ಹೈದರಾಬಾದ್: ವಧುವರರ ಕುಟುಂಬ ಸದಸ್ಯರಾಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಟಿಆರ್ ಎಸ್ ನಾಯಕಿ ಕಲ್ವಕುಂಟ್ಲ ಕವಿತಾ ಅವರು ಮುದಿರಾಜ್ ಸಂಪ್ರದಾಯದಂತೆ ವಧುವಿಗೆ ತಾನೇ ತಾಳಿ ಕಟ್ಟಿದ್ದಾರೆ.
ಟಿಆರ್ ಎಸ್ ನಾಯಕಿ ಕವಿತಾ ಅವರು, ಬುಧವಾರ ತೆಲಂಗಾಣ ರಕ್ಷಣಾ ಸೇನಾ ನಾಯಕ ಬಾಷಬೋಯಿನ್ ಬಾಲಪ್ರಸಾದ್ ಹಾಗೂ ಶಿವಾನಿ ಅವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಬಾಲಪ್ರಸಾದ್ ಯಾದದ್ರಿ ಅವರು ಭುವನಗಿರಿ ಜಿಲ್ಲೆಯ ಗುಡೂರು ಗ್ರಾಮದವರು. ಶಿವಾನಿ ಸೀತಾ ಫಲ್ಮಂಡಿಯವರು.
ಬಾಲಪ್ರಸಾದ್ ಅವರು, ಕಲ್ವಕುಂಟ್ಲ ಕವಿತಾ ಅವರು ತಮ್ಮ ಕುಟುಂಬದ ಮಗಳಾಗಿ ವಿವಾಹ ವಿಧಿವಿಧಾನಗಳನ್ನು ನೆರವೇರಿಸಬೇಕು ಎಂದು ಬಯಸಿದ್ದರು ಎನ್ನಲಾಗಿದೆ.
ಅದರಂತೆ ಕಲ್ವಕುಂಟ್ಲ ಕವಿತಾ ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮುದಿರಾಜ್ ಪದ್ಧತಿಯಂತೆ ವಧುವಿಗೆ ತಾಳಿ ಕಟ್ಟಿದರು ಎನ್ನಲಾಗಿದೆ.
ಏನಿದು ಮುದಿರಾಜ್ ಪದ್ಧತಿ?
ಕುಟುಂಬದವರು ವಿವರಿಸಿದ ಪ್ರಕಾರ, ಮುದಿರಾಜ್ ಸಂಪ್ರದಾಯದಲ್ಲಿ, ವರನು ಮಂಗಳಸೂತ್ರವನ್ನು ವಧುವಿಗೆ ಕಟ್ಟುವ ಮೊದಲು ವರನ ಸಹೋದರಿ ಅಥವಾ ಆತನ ಕುಟುಂಬದ ಇನ್ನೊಬ್ಬ ಮಹಿಳಾ ಸದಸ್ಯರು ವಧುವಿಗೆ ತಾಳಿ ಕಟ್ಟುತ್ತಾರೆ.
ಕಲ್ವಕುಂಟ್ಲ ಕವಿತಾ ಅವರು ಗೌರಿ ಪೂಜೆಯಲ್ಲಿ ಭಾಗವಹಿಸಿ, ನಂತರ ಅರಿಶಿನ ದಾರದಿಂದ ಶಿವಾನಿಯ ಕುತ್ತಿಗೆಗೆ ಮೂರು ಗಂಟುಗಳನ್ನು ಕಟ್ಟಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.