ಚೆನ್ನೈ: ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಡಿಎಂಕೆ ಮಾಜಿ ಸಚಿವ ಅನಿತಾ ಆರ್ ರಾಧಾಕೃಷ್ಣನ್ ಅವರನ್ನು ಶುಕ್ರವಾರ ಇಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಥೂರ್ಗೆ ಭೇಟಿ ನೀಡಿದ್ದ ವೇಳೆ ಅವರನ್ನು ಬಂಧಿಸಿದ ಪೊಲೀಸರು, ಪೊಲೀಸ್ ಜೀಪ್ನತ್ತ ಕರೆದೊಯ್ದರು. ರಾಧಾಕೃಷ್ಣನ್ ಅವರ ಬೆಂಬಲಿಗರು ಜಮಾಯಿಸಿ ಪೊಲೀಸರ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಶಾಸಕರೊಬ್ಬರ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ದೂರಿನ ಕುರಿತು ಆಡಳಿತಾರೂಢ ಟಿವಿಕೆ ಯಾವುದೇ ಕ್ರಮ ಕೈಗೊಳ್ಳದಿರುವಾಗ, ತಮ್ಮ ಕ್ಷೇತ್ರದಲ್ಲಿ ಪರಿಶೀಲನೆ ನಡೆಸುತ್ತಿದ್ದ ರಾಧಾಕೃಷ್ಣನ್ ಅವರನ್ನು ಬಂಧಿಸುವ ತುರ್ತು ಅಗತ್ಯ ಏನಿತ್ತು ಎಂದು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಪ್ರಶ್ನಿಸಿದರು.
'ಈ ಅವಸರ ಏಕೆ? ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಹತ್ಯೆಗಳು ಮತ್ತು ದರೋಡೆಗಳುನ್ನು ತಡೆಯಲು ವಿಫಲವಾಗಿರುವ ಹಾಗೂ ಇತರ ಪಕ್ಷಗಳ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವುದರಲ್ಲೇ ಮಗ್ನವಾಗಿರುವ ಈ ಸರ್ಕಾರವು ಖಚಿತಪಡಿಸಲು ಬಯಸುವ ಬದಲಾವಣೆ ಇದೇನಾ?' ಎಂದು ಮಾಜಿ ಮುಖ್ಯಮಂತ್ರಿ 'ಎಕ್ಸ್'ನಲ್ಲಿ ಪ್ರಶ್ನಿಸಿದ್ದಾರೆ.
ಮಾನನಷ್ಟ ಮೊಕದ್ದಮೆಗಳಲ್ಲಿ ಬಂಧನಗಳು ನಡೆಯುವುದಾದರೆ, ತಮ್ಮ ಭಾಷಣಗಳಿಗಾಗಿ ಎಷ್ಟು ಸಚಿವರು ಎಷ್ಟು ಬಾರಿ ಬಂಧನಕ್ಕೊಳಗಾಗಬೇಕಾಗುತ್ತಿತ್ತು ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
'ತಮಗೆ ಮತ ನೀಡಿದ ಜನರಿಗೆ ಯಾವುದೇ ಒಳಿತನ್ನು ಮಾಡದೆ, ಕೇವಲ 'ಕುದುರೆ ವ್ಯಾಪಾರ'ದ ಮೂಲಕ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು ಮತ್ತು ತಮ್ಮನ್ನು ಟೀಕಿಸುವ ವಿರೋಧ ಪಕ್ಷದ ಸದಸ್ಯರನ್ನು ಬಂಧಿಸುವ ಮೂಲಕ ಕಾಲಹರಣ ಮಾಡಬಹುದು ಎಂದು ಮುಖ್ಯಮಂತ್ರಿ ಭಾವಿಸಿದ್ದಾರೆ. ಅಹಂಕಾರವು ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ' ಎಂದು ಸ್ಟಾಲಿನ್ ಹೇಳಿದರು.
ಡಿಎಂಕೆ ಸಂಸದೆ ಕನಿಮೊಳಿ ಕೂಡ ಈ ಬಂಧನವನ್ನು ಖಂಡಿಸಿದದ್ದಾರೆ ಮತ್ತು ಇಂತಹ 'ದಮನಕಾರಿ ತಂತ್ರಗಳಿಗೆ' ಪಕ್ಷವು ಮಣಿಯುವುದಿಲ್ಲ ಎಂದು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ತಿರುಚೆಂಡೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರಾಧಾಕೃಷ್ಣನ್ ಅವರು ಜೂನ್ 20 ರಂದು ಮುಖ್ಯಮಂತ್ರಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಟಿವಿಕೆ (TVK) ಪಕ್ಷವು ಪೊಲೀಸರಿಗೆ ದೂರು ನೀಡಿತ್ತು.
ಶಾಸಕರ ವಿರುದ್ಧ ಬಿಎನ್ಎಸ್ (BNS) ನ ಸೆಕ್ಷನ್ 352 (ಶಾಂತಿಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಮತ್ತು ಸೆಕ್ಷನ್ 353 (2) (ಸಾರ್ವಜನಿಕ ಗೊಂದಲ ಅಥವಾ ಅಶಾಂತಿಗೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ, ಶಾಸಕರಾಗಿರುವ ರಾಧಾಕೃಷ್ಣನ್ ಅಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ನ್ಯಾಯಮೂರ್ತಿ ಜಿಕೆ ಇಳಂತಿರೈಯನ್ ಮೌಖಿಕವಾಗಿ ಅಭಿಪ್ರಾಯಪಟ್ಟರು.