ನವದೆಹಲಿ: ಸಮಾಜದಲ್ಲಿ ಬದಲಾವಣೆ ತರುವ ಭಾರತೀಯರ ಪ್ರಯತ್ನಗಳನ್ನು ಶ್ಲಾಘಿಸುವ ತಮ್ಮ ಪರಂಪರೆಯನ್ನು ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಾನುವಾರ ಮುಂಬೈ ಮೂಲದ ಕೃಷ್ಣ ಶೇಷಾದ್ರಿ, ನಾಗಾಲ್ಯಾಂಡ್ನ ಹೂ ಬೆಳೆಗಾರ್ತಿ ಹಾಗೂ ಒಡಿಶಾದ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುವ ಮಹಿಳೆಯರ ಪ್ರಯತ್ನಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ 137ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಮತ್ತು ‘ವೋಕಲ್ ಫಾರ್ ಲೋಕಲ್’ ಪ್ರಮುಖ ವಿಷಯಗಳಾಗಿ ಹೊರಹೊಮ್ಮಿದವು.
ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮದ 137ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅವರು ‘ಭಾರತ್ರಾಜ್ಯ’ ವೆಬ್ಸೈಟ್ ನಿರ್ಮಿಸಿರುವ ಕೃಷ್ಣ ಶೇಷಾದ್ರಿ ಅವರನ್ನು ಶ್ಲಾಘಿಸಿದರು. ಈ ವೆಬ್ಸೈಟ್ ಮೂಲಕ ಬಳಕೆದಾರರು ಯಾವುದೇ ಒಂದು ವರ್ಷವನ್ನು ಆಯ್ಕೆ ಮಾಡಿಕೊಂಡು, ಆ ಸಂದರ್ಭದಲ್ಲಿ ಭಾರತದ ಯಾವ ಭಾಗವನ್ನು ಯಾರು ಆಳುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಬಹುದು.
ಆಷಾಢ ಏಕಾದಶಿಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶೇಷಾದ್ರಿ ಅವರ ಈ ಪ್ರಯತ್ನ ತಮ್ಮ ಗಮನಕ್ಕೆ ಬಂದಿತ್ತು. ಅವರ ಕಲ್ಪನೆ ತಮಗೆ ಆಸಕ್ತಿದಾಯಕವೆನಿಸಿತು ಎಂದು ಪ್ರಧಾನಿ ಹೇಳಿದರು.
ಕೃಷ್ಣ ಶೇಷಾದ್ರಿ ಅವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೂರವಾಣಿ ಮೂಲಕ ಪ್ರಧಾನಿಯೊಂದಿಗೆ ಸಂವಾದ ನಡೆಸಿದರು. ತಂತ್ರಜ್ಞಾನ ಮತ್ತು ಇತಿಹಾಸದಲ್ಲಿನ ತಮ್ಮ ಆಸಕ್ತಿ ಹಾಗೂ ಈ ಎರಡನ್ನೂ ‘ಭಾರತ್ರಾಜ್ಯ’ ಯೋಜನೆಯ ಮೂಲಕ ಹೇಗೆ ಒಟ್ಟುಗೂಡಿಸಿದ್ದಾರೆ ಎಂಬುದನ್ನು ಅವರು ಹಂಚಿಕೊಂಡರು.
ದೇಶದ ಆರ್ಥಿಕತೆಯಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ‘ಪಿಎಂ ಸ್ವನಿಧಿ ಯೋಜನೆ’ ಲಕ್ಷಾಂತರ ಮಹಿಳಾ ಉದ್ಯಮಿಗಳಿಗೆ ಹೊಸ ಶಕ್ತಿ ನೀಡುತ್ತಿದೆ ಎಂದು ಹೇಳಿದರು. ಮಹಿಳಾ ಸಬಲೀಕರಣದ ಈ ಅಂಶದ ಕುರಿತು ಅಗತ್ಯ ಪ್ರಮಾಣದಲ್ಲಿ ಚರ್ಚೆಯಾಗುತ್ತಿಲ್ಲ ಎಂದರು.
ಪಿಎಂ ಸ್ವನಿಧಿ ಯೋಜನೆಯ ಫಲಾನುಭವಿಗಳಲ್ಲಿ ಶೇ.46ರಷ್ಟು ಮಂದಿ ಮಹಿಳೆಯರು ಎಂದು ಅವರು ತಿಳಿಸಿದರು.
ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ನಮ್ಮ ನಗರಗಳು ಮತ್ತು ಪಟ್ಟಣಗಳ ಬೀದಿಗಳಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕೆಲವರು ತರಕಾರಿ ಮಾರುತ್ತಾರೆ, ಕೆಲವರು ಹಣ್ಣುಗಳನ್ನು ಮಾರುತ್ತಾರೆ, ಮತ್ತೆ ಕೆಲವರು ಚಹಾ ಅಂಗಡಿಗಳನ್ನು ನಡೆಸುತ್ತಾರೆ. ಇನ್ನೂ ಕೆಲವರು ಹೂವು, ದೀಪಗಳು ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ.
ಅನೇಕ ಬಾರಿ ಸ್ವಲ್ಪ ಪ್ರಮಾಣದ ಬಂಡವಾಳದ ಕೊರತೆಯಿಂದ ಅವರ ವ್ಯವಹಾರಗಳು ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ ಈಗ ಇಂತಹ ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರು ‘ಪಿಎಂ ಸ್ವನಿಧಿ ಯೋಜನೆಯಿಂದ ಹೊಸ ಶಕ್ತಿ ಪಡೆಯುತ್ತಿದ್ದಾರೆ. ಮಹಿಳಾ ಸಬಲೀಕರಣದ ಈ ಅಂಶದ ಕುರಿತು ಎಷ್ಟು ಚರ್ಚೆಯಾಗಬೇಕೋ ಅಷ್ಟು ಚರ್ಚೆಯಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಘಾಜಿಯಾಬಾದ್ನ ಬಬಿತಾ ಶರ್ಮಾ ಅವರು ರಸ್ತೆಬದಿಯ ಅಂಗಡಿಯಿಂದ ಶಾಶ್ವತ ಅಂಗಡಿಗೆ ಸ್ಥಳಾಂತರಗೊಂಡಿರುವುದನ್ನು ಹಾಗೂ ಬೆಂಗಳೂರಿನ ಟಿ.ಎಸ್. ನಿಂಗಮ್ಮ ಅವರು ತಮ್ಮ ಪತಿಯೊಂದಿಗೆ ಸಣ್ಣ ಹೋಟೆಲ್ ನಡೆಸುತ್ತಿರುವುದನ್ನು ಪ್ರಧಾನಿ ಉದಾಹರಣೆಯಾಗಿ ನೀಡಿದರು.
ಒಡಿಶಾದ ದೇಬ್ರಿಗಢ್ನ ‘ಧೋರ್ಡ್ರಕುಸುಮ್’ ಗ್ರಾಮದ ಮೈಥಿಲಿ ಭುಯೆ ಅವರು ಅರಣ್ಯ ಸಂರಕ್ಷಣೆ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ನೀಡುತ್ತಿರುವ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ಕೆಲವು ವರ್ಷಗಳ ಹಿಂದಿನವರೆಗೆ ಮೈಥಿಲಿ ಭುಯೆ ಅವರು ಉರುವಲು ಸಂಗ್ರಹಿಸಲು ಅಥವಾ ಮಹುವಾ ಮತ್ತು ಕೆಂಡು ಎಲೆಗಳನ್ನು ಕೀಳಲು ಅರಣ್ಯಕ್ಕೆ ಹೋಗುತ್ತಿದ್ದರು. ಆದರೆ ನಂತರ ಅವರು ದೇಬ್ರಿಗಢ್ ಪರಿಸರ ಪ್ರವಾಸೋದ್ಯಮದೊಂದಿಗೆ ಕೈಜೋಡಿಸಿದರು. ಅಲ್ಲಿಂದ ಅರಣ್ಯದೊಂದಿಗಿನ ಅವರ ಸಂಬಂಧಕ್ಕೆ ಹೊಸ ದಿಕ್ಕು ದೊರೆಯಿತು. ಈಗ ಅರಣ್ಯವೇ ಅವರ ಜೀವನೋಪಾಯದ ಸಾಧನವಾಗಿದೆ ಎಂದು ಪ್ರಧಾನಿ ಹೇಳಿದರು.
ಮೈಥಿಲಿ ಅವರ ಪ್ರಯತ್ನದಿಂದ ಪ್ರೇರಣೆ ಪಡೆದು ಅವರ ಗ್ರಾಮದ 60ಕ್ಕೂ ಹೆಚ್ಚು ಮಹಿಳೆಯರು ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಪ್ರವಾಸೋದ್ಯಮದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ನಾಗಾಲ್ಯಾಂಡ್ನ ಫೆಕ್ ಜಿಲ್ಲೆಯ ವೆಸಾಲು ಪುರೋ ಅವರ ಪಯಣವನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದರು. ಸಣ್ಣ ಹವ್ಯಾಸವೊಂದು ಕೆಲವೊಮ್ಮೆ ದೊಡ್ಡ ಅವಕಾಶಗಳ ಬಾಗಿಲು ತೆರೆಯಬಹುದು ಎಂದು ಹೇಳಿದರು.
