ಉತ್ತರಾಖಂಡ್: ಬದರಿನಾಥ ದೇವಾಲಯದಲ್ಲಿ ಕಾಣಿಕೆ ಮತ್ತು ದೇಣಿಗೆಗಳ ಕಳ್ಳತನದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಸೆಕ್ಯೂರಿಟಿ ಗಾರ್ಡ್ ನನ್ನು ಬಂಧಿಸಿದೆ. ಆತ ದೇವಾಲಯದ ದೇಣಿಗೆ ಸಾಮಗ್ರಿಗಳಿಂದ ವಸ್ತುಗಳನ್ನು ತೆಗೆದುಕೊಳ್ಳುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಮನೋಜ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಜೋಶಿಮಠದಲ್ಲಿರುವ ಜೆಪಿ ಪವರ್ ವೆಂಚರ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ ಜಲವಿದ್ಯುತ್ ಯೋಜನೆಯ 'ಲಾಮ್ ಬಗಾದ್ ಬ್ಯಾರೇಜ್'ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಸುದ್ದಿ ಸಂಸ್ಥೆ ಎಎನ್ಐ (ANI) ವರದಿ ಮಾಡಿದೆ.
ಕಂಪನಿಯ ಹಿರಿಯ ಅಧಿಕಾರಿಗಳ ಅತಿಥಿಗಳು ಮತ್ತು ಸಂಬಂಧಿಕರಿಗೆ ವಿಐಪಿ ದರ್ಶನದ ವ್ಯವಸ್ಥೆ ಕಲ್ಪಿಸಲು ಯೋಜನಾ ಅಧಿಕಾರಿಗಳು ಕುಮಾರ್ನನ್ನು ಬದರಿನಾಥ ದೇವಾಲಯಕ್ಕೆ ಕಳುಹಿಸಿದ್ದರು ಎನ್ನಲಾಗಿದೆ.
ದೇವಾಲಯದ ದೇಣಿಗೆ ಕಳ್ಳತನ ಪ್ರಕರಣದ ತನಿಖೆಯ ಭಾಗವಾಗಿ, ಎಸ್ಐಟಿ ಆಗಸ್ಟ್ 6 ರಂದು ಜೂನ್ 25 ಮತ್ತು ಜೂನ್ 29 ರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತು. ಪರಿಶೀಲನೆಯ ಸಮಯದಲ್ಲಿ, ವ್ಯಕ್ತಿಯೊಬ್ಬ ದೇಣಿಗೆ ಸಾಮಗ್ರಿಯಿಂದ ಪದೇ ಪದೇ ವಸ್ತುಗಳನ್ನು ತೆಗೆದುಕೊಂಡು ತನ್ನ ಜೇಬಿನಲ್ಲಿ ಹಾಕಿಕೊಳ್ಳುತ್ತಿರುವುದು ಕಂಡುಬಂದಿದೆ. ನಂತರ ದೇವಾಲಯ ಸಮಿತಿಯ ಸಿಬ್ಬಂದಿ ಆ ವ್ಯಕ್ತಿಯನ್ನು ಕುಮಾರ್ ಎಂದು ಗುರುತಿಸಿದರು ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ದೃಶ್ಯಾವಳಿಗಳ ಆಧಾರದ ಮೇಲೆ, ಆತ ದೇಣಿಗೆ ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಎಸ್ಐಟಿ ನಿರ್ಧರಿಸಿತು. ತರುವಾಯ, ಆಗಸ್ಟ್ 6 ರಂದು ಈ ಪ್ರಕರಣಕ್ಕೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 305 ಅನ್ನು ಸೇರಿಸಲಾಯಿತು. ವಿಚಾರಣೆಗಾಗಿ ಆಗಸ್ಟ್ 7 ರಂದು ಕುಮಾರ್ನನ್ನು ಕರೆಸಲಾಗಿತ್ತು ಮತ್ತು ಅವನಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಯಿತು. ವಿಚಾರಣೆ ವೇಳೆ ಆತ ಕಳ್ಳತನವನ್ನು ಒಪ್ಪಿಕೊಂಡಿದ್ದು, ಕ್ಷಮೆಯಾಚಿಸಿದ್ದಾನೆ ಎಂದು ವರದಿ ತಿಳಿಸಿದೆ.
ಆರೋಪಿಯಿಂದ ವಶಕ್ಕೆ ಪಡೆಯಲಾದ ವಸ್ತುಗಳು: ಬಿಳಿ ಲೋಹದ ಎರಡು ಜೊತೆ ಕಾಲುಂಗುರಗಳು (ಬಿಚ್ಚಿಯಾ), ಬಿಳಿ ಲೋಹದ ನಾಲ್ಕು ಜೋಡಿ ಕಿವಿಯೋಲೆಗಳು ಒಂದು ಕೈ ಬಳೆ (ಬ್ರೇಸ್ಲೆಟ್) ಸೇರಿದಂತೆ ಕಳವು ಮಾಡಿದ ವಸ್ತುಗಳ ಮಾರಾಟದಿಂದ ಗಳಿಸಿದರೆನ್ನಲಾದ 6,000 ರೂ. ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.