ಧಾಮ್ಪುರ: ಮರವೊಂದು ನೆಲಕ್ಕುರುಳಿದ ಪರಿಣಾಮ ಅದರ ಬಳಿ ಇದ್ದ ಹೈ ಟೆನ್ಷನ್ ವೈರ್ ತುಂಡಾಗಿ ವೃದ್ಧನ ಮೇಲೆ ಬಿದ್ದ ಆತಂಕಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಮ್ಪುರದ ಕುವಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಿದ್ದ ಮರವೊಂದು ಏಕಾಏಕಿ ಮರ ಧರೆಗುರುಳಿ, ಅದರೊಂದಿಗೆ ವಿದ್ಯುತ್ ತಂತಿಯೂ ಕೆಳಗೆ ಬಿದ್ದ ಪರಿಣಾಮ ವೃದ್ಧರೊಬ್ಬರು ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿದ್ದರು. ಕೂಡಲೇ ಸಮಯಪ್ರಜ್ಞೆ ಮೆರೆದ ಸ್ಥಳೀಯ ಅಂಗಡಿಯವರು ಕೂಡಲೇ ಧಾವಿಸಿ ವೃದ್ಧನನ್ನು ರಕ್ಷಿಸಿದ್ದಾರೆ.
ಮೇಲ್ಛಾವಣಿಯೊಂದರಿಂದ ಮರ ಏಕಾಏಕಿ ರಸ್ತೆಗೆ ಬಿದ್ದಿದೆ. ಮರದೊಂದಿಗೆ ವಿದ್ಯುತ್ ತಂತಿಯೂ ಕಳಚಿ ಕೆಳಗೆ ಬಿದ್ದಿದೆ. ಇದೇ ವೇಳೆ ಆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೊಬ್ಬರ ಸುತ್ತ ವಿದ್ಯುತ್ ತಂತಿ ಸಿಲುಕಿಕೊಂಡಿದೆ. ವಿದ್ಯುತ್ ತಂತಿ ಲೈವ್ ಆಗಿದ್ದರಿಂದ ವೃದ್ಧನ ಜೀವಕ್ಕೆ ತಕ್ಷಣವೇ ಅಪಾಯ ಎದುರಾಗಿತ್ತು. ಘಟನೆ ಕಂಡು ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದರು.
ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸ್ಥಳೀಯ ಅಂಗಡಿಕಾರರು ಕ್ಷಣವೂ ತಡ ಮಾಡದೆ ವೃದ್ಧನ ನೆರವಿಗೆ ಧಾವಿಸಿದ್ದಾರೆ. ವಿದ್ಯುತ್ ತಂತಿಯ ಅಪಾಯವನ್ನು ಲೆಕ್ಕಿಸದೆ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ, ವೃದ್ಧನನ್ನು ತಂತಿಯಿಂದ ಬಿಡಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ಮರದ ಚೇರ್ ಮತ್ತು ಕೋಲಿನಿಂದ ವೈರ್ ಸರಿಸಿದರು
ಕೈಗೆ ಸಿಕ್ಕ ಮರದ ಚೇರ್ ಮತ್ತು ಕೋಲಿನಿಂದ ವೈರ್ ಅನ್ನು ಸರಿಸಿ ವೃದ್ಧನ ಜೀವ ರಕ್ಷಣೆ ಮಾಡಿದ್ದಾರೆ. ಅಂಗಡಿಕಾರರ ಸಮಯೋಚಿತ ಮಧ್ಯಪ್ರವೇಶದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ವೃದ್ಧನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕ್ಷಣದ ಎಚ್ಚರಿಕೆ, ತಪ್ಪಿದ ಭಾರೀ ಅನಾಹುತ
ಮರ ಬೀಳುವ ವೇಳೆ ವಿದ್ಯುತ್ ತಂತಿ ಕೂಡ ನೆಲಕ್ಕೆ ಬಿದ್ದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜನನಿಬಿಡ ಪ್ರದೇಶಗಳಲ್ಲಿ ಹಳೆಯ ಮರಗಳು ಹಾಗೂ ಮೇಲಿನಿಂದ ಹಾದುಹೋಗುವ ವಿದ್ಯುತ್ ತಂತಿಗಳ ನಿರ್ವಹಣೆಯ ಬಗ್ಗೆ ಈ ಘಟನೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒಂದು ವೇಳೆ ಅಂಗಡಿಯವರು ತಕ್ಷಣ ಸ್ಪಂದಿಸದೇ ಇದ್ದಿದ್ದರೆ, ಲೈವ್ ವಿದ್ಯುತ್ ತಂತಿಯಲ್ಲಿ ಸಿಲುಕಿದ್ದ ವೃದ್ಧನಿಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿತ್ತು. ಸ್ಥಳೀಯ ಅಂಗಡಿಕಾರರ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ವೃದ್ಧನ ಜೀವ ಉಳಿದಿದೆ. ಘಟನೆಯ ಬಳಿಕ ವಿದ್ಯುತ್ ತಂತಿ ಹಾಗೂ ಮರದ ಸ್ಥಿತಿಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂಬ ಆಗ್ರಹವೂ ಕೇಳಿಬಂದಿದೆ.