ಮದುವೆ ಮತ್ತು ಹಬ್ಬಗಳ ಸಂದರ್ಭದಲ್ಲಿ ಹೂವುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿದ ವೆಸಾಲು ಅವರು ತಮ್ಮ ಹವ್ಯಾಸವನ್ನೇ ಜೀವನೋಪಾಯದ ಅವಕಾಶವಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿದರು ಎಂದು ಮೋದಿ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಿಂದ ವೈಜ್ಞಾನಿಕ ಹೂ ಕೃಷಿಯ ಕುರಿತು ತರಬೇತಿ ಪಡೆದ ಅವರು, ಕೇವಲ ಕಾಲು ಎಕರೆ ಭೂಮಿಯಲ್ಲಿ ಸಾವಿರಾರು ಗ್ಲಾಡಿಯೋಲಸ್ ಹೂವಿನ ಗೆಡ್ಡೆಗಳನ್ನು ನೆಟ್ಟರು ಎಂದು ಪ್ರಧಾನಿ ತಿಳಿಸಿದರು.
ಅವರ ಮೊದಲ ಪ್ರಯತ್ನದಲ್ಲೇ 5,000ಕ್ಕೂ ಹೆಚ್ಚು ಹೂವುಗಳು ಅರಳಿದವು, ನಗರ ಪ್ರದೇಶಗಳಿಂದ ಹಿಡಿದು ದೂರದ ಅರಣ್ಯ ಗ್ರಾಮಗಳವರೆಗೆ ದೇಶಾದ್ಯಂತ ಮಹಿಳೆಯರ ಬದುಕನ್ನು ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನ ಹೇಗೆ ಬದಲಾಯಿಸುತ್ತಿದೆ ಎಂಬುದಕ್ಕೆ ಈ ಕಥೆಗಳು ಸಾಕ್ಷಿಯಾಗಿವೆ ಎಂದು ಪ್ರಧಾನಿ ಹೇಳಿದರು.
ಸೆಪ್ಟೆಂಬರ್ನಲ್ಲಿ ನಡೆಯಲಿರುವ ಜನ್ಮಾಷ್ಟಮಿ ಮತ್ತು ವಿಶ್ವಕರ್ಮ ಪೂಜೆಯ ಹಿನ್ನೆಲೆಯಲ್ಲಿ, ‘ವೋಕಲ್ ಫಾರ್ ಲೋಕಲ್’ ಉಪಕ್ರಮವನ್ನು ಅಳವಡಿಸಿಕೊಂಡು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ನಾಗರಿಕರಿಗೆ ಕರೆ ನೀಡಿದರು. ಇದರಿಂದ ಆತ್ಮನಿರ್ಭರ ಭಾರತದ ಹಾದಿ ಮತ್ತಷ್ಟು ಬಲಗೊಳ್ಳಲಿದೆ ಎಂದರು.
ನಮ್ಮ ಹಬ್ಬಗಳು ಮತ್ತು ಆಚರಣೆಗಳು ನಮ್ಮ ಸಂಪ್ರದಾಯಗಳನ್ನು ಉಳಿಸುವುದರ ಜೊತೆಗೆ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತವೆ. ಮುಂದಿನ ದಿನಗಳಲ್ಲಿ ನಾವು ಹಲವು ಪ್ರಮುಖ ಹಬ್ಬಗಳನ್ನು ಆಚರಿಸಲಿದ್ದೇವೆ. ಪವಿತ್ರ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4ರಂದು ಆಚರಿಸಲಾಗುತ್ತದೆ. ಸೆಪ್ಟೆಂಬರ್ನಲ್ಲಿ ವಿಶ್ವಕರ್ಮ ಪೂಜೆಯನ್ನೂ ಆಚರಿಸಲಿದ್ದೇವೆ.
