ನವದೆಹಲಿ: ಪಾಕಿಸ್ತಾನದ ನಿರಂತರ ಶತ್ರುತ್ವದ ನಡೆ, ಗಡಿ ದಾಟಿ ಭಯೋತ್ಪಾದನೆಗೆ ನೀಡಿದ ಬೆಂಬಲ ಹಾಗೂ ಒಪ್ಪಂದದ ಮೂಲಭೂತ ತತ್ವಗಳನ್ನೇ ಹಾಳು ಮಾಡಿದ ವರ್ತನೆಯಿಂದ ಭಾರತವು ಸಿಂಧು ಜಲ ಒಪ್ಪಂದವನ್ನು (Indus Waters Treaty - IWT) ಅಮಾನತಿನಲ್ಲಿಡುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹೇಳಿದ್ದಾರೆ.
ಈ ನಿರ್ಧಾರವು ಹೊಸದಾಗಿ ಏನನ್ನೂ ಸೃಷ್ಟಿಸಿಲ್ಲ, ಬದಲಾಗಿ ಪಾಕಿಸ್ತಾನದ ನಡೆ ಈಗಾಗಲೇ ನಾಶಪಡಿಸಿದ್ದ ವಿಶ್ವಾಸ ಮತ್ತು ಸ್ನೇಹವನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ವೀಕ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದಲ್ಲಿ ಕ್ವಾತ್ರಾ, 1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧು ಜಲ ಒಪ್ಪಂದವು "ಸದ್ಭಾವನೆ ಮತ್ತು ಸ್ನೇಹದ ಮನೋಭಾವದಿಂದ" ಸಹಿ ಮಾಡಲಾಗಿತ್ತು ಎಂದು ಉಲ್ಲೇಖಿಸಿದ್ದಾರೆ. ಆದರೆ, ಕಳೆದ ಹಲವು ದಶಕಗಳಲ್ಲಿ ಪಾಕಿಸ್ತಾನ ತನ್ನ ಕ್ರಮಗಳ ಮೂಲಕ ಆ ಸ್ನೇಹ ಮತ್ತು ವಿಶ್ವಾಸವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಎಂದು ಹೇಳಿದ್ದಾರೆ.
ಒಪ್ಪಂದದ ಆರಂಭದಲ್ಲಿ ಅದು ಸದ್ಭಾವನೆ ಮತ್ತು ಸ್ನೇಹದ ಮನೋಭಾವದಿಂದ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಪಾಕಿಸ್ತಾನ ಕಳೆದ ಅರ್ಧ ಶತಮಾನದಿಂದ ಆ ಸದ್ಭಾವನೆ ಮತ್ತು ಸ್ನೇಹವನ್ನು ಒಂದೊಂದಾಗಿ ಕಿತ್ತುಹಾಕಿದೆ. ಭಾರತ ಒಪ್ಪಂದವನ್ನು ಅಮಾನತಿನಲ್ಲಿಟ್ಟಿರುವುದು, ಪಾಕಿಸ್ತಾನದ ವರ್ತನೆ ಈಗಾಗಲೇ ನಾಶಪಡಿಸಿದ್ದ ವಾಸ್ತವವನ್ನು ಒಪ್ಪಿಕೊಂಡಿರುವುದಷ್ಟೇ ಎಂದು ಕ್ವಾತ್ರಾ ಬರೆದಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ 2025ರ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ, ಅವರಲ್ಲಿ ಬಹುತೇಕ ಪ್ರವಾಸಿಗರು, ಸಾವನ್ನಪ್ಪಿದ ನಂತರ ಭಾರತವು ಏಪ್ರಿಲ್ 23ರಂದು ಸಿಂಧು ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಮಹತ್ವದ ನಿರ್ಧಾರ ಕೈಗೊಂಡಿತ್ತು.
ಈ ನಿರ್ಧಾರವನ್ನು ವಿರೋಧಿಸಿ ಇತ್ತೀಚೆಗೆ ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಾವೇಶವೊಂದನ್ನು ಆಯೋಜಿಸಿತ್ತು. ಅದರ ಬೆನ್ನಲ್ಲೇ ಕ್ವಾತ್ರಾ ಅವರ ಈ ಲೇಖನ ಮಹತ್ವ ಪಡೆದಿದೆ.
