ಎಂದು ಹೇಳಿದರು.
ನಿನ್ನೆ ನನ್ನ ಪತ್ನಿ FIR ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ವಿಧಿಗಳಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಹಿಂದಿನ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ ಗೊಗೊಯಿ ಅವರು ಇಷ್ಟರ ಮಟ್ಟಿಗೆ ಇಳಿದು, ನನ್ನ ಪತ್ನಿಯ ವಿರುದ್ಧ ಸುಳ್ಳು ಆರೋಪ ಮಾಡಿರುವುದು ದುಃಖಕರ ಎಂದು ಹಿಮಂತ್ ಶರ್ಮಾ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕ ಪವನ ಖೇರಾ ಅವರು ಮುಖ್ಯಮಂತ್ರಿ ಕುಟುಂಬದ ಆಸ್ತಿಗಳ ಬಗ್ಗೆ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಸಿಎಂ ಹಿಮಂತ್ ಶರ್ಮಾ ಇಂದು ಆರೋಪ ಮಾಡಿದ್ದಾರೆ. ಹಲವಾರು ಪಾಸ್ಪೋರ್ಟ್ಗಳು, ವಿದೇಶಿ ವ್ಯವಹಾರಗಳು ಮತ್ತು ವಿದೇಶದಲ್ಲಿನ ಆಸ್ತಿಗಳ ಕುರಿತು ಪವನ್ ಖೇರಾ ಅವರು ಆರೋಪಿಸಿದ್ದರು. ಶರ್ಮಾ ಅವರು ಈ ಆರೋಪಗಳನ್ನು ತಳ್ಳಿಹಾಕಿ, ಉಲ್ಲೇಖಿಸಲಾದ ಪಾಸ್ಪೋರ್ಟ್ಗಳಲ್ಲಿ ಒಂದನ್ನು ನಕಲಿ ಎಂದು ಹೇಳಿದ್ದು, ದುಬೈ ಮತ್ತು ಭಾರತದ ಅಧಿಕಾರಿಗಳು ವ್ಯತ್ಯಾಸಗಳನ್ನು ದೃಢಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಪವನ್ ಖೇರಾ ಅವರು ಇನ್ನಷ್ಟು ಸಾಕ್ಷ್ಯಗಳನ್ನು ನೀಡುವುದಾಗಿ ತಿಳಿಸಿದ್ದಾರೆ, ಇತ್ತ ಗೌರವ ಗೊಗೊಯಿ ಅವರು ತನಿಖೆಗೆ ಆಗ್ರಹಿಸಿದ್ದು, ಇದರಿಂದ ರಾಜಕೀಯ ವಿವಾದ ಇನ್ನಷ್ಟು ತೀವ್ರಗೊಂಡಿದೆ.
ಅಸ್ಸಾಂ ರಾಜ್ಯದಲ್ಲಿ ಏಪ್ರಿಲ್ 9ರಂದು 126 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.