ಕೋಲ್ಕತ್ತಾ: ರಾಜಕೀಯ ತಂತ್ರಜ್ಞ ಮತ್ತು I-PAC ಸಹ-ಸಂಸ್ಥಾಪಕ ವಿನೇಶ್ ಚಾಂಡೆಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಲ್ಲಿದ್ದಲು ಕಳ್ಳಸಾಗಣೆ ಸಂಬಂಧಿತ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮತದಾನಕ್ಕೆ ಕೆಲವು ದಿನಗಳು ಇರುವಂತೆಯೇ ನಡೆದಿರುವ ಈ ಬಂಧನವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವಿನೇಶ್ ಚಾಂಡೆಲ್ ಯಾರು?
ವಿನೇಶ್ ಚಾಂಡೆಲ್ ಅವರು ರಾಜಕೀಯ ತಂತ್ರಜ್ಞ ಮತ್ತು ಪ್ರಶಾಂತ್ ಕಿಶೋರ್ ಮತ್ತು ಇತರ ಸಹಚರರು ಸ್ಥಾಪಿಸಿದ ಪ್ರಮುಖ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ನ ಸಹ-ಸಂಸ್ಥಾಪಕರಾಗಿದ್ದಾರೆ. ಚಾಂಡೆಲ್ ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಟಿಎಂಸಿ ಪರ ಚುನಾವಣಾ ತಂತ್ರ ಮತ್ತು ಪ್ರಚಾರ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಚುನಾವಣೆಗೆ ಮುನ್ನಾ ಅವರನ್ನು ಬಂಧಿಸಿರುವುದು ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಕಲ್ಲಿದ್ದಲು ಕಳ್ಳಸಾಗಣೆ 'ಹಗರಣ' ದಲ್ಲಿ ಬಂಧನ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ತನಿಖೆ ಹಲವಾರು ತಿಂಗಳುಗಳಿಂದ ನಡೆಯುತ್ತಿದ್ದು, ಅಕ್ರಮ ಗಣಿಗಾರಿಕೆ ಮತ್ತು ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿದಂತೆ ಅನೇಕ ದಾಳಿ ನಡೆಸಲಾಗಿತ್ತು.
ಈ ವರ್ಷದ ಆರಂಭದಲ್ಲಿ ಇಡಿ ಕೋಲ್ಕತ್ತಾದಲ್ಲಿ ಐ- ಪ್ಯಾಕ್ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಅದರಲ್ಲಿ ಪ್ರತೀಕ್ ಜೈನ್ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿವೆ. ಅಂತಹ ಒಂದು ಕಾರ್ಯಾಚರಣೆಯ ಸಮಯದಲ್ಲಿ, ಮಮತಾ ಬ್ಯಾನರ್ಜಿ ಕಚೇರಿಗೆ ಭೇಟಿ ನೀಡಿದ್ದರು. ಈ ವಿಷಯವು ಭಾರತದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಭಾರತೀಯ ರಾಜಕೀಯ ಕ್ರಿಯಾ ಸಮಿತಿಯ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಚಾಂಡೆಲ್ ಅವರನ್ನು ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ:
ಇಡಿ ಈ ಹಿಂದೆ ಏಪ್ರಿಲ್ 2 ರಂದು ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು, ಈ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ದೆಹಲಿ, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
ತನಿಖೆಯ ಭಾಗವಾಗಿ ಬೆಂಗಳೂರಿನಲ್ಲಿರುವ ರಿಷಿರಾಜ್ ಸಿಂಗ್ ಅವರ ನಿವಾಸದ ಮೇಲೂ ಅಧಿಕಾರಿಗಳು ಶೋಧ ನಡೆಸಿದ್ದರು. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಅನುಮಾನಾಸ್ಪದ ಅಕ್ರಮ ಹಣಕಾಸಿನ ವಹಿವಾಟುಗಳಲ್ಲಿ ಚಾಂಡೆಲ್ ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ದೆಹಲಿಯಲ್ಲಿರುವ ಏಜೆನ್ಸಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪ್ರತೀಕ್ ರಾಜ್ ಹಾಗೂ ರಿಷಿರಾಜ್ ಸಿಂಗ್ ಸೇರಿದಂತೆ ಇತರ I-PAC ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು ಎಂದು ಇಡಿ ಮೂಲಗಳು ಹೇಳಿವೆ. ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡುವಂತೆ ಒತ್ತಾಯಿಸಿ ಇಬ್ಬರು ಅಧಿಕಾರಿಗಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಏಪ್ರಿಲ್ 17 ರಂದು ಇದರ ವಿಚಾರಣೆ ನಡೆಯಲಿದೆ.
ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ:
ಚುನಾವಣೆಗೆ ಕೇವಲ 10 ದಿನ ಇರುವಂತೆಯೇ ವಿನೇಶ್ ಚಾಂಡೆಲ್ ಅವರ ಬಂಧನ ಆತಂಕ ಮಾತ್ರವಲ್ಲದೇ ಚುನಾವಣಾ ಕಾರ್ಯತಂತ್ರ, ಯೋಜನೆ ಮೇಲೂ ಪರಿಣಾಮ ಬೀರಿದೆ. ಇದು ಪ್ರಜಾಪ್ರಭುತ್ವವಲ್ಲ, ಬೆದರಿಕೆ" ಎಂದು ಬ್ಯಾನರ್ಜಿ ಹೇಳಿದ್ದಾರೆ.