ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್- ಬ್ಯಾಟರ್ ರಿಷಭ್ ಪಂತ್ ತಮ್ಮ ತವರು ರಾಜ್ಯ ಉತ್ತರಾಖಂಡ್ ನಲ್ಲಿ ಭೂಮಿ ಖರೀದಿಸಲು ಪರದಾಡುತ್ತಿದ್ದು, ಸೂಕ್ತ ಸ್ಥಳ ಸಿಗದೇ ಕೊನೆಗೆ ಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ.
2 ಟೆಸ್ಟ್ ಸರಣಿಗೂ ಮುನ್ನ ಭಾರತ ಕ್ರಿಕೆಟ್ ತಂಡದ ಭಾಗವಾಗಿ ಶ್ರೀಲಂಕಾಗೆ ತೆರಳಿರುವ ಪಂತ್, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ದೆಹಲಿಯಿಂದ ತವರು ರಾಜ್ಯ ಉತ್ತರಾಖಂಡ್ ಗೆ ಸ್ಥಳಾಂತರವಾಗುವ ಇಚ್ಛೆಯನ್ನು ವ್ಯಕ್ತಪಡಿಸಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಟ್ಯಾಗ್ ಮಾಡಿದ್ದರು.
ನಾನು ದೆಹಲಿಯಿಂದ ನನ್ನ ತಾಯ್ನಾಡು ಉತ್ತರಾಖಂಡ್ ಗೆ ಸ್ಥಳಾಂತರವಾಗಲು ಬಯಸುತ್ತಿದ್ದೇನೆ. ಇದಕ್ಕಾಗಿ 3 ವರ್ಷಗಳಿಂದ ಮನೆ ಕಟ್ಟಲು ಭೂಮಿಯ ಖರೀದಿಗೆ ಹುಡುಕುತ್ತಿದ್ದೇನೆ. ಆದರೆ ಉತ್ತರಾಖಂಡ್ ನಲ್ಲಿ ಸೂಕ್ತವಾದ ಭೂಮಿ ಖರೀದಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನನಗೆ ಸಹಾಯ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ರಿಷಭ್ ಪಂತ್ ಮನವಿ ಮಾಡಿದ್ದರು.
ಇದಕ್ಕೆ ಸಿಎಂ ಪುಷ್ಕರ್ ಧಾಮಿ ಪ್ರತಿಕ್ರಿಯಿಸಿದ್ದು, ನಿಯಮದ ಪ್ರಕಾರವೇ ಈ ಕೆಲಸ ಮಾಡಿಕೊಟ್ಟು, ಪಂತ್ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.
ಪ್ರಿಯ ರಿಷಭ್ ಪಂತ್, ನೀವು ಉತ್ತರಾಖಂಡದ ಹೆಮ್ಮೆ. ನಿಮ್ಮ ಅದ್ಭುತ ಆಟ ಮತ್ತು ಸಾಧನೆಗಳಿಂದ ನೀವು ದೇಶ ಹಾಗೂ ಜಗತ್ತಿನಲ್ಲಿ ದೇವಭೂಮಿಯ ಹೆಸರನ್ನು ಬೆಳಗಿದ್ದೀರಿ. ನಿಮ್ಮ ತಾಯ್ನಾಡಿನ ಮೇಲಿನ ಪ್ರೀತಿ ಮತ್ತು ಇಲ್ಲಿಗೆ ಮರಳುವ ನಿಮ್ಮ ಭಾವನೆ ಅತ್ಯಂತ ಶ್ಲಾಘನೀಯ.
ನೀವು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಿ, ನಿಯಮಗಳ ಪ್ರಕಾರ ನಿಮಗೆ ಸಿಗಬೇಕಾದ ಎಲ್ಲಾ ರೀತಿಯ ಸಹಾಯವನ್ನು ಮಾಡಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.