1960ರಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಹಿ ಮಾಡಲಾದ ಸಿಂಧು ಜಲ ಒಪ್ಪಂದದ ಪ್ರಕಾರ, ಸಿಂಧು ನದಿ ಕಣಿವೆಯ ಆರು ಪ್ರಮುಖ ನದಿಗಳಲ್ಲಿ ಮೂರು ನದಿಗಳ ಮೇಲಿನ ನಿಯಂತ್ರಣ ಭಾರತಕ್ಕೆ ಹಾಗೂ ಉಳಿದ ಮೂರು ನದಿಗಳ ಮೇಲಿನ ಹಕ್ಕು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಇದರ ಪರಿಣಾಮವಾಗಿ ಒಟ್ಟು ಜಲಪ್ರವಾಹದ ಸುಮಾರು 20 ಶೇಕಡಾ ನೀರಿನ ಬಳಕೆಯ ಹಕ್ಕು ಮಾತ್ರ ಭಾರತಕ್ಕೆ, ಉಳಿದ 80 ಶೇಕಡಾ ನೀರಿನ ಹಕ್ಕು ಪಾಕಿಸ್ತಾನಕ್ಕೆ ಸಿಕ್ಕಿತ್ತು. ಈ ಅಸಮಾನ ವ್ಯವಸ್ಥೆಯಿಂದ ಭಾರತದ ಹಲವು ಪ್ರದೇಶಗಳ ಅಭಿವೃದ್ಧಿಗೆ ದಶಕಗಳ ಕಾಲ ಅಡ್ಡಿಯಾಯಿತು. ಆದರೂ ಭಾರತ ಒಪ್ಪಂದದ ಎಲ್ಲ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿತು.
ಭಾರತವು ಒಪ್ಪಂದವನ್ನು ಗೌರವಿಸಿದರೂ, ಪಾಕಿಸ್ತಾನ ಪ್ರತಿಯಾಗಿ ಸ್ನೇಹದ ಬದಲು 1965, 1971 ಮತ್ತು 1999ರ ಯುದ್ಧಗಳನ್ನು ಆಯ್ಕೆ ಮಾಡಿಕೊಂಡಿತು. ಬಳಿಕ ಹಲವು ವರ್ಷಗಳಿಂದ ಗಡಿ ದಾಟಿ ಭಯೋತ್ಪಾದನೆಯನ್ನು ನಿರಂತರವಾಗಿ ಬೆಂಬಲಿಸಿತು.
2001ರ ಸಂಸತ್ ಮೇಲಿನ ದಾಳಿ, 2008ರ ಮುಂಬೈ ಉಗ್ರ ದಾಳಿ, 2016ರ ಪಠಾಣ್ಕೋಟ್ ಮತ್ತು ಉರಿ ದಾಳಿ, 2019ರ ಪುಲ್ವಾಮಾ ದಾಳಿ ಹಾಗೂ 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಗಳನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.
ಸಿಂಧು ಜಲ ಒಪ್ಪಂದದಡಿ ಭಾರತಕ್ಕೆ ಇರುವ ಹಕ್ಕುಗಳನ್ನು ಬಳಸಿಕೊಳ್ಳಲು ಪಾಕಿಸ್ತಾನ ನಿರಂತರ ಅಡ್ಡಿಪಡಿಸಿದೆ ಎಂದೂ ಕ್ವಾತ್ರಾ ಹೇಳಿದ್ದಾರೆ.
ಭಾರತ ಆರಂಭಿಸಿದ ಜಲವಿದ್ಯುತ್ ಯೋಜನೆಗಳಿಗೆ ವಿಳಂಬ ಉಂಟು ಮಾಡುವುದು, ತಾಂತ್ರಿಕ ಬದಲಾವಣೆಗಳಿಗೆ ಅನುಗುಣವಾಗಿ ಒಪ್ಪಂದವನ್ನು ಪರಿಷ್ಕರಿಸುವ ಭಾರತದ ಪ್ರಸ್ತಾಪಗಳನ್ನು ವಿರೋಧಿಸುವುದು ಹಾಗೂ ಆಧುನಿಕ ಅಗತ್ಯಗಳಿಗೆ ತಕ್ಕಂತೆ ಒಪ್ಪಂದವನ್ನು ನವೀಕರಿಸಲು ನಿರಾಕರಿಸುವ ಮೂಲಕ ಪಾಕಿಸ್ತಾನ ಭಾರತದ ಅಭಿವೃದ್ಧಿಗೆ ಅಡ್ಡಿಯಾಯಿತು.
