ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಕೊಂಡಿರುವ ನಟ ಯಶ್ ಬಗ್ಗೆ ಬಾಲಿವುಡ್ ನ ಸ್ವಯಂಘೋಷಿತ ಚಿತ್ರ ವಿಮರ್ಶಕ ಕಮಾಲ್ ರಷೀದ್ ಖಾನ್ ವ್ಯಾಪಕ ಟೀಕೆ ಮಾಡಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಭಾರೀ ಚರ್ಚೆ ಶುರುವಾಗಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.
ಇದೀಗ ಯಶ್ ಅವರ ರಾವಣನ ಪಾತ್ರದ ಬಗ್ಗೆ ಸ್ವಯಂಘೋಷಿತ ಸಿನಿಮಾ ವಿಮರ್ಶಕ ಹಾಗೂ ನಟ-ನಿರ್ಮಾಪಕ ಕಮಾಲ್ ರಶೀದ್ ಖಾನ್ ಅಲಿಯಾಸ್ ಕೆಆರ್ಕೆ ಮಾಡಿರುವ ಟೀಕೆ ವಿವಾದಕ್ಕೆ ಕಾರಣವಾಗಿದೆ.
ಜುಲೈ 31ರಂದು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ‘ರಾಮಾಯಣ’ ಟ್ರೇಲರ್ ಬಗ್ಗೆ ಪ್ರತಿಕ್ರಿಯಿಸಿರುವ ಕೆಆರ್ಕೆ, ಯಶ್ ಅವರ ನಟನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
‘ಯಶ್ ಕೆಟ್ಟ ನಟ’ ಎಂದ ಕೆಆರ್ಕೆ
ಯಶ್ ಅವರನ್ನು ‘ಕೆಟ್ಟ ನಟ’ ಎಂದು ಕರೆದಿರುವ ಕೆಆರ್ಕೆ, ರಾವಣನ ಪಾತ್ರದಲ್ಲಿ ಅವರು ಮಾತನಾಡುವ ಧ್ವನಿ ಮತ್ತು ಶೈಲಿಯನ್ನೂ ಪ್ರಶ್ನಿಸಿದ್ದಾರೆ.
“ರಾಮಾಯಣ ಟ್ರೇಲರ್ ನೋಡಿದ ಬಳಿಕ ಯಶ್ ಒಬ್ಬ ಕೆಟ್ಟ ನಟ ಎಂದು ಹೇಳಬಹುದು. ರಾವಣನ ಪಾತ್ರದಲ್ಲಿ ಅವರು ಹುಡುಗಿಯಂತೆ ಮಾತನಾಡುತ್ತಾರೆ. ಅವರಿಗೆ ಹಿಂದಿ ಸರಿಯಾಗಿ ಮಾತನಾಡಲು ಸಾಧ್ಯವಾಗದಿದ್ದರೆ, ಬೇರೆಯವರಿಂದ ಧ್ವನಿ ಡಬ್ ಮಾಡಿಸಬಹುದಿತ್ತು. ರಾವಣನ ಪಾತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದೇ ಅವರಿಗೆ ತಿಳಿದಿಲ್ಲ” ಎಂಬರ್ಥದಲ್ಲಿ ಕೆಆರ್ಕೆ ಪೋಸ್ಟ್ ಮಾಡಿದ್ದಾರೆ.
ಕೆಆರ್ಕೆಗೆ ಬಟ್ಟೆ ಸುತ್ತಿ ಹೊಡೆದ ಯಶ್ ಅಭಿಮಾನಿಗಳು
ಕೆಆರ್ಕೆ ಟೀಕೆಗೆ ಯಶ್ ಅಭಿಮಾನಿಗಳು ಸುಮ್ಮನಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕೆಆರ್ಕೆ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. “ಮೃದುವಾದ ಧ್ವನಿ ಎಂದ ಮಾತ್ರಕ್ಕೆ ಯಾರೂ ಹುಡುಗಿಯಂತೆ ಕಾಣುವುದಿಲ್ಲ.
