ಎಂಸಿಎ 
ದೇಶ

'ತಾವು ಕುಡಿಯುತ್ತಿರುವುದು 'ನಾನ್-ವೆಜ್ ಚಹಾ' ಎಂಬುದು ಕ್ರಿಕೆಟಿಗರಿಗೆ ಗೊತ್ತೇ?': MCA ಕಿಚನ್‌ನಲ್ಲಿ ಜಿರಳೆ ಪತ್ತೆಗೆ ಬಾಂಬೆ ಹೈಕೋರ್ಟ್ ಕಿಡಿ

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ಆಹಾರ ಮಳಿಗೆಗಳ ಪರವಾನಗಿಗಳನ್ನು ಅಮಾನತುಗೊಳಿಸುವ ಎಫ್‌ಡಿಎ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(MCA) ಅಡುಗೆಮನೆಗಳಲ್ಲಿ ಕೀಟಗಳು ಪತ್ತೆಯಾಗಿರುವುದನ್ನು ಗಮನಿಸಿದ ಬಾಂಬೆ ಹೈಕೋರ್ಟ್, ತಾವು ಸೇವಿಸುತ್ತಿರುವುದು 'ನಾನ್-ವೆಜ್ ಚಹಾ' ಎಂದು ಆಟಗಾರರಿಗೆ ತಿಳಿದಿತ್ತೇ ಎಂದು ಮಂಗಳವಾರ ವ್ಯಂಗ್ಯವಾಗಿ ಪ್ರಶ್ನಿಸಿದ್ದು, ಈ ಸೌಲಭ್ಯವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಎಫ್‌ಡಿಎ (FDA) ಗೆ ನಿರ್ದೇಶನ ನೀಡಿದೆ.

ಗುರುವಾರ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತದ (FDA) ಅಧಿಕಾರಿಗಳು ಪರಿಶೀಲನೆ ನಡೆಸುವ ಮೊದಲು, ತಮ್ಮ ಆಹಾರ ಮಾರಾಟ ಮಳಿಗೆಗಳ ಆವರಣವನ್ನು ಸ್ವಚ್ಛಗೊಳಿಸುವಂತೆಯೂ ನ್ಯಾಯಾಲಯ MCAಗೆ ಸೂಚಿಸಿತು.

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಕ್ರಿಕೆಟ್ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐದು ಆಹಾರ ಮಳಿಗೆಗಳ ಪರವಾನಗಿಗಳನ್ನು, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಗಂಭೀರ ಉಲ್ಲಂಘನೆಗಳ ಕಾರಣದಿಂದ ಅಮಾನತುಗೊಳಿಸುವ ಎಫ್‌ಡಿಎ (FDA) ನಿರ್ಧಾರವನ್ನು ಪ್ರಶ್ನಿಸಿ ಎಂಸಿಎ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಾದ್ ಅವರಿದ್ದ ಪೀಠವು ನಡೆಸಿತು.

ಎಫ್‌ಡಿಎ ಪ್ರಕಾರ, ಎಂಸಿಎ ಹೆಸರಿನಲ್ಲಿ ಪರವಾನಗಿಗಳನ್ನು ನೀಡಲಾಗಿದ್ದರೂ, ಈ ಉಪಹಾರ ಮಳಿಗೆಗಳನ್ನು 'M/s ಶಿರ್ಕೆ ಇನ್‌ಫ್ರಾಸ್ಟ್ರಕ್ಚರ್' ಎಂಬ ಮತ್ತೊಂದು ಸಂಸ್ಥೆ ನಿರ್ವಹಿಸುತ್ತಿತ್ತು.

MCA ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್ ನಂಕಾನಿ, ಆಹಾರ ಮಳಿಗೆಗಳಿಗೆ ತಮ್ಮಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವ ಸಲುವಾಗಿ FDA ಮೊದಲು 'ಸುಧಾರಣಾ ಸೂಚನೆ'ಯನ್ನು (improvement notice) ನೀಡಬೇಕಿತ್ತು ಎಂದು ಹೇಳಿದರು.

