ದೆಹಲಿ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಪ್ರತಿಭಟನಾಕಾರ್ತಿ, ಕ್ಷಮೆಯಾಚಿಸಿದ್ದಾಳೆ. ತಾನು ಕೇವಲ 15 ವರ್ಷದವಳಾಗಿದ್ದು, ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗುತ್ತಿದ್ದವರ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ.
ಕೈಮುಗಿದು ಕಾಣಿಸಿಕೊಂಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಅದರ ನೈಜತೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ (TNIE) ಸ್ವತಂತ್ರವಾಗಿ ದೃಢೀಕರಿಸಿಲ್ಲ.
ನಾನು ಅಲ್ಲಿ ಇದ್ದವರ ಪ್ರಭಾವಕ್ಕೆ ಒಳಗಾದೆ. ನನಗೆ ಕೇವಲ 15 ವರ್ಷ. ನಾನು ಮಾಡಿದ್ದು ಕ್ಷಮೆಗೆ ಅರ್ಹವಲ್ಲ. ನಾನು ತುಂಬಾ ಕೆಟ್ಟ ಮಾತುಗಳನ್ನು ಆಡಿದ್ದೇನೆ ಎಂದು ಆಕೆ ವಿಡಿಯೊದಲ್ಲಿ ಹೇಳಿದ್ದಾಳೆ.
ಇದನ್ನು ತನ್ನ ಮೊದಲ ಮತ್ತು ಕೊನೆಯ ತಪ್ಪು ಎಂದು ಹೇಳಿರುವ ಆಕೆ, ನಾನು ಇಡೀ ದೇಶದ ಕ್ಷಮೆ ಕೇಳುತ್ತೇನೆ. ನನಗೆ ನನ್ನ ಬಗ್ಗೆ ತುಂಬಾ ನಾಚಿಕೆಯಾಗಿದೆ. ನನ್ನ ಮುಖವನ್ನು ನಾನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ಜುಲೈ 23ರಂದು ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನೋಯ್ಡಾದ ಎಕ್ಸ್ಪ್ರೆಸ್ವೇ ಪೊಲೀಸ್ ಠಾಣೆಯಲ್ಲಿ ಬಾಲಕಿಯ ವಿರುದ್ಧ ಜೀರೋ ಎಫ್ಐಆರ್ ದಾಖಲಾದ ಕೆಲವೇ ದಿನಗಳ ಬಳಿಕ ಈ ಕ್ಷಮಾಪಣೆಯ ವಿಡಿಯೊ ಹೊರಬಿದ್ದಿದೆ.
ಸಂವಿಧಾನಾತ್ಮಕ ಹುದ್ದೆಯಾದ ಪ್ರಧಾನಿಯ ಗೌರವಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಹಾಗೂ ಸಾಮಾಜಿಕ ಅಶಾಂತಿ ಮತ್ತು ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುವ ರೀತಿಯಲ್ಲಿ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ಗಳು 352, 353(1) ಮತ್ತು 356(1) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಈ ಜೀರೋ ಎಫ್ಐಆರ್ ಅನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಾಲಕಿ ತನ್ನ ತಾಯಿಯೊಂದಿಗೆ ನೋಯ್ಡಾದ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಳು. ಪ್ರತಿಭಟನೆಯ ನಂತರ ಆಕೆಯ ನಿವಾಸಕ್ಕೆ ಬೀಗ ಹಾಕಲಾಗಿದ್ದು, ಆಕೆ ಮರಳಿ ಬಂದಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಪೊಲೀಸರು ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ನಿವಾಸಿಗಳನ್ನು ವಿಚಾರಣೆ ನಡೆಸಿದ್ದಾರೆ.
ಈ ಕ್ಷಮಾಪಣೆಯ ವಿಡಿಯೊ ಹೊರಬಂದ ಕೆಲವೇ ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಸಂದೇಶ ಬಿಡುಗಡೆ ಮಾಡಿ, ಪ್ರತಿಭಟನೆಯ ವೇಳೆ ತಮ್ಮ ವಿರುದ್ಧ ಅವಾಚ್ಯ ಪದ ಬಳಸಿದ ವಿದ್ಯಾರ್ಥಿಗಳನ್ನು ತಾವು ಕ್ಷಮಿಸಿರುವುದಾಗಿ ಹಾಗೂ ಅವರನ್ನು ಶಿಕ್ಷಿಸುವ ಬದಲು ಸರಿದಾರಿಗೆ ತರುವಂತೆ ಸಮಾಜಕ್ಕೆ ಕರೆ ನೀಡಿದ್ದರು.