ನಿಮ್ಮದೇ ಲಾಜಿಕ್ ಪ್ರಕಾರ ರಣಬೀರ್ಗೆ ಪುರುಷ ಧ್ವನಿ ಇದೆ, ಆದರೆ ಅವರು ಹುಡುಗಿಯಂತೆ ಕಾಣುತ್ತಾರೆಯೇ? ಆಸಕ್ತಿದಾಯಕ ತೀರ್ಮಾನ!” ಎಂದು ಒಬ್ಬ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಮತ್ತೊಬ್ಬರು, “ರಾಮಾಯಣದಲ್ಲಿ ರಾವಣನಾಗಿ ಯಶ್ ಅವರೇ ಶೋ ಕದಿಯುತ್ತಾರೆ. ಭಾಷೆ ಇಲ್ಲಿ ಅಡ್ಡಿಯಲ್ಲ. ಅಭಿನಯ ಮತ್ತು ಆ್ಯಕ್ಷನ್ ಭಾಷೆಗಿಂತ ಜೋರಾಗಿ ಮಾತನಾಡುತ್ತವೆ” ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ, “ರಾಮಾಯಣ ಟ್ರೇಲರ್ ನೋಡಿದ ಬಳಿಕ ರಾವಣನ ಪಾತ್ರದಲ್ಲಿ ಯಶ್ ಅದ್ಭುತವಾಗಿ ಕಾಣುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
‘ಸೌತ್ ಇಂಡಿಯನ್ ಆದ್ದರಿಂದ ಆ್ಯಕ್ಸೆಂಟ್ ಇದೆ’
ಯಶ್ ಅವರ ಹಿಂದಿ ಉಚ್ಚಾರಣೆ ಕುರಿತು ಕೆಆರ್ಕೆ ಮಾಡಿರುವ ಟೀಕೆಯನ್ನೂ ಅಭಿಮಾನಿಗಳು ಪ್ರಶ್ನಿಸಿದ್ದಾರೆ. “ಅವರು ಸೌತ್ ಇಂಡಿಯನ್. ಹಾಗಾಗಿ ಅವರ ಮಾತಿನಲ್ಲಿ ಆ್ಯಕ್ಸೆಂಟ್ ಇರುತ್ತದೆ” ಎಂದು ಒಬ್ಬರು ಸಮರ್ಥಿಸಿಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗರು “ಕೆಆರ್ಕೆ ನೆಗೆಟಿವ್ ರಿವ್ಯೂ ಕೊಟ್ಟಿದ್ದಾರೆ ಎಂದರೆ ಸಿನಿಮಾ ಬ್ಲಾಕ್ಬಸ್ಟರ್ ಆಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, “ಈಗ ಅರ್ಥವಾಯಿತು, ನಿಮ್ಮ ಬಗ್ಗೆ ಮತ್ತು ನಿಮ್ಮ ರಿವ್ಯೂ ಬಗ್ಗೆ ಯಾರೂ ಏಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು” ಎಂದು ಕೆಆರ್ಕೆಗೆ ತಿರುಗೇಟು ನೀಡಿದ್ದಾರೆ.
‘ಯಶ್ ಧ್ವನಿಗೆ ಹಿಂದಿ ಡಬ್ಬಿಂಗ್ ಬೇಕು’
ಆದರೆ, ಎಲ್ಲರೂ ಯಶ್ ಪರವಾಗಿರಲಿಲ್ಲ. ಕೆಲವರು ಕೆಆರ್ಕೆ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರನ್ನು ಟ್ಯಾಗ್ ಮಾಡಿದ ಒಬ್ಬ ನೆಟ್ಟಿಗರು, “ದಯವಿಟ್ಟು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ. ರಾವಣನ ಪಾತ್ರಕ್ಕೆ ಯಶ್ ಅವರ ಧ್ವನಿಗೆ ಹಿಂದಿ ಡಬ್ಬಿಂಗ್ ಅಗತ್ಯವಿದೆ” ಎಂದು ಸಲಹೆ ನೀಡಿದ್ದಾರೆ.
ಸದ್ಯ ‘ರಾಮಾಯಣ’ ಟ್ರೇಲರ್, ಯಶ್ ಅವರ ರಾವಣನ ಲುಕ್ ಹಾಗೂ ಅವರ ಅಭಿನಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಯಶ್ ಅವರ ರಾವಣನ ಪಾತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.