ಈ ಸಂದರ್ಭದಲ್ಲಿ ನಮ್ಮ ಸಮುದಾಯಗಳಲ್ಲಿರುವ ಕುಶಲಕರ್ಮಿಗಳು, ಕರಕುಶಲಕಾರರು ಮತ್ತು ವಿಶ್ವಕರ್ಮ ಸಹೋದರರನ್ನು ಗೌರವಿಸಬೇಕು. ಇನ್ನೂ ಕೆಲವೇ ತಿಂಗಳಲ್ಲಿ ದೀಪಾವಳಿ ಬರಲಿದೆ ಮತ್ತು ಅದರ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಈ ಹಬ್ಬದ ಸಂದರ್ಭದಲ್ಲಿ ಮತ್ತೊಮ್ಮೆ ‘ವೋಕಲ್ ಫಾರ್ ಲೋಕಲ್’ ಆಗಿರಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ‘ವೋಕಲ್ ಫಾರ್ ಲೋಕಲ್’ ಎಂದರೆ ಕೇವಲ ಮಣ್ಣಿನ ದೀಪಗಳನ್ನು ಖರೀದಿಸುವುದಲ್ಲ; ಅದರ ಹಿಂದಿನ ದೃಷ್ಟಿಕೋನ ಇನ್ನೂ ವಿಶಾಲವಾಗಿದೆ ಎಂದು ಮೋದಿ ಹೇಳಿದರು.
ದೇಶೀಯವಾಗಿ ಉತ್ಪಾದನೆಯಾಗುವ ಸರಕುಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುವಂತೆ ಗ್ರಾಹಕರನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮುನ್ನಡೆಸುತ್ತಿರುವ ರಾಷ್ಟ್ರೀಯ ಆಂದೋಲನವೇ ‘ವೋಕಲ್ ಫಾರ್ ಲೋಕಲ್’ ಆಗಿದೆ. ನೀತಿ ಆಯೋಗವೂ ಇದನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಸ್ಥಳೀಯ ಉದ್ಯಮಗಳನ್ನು ಸಬಲಗೊಳಿಸುವುದು ಮತ್ತು ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಆತ್ಮನಿರ್ಭರ ಭಾರತದ ಗುರಿಯನ್ನು ಮುನ್ನಡೆಸುವುದು ಇದರ ಉದ್ದೇಶವಾಗಿದೆ.
ಆಗಸ್ಟ್ 23ರಂದು ಭಾರತ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದ ಹಿನ್ನೆಲೆಯಲ್ಲಿ ಹಾಗೂ ಬಾಹ್ಯಾಕಾಶ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ‘ಮಿಷನ್ ಶಕ್ತಿಸ್ಯಾಟ್’ ಯೋಜನೆಯನ್ನು ಶ್ಲಾಘಿಸಿದರು.
ಈ ಯೋಜನೆಯ ಮೂಲಕ 108 ದೇಶಗಳ 12,000 ವಿದ್ಯಾರ್ಥಿನಿಯರಿಗೆ ಉಪಗ್ರಹ ತಂತ್ರಜ್ಞಾನ ಕಲಿಯಲು ಮತ್ತು ನವೋದ್ಯಮ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ದೊರೆಯುತ್ತಿದೆ ಎಂದು ಅವರು ಹೇಳಿದರು.
ಈ ಯೋಜನೆಯಡಿ ವಿದ್ಯಾರ್ಥಿನಿಯರು ಅಮೆರಿಕ, ಯುರೋಪ್ ಮತ್ತು ಭಾರತದಲ್ಲಿನ ಅಂತಾರಾಷ್ಟ್ರೀಯ ಪ್ರಾಧ್ಯಾಪಕರು ರೂಪಿಸಿರುವ 21 ಘಟಕಗಳ ಬಾಹ್ಯಾಕಾಶ ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತಾರೆ. ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳು, ಪ್ರೋಗ್ರಾಮಿಂಗ್ ಮತ್ತು ಪೇಲೋಡ್ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುಮಾರು 120 ಗಂಟೆಗಳ ಆನ್ಲೈನ್ ತರಬೇತಿ ಪಡೆಯುತ್ತಾರೆ.
ಭಾಗವಹಿಸುವ ಪ್ರತಿಯೊಂದು ದೇಶದಿಂದ ಒಬ್ಬ ವಿದ್ಯಾರ್ಥಿ ಭಾರತಕ್ಕೆ ಆಗಮಿಸಿ ಪ್ರಾಯೋಗಿಕ ಏಕೀಕರಣ ಮತ್ತು ನಾಯಕತ್ವ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುತ್ತಾರೆ.
ಹೊಸ ಸಾಮಾಜಿಕ ಜಾಲತಾಣ ಅಭಿಯಾನವಾಗಿ NashaMuktYuva ನ್ನು ರೂಪಿಸುವಂತೆ ಕರೆ ನೀಡಿದ ಪ್ರಧಾನಿ ಮೋದಿ, ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ಕಲೆ ಮತ್ತು ವಿವಿಧ ರೀತಿಯ ವಿಷಯಗಳನ್ನು ಸೃಷ್ಟಿಸುವಂತೆ ಯುವಜನರಿಗೆ ಮನವಿ ಮಾಡಿದರು.