ಕಳೆದ ಆರು ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಆ ಬದಲಾವಣೆಗಳಿಗೆ ಅನುಗುಣವಾಗಿ ಒಪ್ಪಂದವನ್ನು ಪರಿಷ್ಕರಿಸಿ ಭಾರತ ತನ್ನ ಜಲವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅವಕಾಶ ನೀಡಬೇಕೆಂಬ ಭಾರತದ ಪ್ರಸ್ತಾಪಗಳನ್ನು ಪಾಕಿಸ್ತಾನ ನಿರಂತರವಾಗಿ ತಡೆಹಿಡಿದಿದೆ. ಇದರಿಂದ ಒಪ್ಪಂದದಡಿ ತನ್ನ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ನಂಬಿಕೆ ಭಾರತದಲ್ಲಿ ಮೂಡಿತು.
ಭಾರತ-ಪಾಕಿಸ್ತಾನ ನಡುವಿನ ಸಂವಾದವನ್ನು ಪುನರಾರಂಭಿಸಬೇಕು ಎಂದು ಹೇಳುವವರು, ಈ ಹಿಂದಿನ ಅನುಭವಗಳನ್ನು ಕಡೆಗಣಿಸುತ್ತಿದ್ದಾರೆ ಅಥವಾ ಅದೇ ಪ್ರಯತ್ನವನ್ನು ಪುನಃ ಪುನಃ ಮಾಡಿ ಬೇರೆ ಫಲಿತಾಂಶ ನಿರೀಕ್ಷಿಸುತ್ತಿದ್ದಾರೆ ಎಂದು ಕ್ವಾತ್ರಾ ಟೀಕಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, "ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗುವುದಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಂದೇ ವೇಳೆ ನಡೆಯುವುದಿಲ್ಲ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂಬ ಸಂದೇಶವನ್ನೂ ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನದಲ್ಲಿ ಉಂಟಾಗಿರುವ ನೀರಿನ ಕೊರತೆಗೆ ಭಾರತ ಕಾರಣವಲ್ಲ, ಅಲ್ಲಿನ ಆಡಳಿತದ ವೈಫಲ್ಯವೇ ಕಾರಣ. ಇದಕ್ಕೆ "ಭಾರತವನ್ನು ದೂಷಿಸುವ ಬದಲು, ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲಿನ ನೀರಿನ ನಿರ್ವಹಣೆಯನ್ನು ಸುಧಾರಿಸಬೇಕು. ಭಾರತವನ್ನು ಆರೋಪಿಸುವ ಸಮಾವೇಶಗಳನ್ನು ನಡೆಸುವುದಕ್ಕಿಂತ ನೀರಿನ ಉತ್ಪಾದಕತೆ ಹೆಚ್ಚಿಸುವತ್ತ ಗಮನ ಹರಿಸಬೇಕು. ದೇಶದ ಪ್ರತಿಯೊಂದು ಸಮಸ್ಯೆಗೂ ಭಾರತವನ್ನು ಹೊಣೆ ಮಾಡುವ ಹಳೆಯ ಪದ್ಧತಿಗೆ ಈಗ ಅಂತ್ಯವಾಗಬೇಕು ಎಂದು ಹೇಳಿದ್ದಾರೆ.
ಕೊನೆಯಲ್ಲಿ ಈ ವಾಸ್ತವವನ್ನು ಜಾಗತಿಕ ಸಮುದಾಯವೂ ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕಾದ ಸಮಯ ಬಂದಿದೆ ಎಂದು ವಿನಯ್ ಮೋಹನ್ ಕ್ವಾತ್ರಾ ಅಭಿಪ್ರಾಯಪಟ್ಟಿದ್ದಾರೆ.