ಫರಿದಾಬಾದ್: ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಉಗ್ರ ಅಬ್ದುಲ್ ರೆಹ್ಮಾನ್ ಫರೀದಾಬಾದ್ ಜೈಲಿನಲ್ಲಿ ಹತ್ಯೆಗೀಡಾಗಿದ್ದಾನೆ.
ಉಗ್ರ ಅಬ್ದುಲ್ ರೆಹ್ಮಾನ್'ನನ್ನು ಜೈಲಿನೊಳಗೆ ಸಹ ಕೈದಿಯೊಬ್ಬರು ಹತ್ಯೆ ಮಾಡಿದ್ದಾರೆಂದು ಮಂಗಳವಾರ ತಿಳಿದಬಂದಿದೆ.
ಉಗ್ರ ಅಬ್ದುಲ್ ರೆಹಮಾನ್ ಮತ್ತು ಸಹ ಕೈದಿ ಅರುಣ್ ಚೌಧರಿ ಮಧ್ಯೆ ಭಾನುವಾರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ರಾತ್ರಿ 8 ಗಂಟೆಯ ವೇಳೆಗೆ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ನನ್ನು ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ರೆಹಮಾನ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.
ಅಬ್ದುಲ್ ರೆಹ್ಮಾನ್ ಯಾರು?
ಅಬ್ದುಲ್ ರೆಹ್ಮಾನ್'ನನ್ನು ಕಳೆದ ವರ್ಷದ ಮಾರ್ಚ್ನಲ್ಲಿ ಗುಜರಾತ್ ಎಟಿಎಸ್ ಮತ್ತು ಹರಿಯಾಣ ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಪಡಿಸಿತ್ತು. ರಾಮ ಮಂದಿರದ ಮೇಲೆ ಉಗ್ರ ದಾಳಿ ನಡೆಸುವ ಯೋಜನೆ ರೂಪಿಸಿದ್ದ ಆರೋಪದ ಮೇಲೆ ಈತನನ್ನು ಬಂಧನಕ್ಕೊಳಪಡಿಸಲಾಗಿತ್ತು.
ಬಂಧನದ ವೇಳೆ ಆತನ ಬಳಿ ಎರಡು ಗ್ರೆನೇಡ್ಗಳು ಪತ್ತೆಯಾಗಿದ್ದು, ತಜ್ಞರು ಅವುಗಳನ್ನು ನಿಷ್ಕ್ರಿಯಗೊಳಿಸಿದ್ದರು. ಈ ಸ್ಫೋಟಕಗಳನ್ನು ಪಾಕಿಸ್ತಾನದ ಐಎಸ್ಐ ಸಂಪರ್ಕ ಹೊಂದಿದ ಉಗ್ರರಿಂದ ಪಡೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ವೇಳೆ ರಾಮ ಮಂದಿರದ ಫೋಟೋಗಳು, ವೀಡಿಯೋಗಳು ಹಾಗೂ ದಾಳಿ ನಡೆಸುವ ಸೂಚನೆಗಳಿರುವ ಡಿಜಿಟಲ್ ದಾಖಲೆಗಳು ಪತ್ತೆಯಾಗಿದ್ದವು.
ಅಬ್ದುಲ್ ರೆಹ್ಮಾನ್ ನಕಲಿ ಗುರುತಿನ ಚೀಟಿಯೊಂದಿಗೆ ಫರೀದಾಬಾದ್ನಲ್ಲಿ ವಾಸವಿದ್ದು, ಅನುಮಾನ ತಪ್ಪಿಸಲು ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ಈತ ರಾಮ ಮಂದಿರ ಮತ್ತು ಉತ್ತರ ಪ್ರದೇಶದ ಪ್ರಮುಖ ಆಡಳಿತ ಕಟ್ಟಡಗಳ ಕುರಿತು ಗೌಪ್ಯವಾಗಿ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಕುರಿತು ಜೈಲು ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.