ಮುಜಾಫರ್ಪುರ (ಬಿಹಾರ): ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಆನ್ಲೈನ್ ಹಣ ವರ್ಗಾವಣೆಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿವೆಯೋ, ಅಷ್ಟೇ ರೋಚಕ ಹಾಗೂ ವಿಚಿತ್ರ ಘಟನೆಗಳಿಗೂ ಕಾರಣವಾಗುತ್ತಿವೆ. ಇಂತಹದ್ದೆ ಒಂದು ನಂಬಲಸಾಧ್ಯವಾದ ಘಟನೆ, ಇತ್ತೀಚೆಗೆ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ನಡೆದಿದೆ. ತನ್ನ ದಿನನಿತ್ಯದ ಬದುಕಿಗಾಗಿ ಸರ್ಕಾರದ 1,100 ರೂಪಾಯಿ ಪಿಂಚಣಿ ನಂಬಿಕೊಂಡಿದ್ದ 82 ವರ್ಷದ ವೃದ್ಧನೊಬ್ಬನ ಬ್ಯಾಂಕ್ ಖಾತೆಯಲ್ಲಿ ಒಮ್ಮೆಗೆ ಬರೋಬ್ಬರಿ 759 ಕೋಟಿ ರೂಪಾಯಿ ಕಾಣಿಸಿಕೊಂಡಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಒಂದು ಕ್ಷಣ ತಲ್ಲಣಗೊಂಡಿತು. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬಿಹಾರದ ಮುಜಾಫರ್ಪುರ ಜಿಲ್ಲೆಯ ಥಾಟಿಯಾ ಸಿಹೋ ಗ್ರಾಮದ ನಿವಾಸಿಯಾದ 82 ವರ್ಷದ ವೃದ್ಧ ಕಾಮೇಶ್ವರ ಮಿಶ್ರಾ ಅವರು ಸರ್ಕಾರದ ವೃದ್ಧಾಪ್ಯ ಪಿಂಚಣಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರತಿ ತಿಂಗಳು ಬರುವ ಕೇವಲ 1,100 ರೂಪಾಯಿಗಳ ಪಿಂಚಣಿ ಹಣವನ್ನು ಹಿಂಪಡೆಯಲು, ತಮ್ಮ ವಿಕಲಚೇತನ ಮಗನೊಂದಿಗೆ CSC ಕೇಂದ್ರಕ್ಕೆ ಭೇಟಿ, ಪಿಂಚಣಿ ಹಣ ಜಮಾ ಆಗಿದೆಯೇ ಎಂದು ಪರಿಶೀಲಿಸಲು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ಅಲ್ಲಿನ ಸಿಬ್ಬಂದಿಗೆ ವಿನಂತಿಸಿದರು.
ಅದರಂತೆ, ಚೆಕ್ ಮಾಡುವ ವೇಳೆ, ಕಾಮೇಶ್ವರ ಮಿಶ್ರಾ ಅವರ ಖಾತೆಯಲ್ಲಿ ಒಟ್ಟು ₹759,69,51,951 (759 ಕೋಟಿಗೂ ಹೆಚ್ಚು) ಹಣವಿರುವುದು ಕಂಡಿದೆ. ಜೊತೆಗೆ ಅವರ ವಿಕಲಚೇತನ ಮಗನ ಖಾತೆಯಲ್ಲೂ ಸಹ ಅಷ್ಟೇ ಮೊತ್ತದ ಹಣ ಇರುವುದು ಪತ್ತೆಯಾಯಿತು. ಇಬ್ಬರ ಖಾತೆಯನ್ನು ಒಟ್ಟುಗೂಡಿಸಿದರೆ ಸುಮಾರು 1,500 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಹಣ ಇರುವುದು ಕಂಪ್ಯೂಟರ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿತು. ಕೇವಲ 1500 ರೂಪಾಯಿಗಳಿಗಾಗಿ ಕಾಯುತ್ತಿದ್ದ ಬಡ ಕುಟುಂಬಕ್ಕೆ ಕೋಟ್ಯಂತರ ರೂಪಾಯಿ ಒಟ್ಟಿಗೆ ಬಂದಾಗ ಇಡೀ ಗ್ರಾಮದಲ್ಲೇ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.
ಹಾಗಾದ್ರೆ, ಹಣ ಕಂಡ ನಂತರ ಏನಾಯಿತು?
ಅಕೌಂಟ್ನಲ್ಲಿ ಇಷ್ಟೊಂದು ಹಣವನ್ನು ಕಂಡ ತಕ್ಷಣ ಮಿಶ್ರಾ ಗಾಬರಿಗೊಂಡು, ಸ್ಥಳೀಯ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಮ್ಮ ಖಾತೆಯಲ್ಲಿರುವ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬ್ಯಾಂಕಿಂಗ್ ಅಧಿಕಾರಿಗಳು, ಸಾಫ್ಟ್ವೇರ್ನಲ್ಲಾದ ಮಿಸ್ಟೇಕ್ ಅನ್ನು ಸರಿ ಮಾಡಿ, 2 ಅಕೌಂಟ್ನಲ್ಲಿದ್ದ ತಲಾ 759 ಕೋಟಿ ರೂಪಾಯಿಗಳ ತಗೆದುಹಾಕಿದ್ದಾರೆ.
ವಿಶೇಷವೆಂದರೆ, ಬಿಹಾರದಲ್ಲಿ ಈ ರೀತಿಯ ಸುದ್ದಿಗಳು ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಹಲವು ಬಾರಿ ಇಂತಹದ್ದೆ ಹಲವು ವಿಚಿತ್ರ ಘಟನೆಗಳು ನಡೆದಿವೆ. ಅಲ್ಲಿನ ಕೆಲವು ಶಾಲಾ ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಮತ್ತು ಇ-ರಿಕ್ಷಾ ಚಾಲಕರ ಬ್ಯಾಂಕ್ ಖಾತೆಗಳಲ್ಲೂ ತಾಂತ್ರಿಕ ದೋಷದಿಂದಾಗಿ ಕೋಟ್ಯಂತರ ರೂಪಾಯಿ ಹಣ ಬ್ಯಾಲೆನ್ಸ್ ರೂಪದಲ್ಲಿ ಕಾಣಿಸಿಕೊಂಡು ನಂತರ ಮಾಯವಾಗಿದ್ದವು. ತಾಂತ್ರಿಕ ದೋಷದಿಂದಾಗಿ ಕೆಲವೇ ನಿಮಿಷಗಳ ಕಾಲ ವೃದ್ಧನನ್ನು 'ಕೋಟಿಗಟ್ಟಲೆ ಹಣದ ಒಡೆಯ'ನನ್ನಾಗಿ ಮಾಡಿದ ಈ ಘಟನೆ ಸದ್ಯ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.