ಮಾದಕ ವ್ಯಸನವು ಕೇವಲ ಒಬ್ಬ ವ್ಯಕ್ತಿಯನ್ನಷ್ಟೇ ಬಾಧಿಸುವುದಿಲ್ಲ; ಇಡೀ ಕುಟುಂಬ ಮತ್ತು ಸಮಾಜವೇ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮಾದಕ ವ್ಯಸನಮುಕ್ತ ಭಾರತದಿಗಾಗಿ ನೀವು ಪರಿಣಾಮಕಾರಿ ಘೋಷವಾಕ್ಯವನ್ನು ರೂಪಿಸಬಹುದೇ? ಮಾದಕ ವ್ಯಸನಮುಕ್ತ ಜೀವನದ ಸಂದೇಶವನ್ನು ಸಾರುವ ಹಾಡುಗಳನ್ನು ನಮ್ಮ ಯುವ ಸಂಗೀತಗಾರರು ರಚಿಸಬಹುದೇ? ಮಾದಕ ವಸ್ತುಗಳ ಅಪಾಯಗಳನ್ನು ಎತ್ತಿ ತೋರಿಸುವುದರ ಜೊತೆಗೆ ಚೇತರಿಕೆಯ ಮಾರ್ಗವನ್ನೂ ತೋರಿಸುವ ಮನಮುಟ್ಟುವ ಕಿರು ನಾಟಕಗಳನ್ನು ವಿದ್ಯಾರ್ಥಿಗಳು ಮತ್ತು ರಂಗತಂಡಗಳು ಬರೆಯಬಹುದೇ ಎಂದು ಪ್ರಧಾನಿ ಪ್ರಶ್ನಿಸಿದರು.
ನಮ್ಮ ದೇಶದಲ್ಲಿ ಅತ್ಯುತ್ತಮ ವಿಷಯ ರಚನೆಕಾರರಿಗೆ ಕೊರತೆಯಿಲ್ಲ. ಸಮಾಜಕ್ಕೆ ನೆರವಾಗುವಂತಹ ವಿವಿಧ ಭಾಷೆಗಳಲ್ಲಿನ ವಿಷಯಗಳನ್ನು ರಚಿಸಿ, ಸಾಮಾಜಿಕ ಜಾಲತಾಣಗಳಲ್ಲಿ NashaMuktYuva ಹ್ಯಾಶ್ಟ್ಯಾಗ್ನೊಂದಿಗೆ ಹಂಚಿಕೊಳ್ಳುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ದೇಶದಲ್ಲಿ ಜನಪ್ರಿಯವಾಗುತ್ತಿರುವ ಆವಕಾಡೊ ಕೃಷಿ ಮತ್ತು ಬಳಕೆಯ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಒಂದು ಕಾಲದಲ್ಲಿ ಭಾರತದಲ್ಲಿ ಹೆಚ್ಚು ಪರಿಚಿತವಾಗಿರದ ಹಾಗೂ ಕಡಿಮೆ ಮೌಲ್ಯ ಮತ್ತು ಬೇಡಿಕೆಯನ್ನು ಹೊಂದಿದ್ದ ಆವಕಾಡೊ ಹಣ್ಣು ಇದೀಗ ಹೆಚ್ಚು ಜನಪ್ರಿಯವಾಗಿದ್ದು, ಆಗಾಗ್ಗೆ ಜನರ ಊಟದ ಮೇಜಿನಲ್ಲೂ ಕಾಣಿಸಿಕೊಳ್ಳುತ್ತಿದೆ ಎಂದು ಮೋದಿ ಹೇಳಿದರು.
ಈ ದಿನಗಳಲ್ಲಿ ಆವಕಾಡೊ ಹಣ್ಣು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಿಂದೆ ಈ ಹಣ್ಣಿನ ಬಗ್ಗೆ ಬಹುತೇಕ ಯಾರಿಗೂ ತಿಳಿದಿರಲಿಲ್ಲ. ಅದರ ಮೌಲ್ಯ ಮತ್ತು ಬೇಡಿಕೆಯೆರಡೂ ಕಡಿಮೆಯಾಗಿದ್ದವು. ಆದರೆ ಇಂದು ಇದು ಆಗಾಗ್ಗೆ ಊಟದ ಮೇಜಿನ ಮೇಲೆ ಕಾಣಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.