ನವದೆಹಲಿ: ಪಿಂಚಣಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.11 ರಂದು ದೇಶಾದ್ಯಂತ ಮುಷ್ಕರ ನಡೆಸಲು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಿರ್ಧರಿಸಿದೆ.
5 ದಿನಗಳ ಬ್ಯಾಂಕಿಂಗ್ ನೀತಿ ಅನುಷ್ಠಾನದಲ್ಲಿನ ವಿಳಂಬ, ಕಾರ್ಯಕ್ಷಮತೆಗೆ ಸಂಬಂಧಿಸಿದ ಪ್ರೋತ್ಸಾಹಕ ಯೋಜನೆಯ ಮೇಲಿನ ಭಿನ್ನಾಭಿಪ್ರಾಯಗಳು ಮತ್ತು ಪಿಂಚಣಿ ಸಂಬಂಧಿತ ಸಮಸ್ಯೆಗಳು ಬೇಡಿಕೆಗಳಲ್ಲಿ ಸೇರಿವೆ. ಮುಷ್ಕರ ನಡೆದರೆ, ದೇಶದ ಹಲವು ಭಾಗಗಳಲ್ಲಿ ನಾಲ್ಕು ದಿನಗಳವರೆಗೆ ಬ್ಯಾಂಕಿಂಗ್ ಸೇವೆಗಳು, ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ, ಪರಿಣಾಮ ಬೀರುತ್ತವೆ.
ಸೆಪ್ಟೆಂಬರ್ 11 ಶುಕ್ರವಾರ, ಮತ್ತು ನಂತರದ ಎರಡು ದಿನಗಳು ಬ್ಯಾಂಕ್ ರಜಾದಿನಗಳಾಗಿವೆ. ಸೆಪ್ಟೆಂಬರ್ 14 ಗಣೇಶ ಚತುರ್ಥಿಯಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ದಿನವಾಗಿದೆ.
9 ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಗಳ ಒಕ್ಕೂಟವಾದ UFBU, ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗುವ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ತಮ್ಮ ಬೇಡಿಕೆಗಳು ಸರ್ಕಾರ ಮತ್ತು ಬ್ಯಾಂಕ್ ಆಡಳಿತಕ್ಕೆ ಕೇಳಿಸದೇ ಇದ್ದರೆ ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಹ ಅವರು ನಿರ್ಧರಿಸಿದ್ದಾರೆ.
ತಮ್ಮ ಪ್ರಮುಖ ಬೇಡಿಕೆಗಳ ಬಗ್ಗೆ ಸರ್ಕಾರದ 'ನಕಾರಾತ್ಮಕ ವರ್ತನೆ' ತೋರಿದೆ ಎಂದು ಒಕ್ಕೂಟಗಳು ಹೇಳಿದ್ದು, ಭಾನುವಾರ ನಡೆದ ಸಭೆಯಲ್ಲಿ ಮುಷ್ಕರದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು UFBU ಹೇಳಿಕೆಯಲ್ಲಿ ತಿಳಿಸಿದೆ.
ಐದು ದಿನಗಳ ಬ್ಯಾಂಕಿಂಗ್ ಕುರಿತು, ಭಾರತೀಯ ಬ್ಯಾಂಕುಗಳ ಸಂಘ (IBA) ಮಾರ್ಚ್ 8, 2024 ರಂದು ಸಹಿ ಮಾಡಿದ 12 ನೇ ಒಪ್ಪಂದ/9 ನೇ ಜಂಟಿ ಟಿಪ್ಪಣಿಯ ಭಾಗವಾಗಿ ಪ್ರಸ್ತಾವನೆಗೆ ಒಪ್ಪಿಕೊಂಡಿರುವುದಾಗಿ ಹೇಳಿದೆ. ಇದರ ಅಡಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಕೆಲಸದ ಸಮಯವನ್ನು 40 ನಿಮಿಷಗಳಷ್ಟು ಹೆಚ್ಚಿಸಲಾಗುತ್ತದೆ.
ನಂತರ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಬೇಡಿಕೆ ಈಡೇರದೇ ಹಾಗೆಯೇ ಉಳಿದಿದೆ ಎಂದು ಅದು ಹೇಳಿದೆ.