ಆದರೆ, ತಪಾಸಣೆಯ ವೇಳೆ FDA ಅಧಿಕಾರಿಗಳಿಗೆ 'ಗಂಭೀರ ಉಲ್ಲಂಘನೆಗಳು' ಕಂಡುಬಂದಾಗ ಅಂತಹ ಸೂಚನೆ ನೀಡುವ ಅಗತ್ಯವಿರಲಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

'ಎಫ್‌ಡಿಎ ಪರಿಶೀಲನಾ ವರದಿ ಪ್ರಕಾರ, ಆಹಾರ ಮಳಿಗೆಗಳ ಅಡುಗೆಮನೆಯಲ್ಲಿ ಜಿರಲೆ ಮತ್ತು ನೊಣಗಳ ಹಾವಳಿ ಇತ್ತು ಹಾಗೂ ನೆಲವು ಜಾರುವಂತೆಯೂ ಮತ್ತು ಕೊಳಕಾಗಿಯೂ ಇತ್ತು. ನೈರ್ಮಲ್ಯ ಮಾನದಂಡಗಳ ಗಂಭೀರ ಉಲ್ಲಂಘನೆ ಕಂಡುಬಂದಲ್ಲಿ, ಎಫ್‌ಡಿಎ ಪರವಾನಗಿಯನ್ನು ತಕ್ಷಣವೇ ಅಮಾನತುಗೊಳಿಸಲು ನಿರ್ಧರಿಸಬಹುದು' ಎಂದು ನ್ಯಾಯಾಲಯ ಹೇಳಿತು.

ನಂತರ ನಂಕಾನಿ, ಎಲ್ಲ ರೆಸ್ಟೋರೆಂಟ್‌ಗಳು ಅಥವಾ ಆಹಾರ ಮಳಿಗೆಗಳು ಮುಚ್ಚಲ್ಪಟ್ಟಿರುವುದರಿಂದ, ಮೈದಾನದಲ್ಲಿ ಆಡಲು ಬರುವ ಕ್ರಿಕೆಟಿಗರಿಗೆ ಕನಿಷ್ಠ ಚಹಾವನ್ನೂ ನೀಡಲು ಎಂಸಿಎಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ತಾವು 'ಮಾಂಸಾಹಾರಿ ಚಹಾ' ಸೇವಿಸುತ್ತಿದ್ದೇವೆ ಎಂಬ ವಿಷಯ ಆ ಕ್ರಿಕೆಟಿಗರಿಗೆ ತಿಳಿದಿತ್ತೇ ಎಂದು ನ್ಯಾಯಾಲಯ ತಮಾಷೆಯಾಗಿ ಪ್ರಶ್ನಿಸಿತು.

'ಆಹಾರ ಮಳಿಗೆಗಳ ಅಡುಗೆಮನೆಗಳಲ್ಲಿ ನೊಣಗಳು ಮತ್ತು ಜಿರಲೆಗಳಿರುತ್ತವೆ. ಇದು ಮಾಂಸಾಹಾರಿ ಚಹಾ. ತಾವು ಇಂತಹ ಚಹಾವನ್ನು ಸೇವಿಸುತ್ತಿದ್ದೇವೆ ಎಂಬುದು ಅವರಿಗೆ (ಕ್ರಿಕೆಟಿಗರಿಗೆ) ತಿಳಿದಿದೆಯೇ?' ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಘುಗೆ ಹಗುರವಾದ ಧಾಟಿಯಲ್ಲಿ ಪ್ರಶ್ನಿಸಿದರು.

ಆದಾಗ್ಯೂ, ಆಟಗಾರರಿಗೆ ಚಹಾ ಅಥವಾ ಕಾಫಿ ಒದಗಿಸಲು 'ವೆಂಡಿಂಗ್ ಮೆಷಿನ್' ಅಳವಡಿಸಲು ನ್ಯಾಯಾಲಯವು ಎಂಸಿಎಗೆ ಅನುಮತಿ ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

'30 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ,ಇನ್ನು ಸಾಧ್ಯವಿಲ್ಲ': ನಿವೃತ್ತಿಯ ಸುಳಿವು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಹೊಸ ಪೀಳಿಗೆಗೆ ದಾರಿ ಮಾಡಿಕೊಡುವ ಇಂಗಿತ!

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!