ನೇಪಾಳ ಪ್ರವಾಹ 
ದೇಶ

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

ನೇಪಾಳ-ಚೀನಾ ಗಡಿ ಪ್ರದೇಶದ ಸಮೀಪ ಸಂಭವಿಸಿರುವ ಶಂಕಿತ ದಿಢೀರ್ ಪ್ರವಾಹ ಮತ್ತು ಹಿಮನದಿ ಸರೋವರ ಸ್ಫೋಟ ಪ್ರವಾಹ (GLOF) ಚಟುವಟಿಕೆಯಿಂದ ಈ ನೀರಿನ ಏರಿಕೆ ಉಂಟಾಗಿರಬಹುದು..

ನವದೆಹಲಿ: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದೆ.

ನೇಪಾಳ ಭಾಗದಲ್ಲಿರುವ ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಜಲ ಆಯೋಗ (CWC) ತಿಳಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಹೇಳಿದೆ.

ನೇಪಾಳದ ಪ್ರವಾಹದ ಪರಿಣಾಮವಾಗಿ ಭಾರತದಲ್ಲಿ ಗಂಡಕ್‌ ನದಿಯ ಕೆಳಹರಿವಿನ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮತ್ತು ಬಿಹಾರದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.

ಗಂಡಕ್‌ ನದಿಗೆ ಪ್ರವಾಹದ ಅಲೆ ಸಾಧ್ಯತೆ

ಕೇಂದ್ರ ಜಲ ಆಯೋಗದ ಸಲಹೆಯ ಪ್ರಕಾರ, ಭಾರತ-ನೇಪಾಳ ಗಡಿಯಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ನೇಪಾಳದ ಫುರ್ಕೆ ಖೋಲಾ ಪ್ರದೇಶದಲ್ಲಿ ತ್ರಿಶೂಲಿ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ವರದಿಯಾಗಿದೆ.

ನೇಪಾಳ-ಚೀನಾ ಗಡಿ ಪ್ರದೇಶದ ಸಮೀಪ ಸಂಭವಿಸಿರುವ ಶಂಕಿತ ದಿಢೀರ್ ಪ್ರವಾಹ ಮತ್ತು ಹಿಮನದಿ ಸರೋವರ ಸ್ಫೋಟ ಪ್ರವಾಹ (GLOF) ಚಟುವಟಿಕೆಯಿಂದ ಈ ನೀರಿನ ಏರಿಕೆ ಉಂಟಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ನೇಪಾಳದ ಭಾಗದಲ್ಲಿರುವ ಜಲಾಶಯಗಳ ನೀರಿನ ಮಟ್ಟ ಇದೀಗ ಕಡಿಮೆಯಾಗುತ್ತಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜನರು ಆತಂಕಪಡುವಂತಹ ಪರಿಸ್ಥಿತಿ ಸದ್ಯಕ್ಕೆ ಎದುರಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಆದಾಗ್ಯೂ, ಪ್ರವಾಹದ ಪರಿಣಾಮ ಭಾರತದಲ್ಲಿ ಗಂಡಕ್‌ ನದಿಯ ಕೆಳಹರಿವಿನ ಪ್ರದೇಶಗಳಿಗೆ ತಲುಪುವ ಸಾಧ್ಯತೆ ಇದೆ ಎಂದು CWC ಎಚ್ಚರಿಸಿದೆ.

ಉತ್ತರ ಪ್ರದೇಶ, ಬಿಹಾರಕ್ಕೆ ಕಟ್ಟೆಚ್ಚರ

ಗಂಡಕ್‌ ನದಿಯ ತೀರದಲ್ಲಿರುವ ಉತ್ತರ ಪ್ರದೇಶ ಮತ್ತು ಬಿಹಾರದ ಪ್ರದೇಶಗಳು ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯನ್ನೂ ಸಜ್ಜುಗೊಳಿಸಲಾಗಿದೆ.

ಭಾರತ-ನೇಪಾಳ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಥಳೀಯ ಭಾರತೀಯ ಸಮುದಾಯಗಳ ಸುರಕ್ಷತೆಗಾಗಿ ಅಗತ್ಯವಿರುವ ಸ್ಥಳಾಂತರ ಹಾಗೂ ಇತರ ನೆರವು ಕ್ರಮಗಳನ್ನು ಬಿಹಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಕೈಗೊಂಡಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

‘ನೇಪಾಳದೊಂದಿಗೆ ಭಾರತ ನಿಂತಿದೆ’

ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಅಮಿತ್‌ ಶಾ, ಸಂಕಷ್ಟದ ಸಮಯದಲ್ಲಿ ಭಾರತ ನೇಪಾಳದೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ.

‘ನೇಪಾಳದಲ್ಲಿ ಪ್ರವಾಹದಿಂದ ಉಂಟಾಗಿರುವ ವಿನಾಶ ಅತ್ಯಂತ ದುಃಖಕರವಾಗಿದೆ. ಈ ದುರಂತದ ಕುರಿತು ಬಿಹಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಪರಿಣಾಮ ಬೀರುವ ಸಾಧ್ಯತೆಯಿರುವ ಗಡಿಭಾಗಗಳಲ್ಲಿ NDRF, ಸ್ಥಳೀಯ ಆಡಳಿತ ಹಾಗೂ ಪರಿಹಾರ-ರಕ್ಷಣಾ ತಂಡಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ’ ಎಂದು ಶಾ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಕೇಂದ್ರ ಗೃಹ ವ್ಯವಹಾರಗಳ, ವಿದೇಶಾಂಗ ವ್ಯವಹಾರಗಳ, ಜಲಶಕ್ತಿ ಹಾಗೂ ರಕ್ಷಣಾ ಸಚಿವಾಲಯಗಳ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಸದ್ಯ ಜಲಾಶಯಗಳ ನೀರಿನ ಮಟ್ಟ ಇಳಿಕೆಯಾಗುತ್ತಿರುವುದರಿಂದ ಭಾರತದಲ್ಲಿ ಆತಂಕಪಡುವಂತಹ ಪರಿಸ್ಥಿತಿ ಇಲ್ಲ, ಆದರೆ ಗಂಡಕ್‌ ನದಿಯ ನೀರಿನ ಮಟ್ಟದ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರ ನಿಗಾ ಇರಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!