ಮಾಮ್ದೋಟ್: ಪಂಜಾಬ್ನಿಂದ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಶಸ್ತ್ರಸಜ್ಜಿತ ದುಷ್ಕರ್ಮಿಗಳು ಆಮ್ ಆದ್ಮಿ ಪಕ್ಷದ (AAP) ನಾಯಕ ಗುರ್ಪ್ರೀತ್ ಸಿಂಗ್ ಗೋಪಿ ಅವರನ್ನು ಹತ್ಯೆ ಮಾಡಿದ್ದಾರೆ. ಮಾಮ್ದೋಟ್ ಪಟ್ಟಣದಲ್ಲಿ ಗೋಪಿ ಅವರ ಬೈಕ್ ನ್ನು ಬೆನ್ನಟ್ಟಿದ್ದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರ್ಪ್ರೀತ್ ಎಂಬ ವ್ಯಕ್ತಿಯೊಂದಿಗೆ ಗೋಪಿ ಬೈಕ್ ನಲ್ಲಿ ತೆರಳುತ್ತಿದ್ದಾಗ,ಕಾರಿನಲ್ಲಿ ಬಂದ ಅಪರಿಚಿತ ದಾಳಿಕೋರರು, ಬೆನ್ನಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ದಾಳಿಯ ಹಿಂದೆ ಹಳೆಯ ವಿವಾದ ಅಥವಾ ಚುನಾವಣೆಗೆ ಸಂಬಂಧಿಸಿದ ದ್ವೇಷವಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
"ಈ ಎರಡು ಗುಂಪುಗಳ ನಡುವೆ ಹಳೆಯ ವಿವಾದವಿತ್ತು. ದಾಳಿಕೋರರನ್ನು ಗುರುತಿಸಲಾಗಿದ್ದು, ನಮ್ಮ ತಂಡಗಳನ್ನು ರಚಿಸಲಾಗಿದೆ. ಅವರನ್ನು ಆದಷ್ಟು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಭೂಪಿಂದರ್ ಸಿಂಗ್ ಸಿಧು ಹೇಳಿದ್ದಾರೆ.
ಮುಖ್ಯ ಆರೋಪಿಯು ಅಪರಾಧ ಹಿನ್ನೆಲೆ (history-sheeter) ಹೊಂದಿರುವ ವ್ಯಕ್ತಿಯಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವನು ಎಂದು ಸಿಧು ತಿಳಿಸಿದ್ದಾರೆ.
ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದು, ತನಿಖೆಯ ಭಾಗವಾಗಿ ವಿವಿಧ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ. ಎಎಪಿ ನಾಯಕನ ಹತ್ಯೆಯು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಹೊಸ ಆತಂಕವನ್ನು ಹುಟ್ಟುಹಾಕಿದೆ.