ನವದೆಹಲಿ: ಕಾವೇರಿ ಮತ್ತು ಅರ್ಕಾವತಿ ನದಿಗಳ ಸಂಗಮದ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣದ ವಿಷಯವನ್ನು ಕರ್ನಾಟಕ ಸರ್ಕಾರ ಅನಗತ್ಯವಾಗಿ ಉಲ್ಬಣಗೊಳಿಸುತ್ತಿದೆ ಎಂದು ಎಐಎಡಿಎಂಕೆ (AIADMK) ಸಂಸದ ಎಂ ತಂಬಿ ದುರೈ ಭಾನುವಾರ ದೂರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ತಂಬಿ, ಸಂಸತ್ ಆವರಣದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಎಐಎಡಿಎಂಕೆ ಪರವಾಗಿ ತಾವು ಈ ವಿಷಯವನ್ನು ಪ್ರಸ್ತಾಪಿಸಿದ್ದಾಗಿ ತಿಳಿಸಿದರು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಅಧಿಕಾರಾವಧಿಯಲ್ಲಿ ಹೊರಡಿಸಲಾಗಿದ್ದ ಹಿಂದಿನ ಆದೇಶವನ್ನು ಉಲ್ಲೇಖಿಸಿದ ಅವರು, ನದಿ ನೀರಿಗೆ ಸಂಬಂಧಿಸಿದ ಸದ್ಯದ ವಿವಾದವನ್ನು ನ್ಯಾಯಾಂಗವು ಈಗಾಗಲೇ ಬಗೆಹರಿಸಿದೆ ಎಂದು ಹೇಳಿದರು.
'ಎಐಎಡಿಎಂಕೆ ಪರವಾಗಿ ನಾವು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದೆವು. ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ವಿಷಯವನ್ನು ನಾವು ಪ್ರಮುಖವಾಗಿ ಪ್ರಸ್ತಾಪಿಸಿದೆವು. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಕಾವೇರಿ ವಿವಾದವಿತ್ತು ಮತ್ತು ಅವರು ಸುಪ್ರೀಂ ಕೋರ್ಟ್ನಿಂದ ನಿರ್ದೇಶನವನ್ನು ಪಡೆದಿದ್ದರು. ಮುಂದಿನ 15 ವರ್ಷಗಳ ಕಾಲ ಯಾವುದೇ ಹಸ್ತಕ್ಷೇಪವಾಗಬಾರದು; ಕೇರಳ, ತಮಿಳುನಾಡು, ಪುದುಚೇರಿ ಮತ್ತು ಕರ್ನಾಟಕದಂತಹ ರಾಜ್ಯಗಳ ಮೇಲೆ ಪರಿಣಾಮ ಬೀರುವುದರಿಂದ, ಎರಡೂ ರಾಜ್ಯಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸೂಚಿಸಿತ್ತು' ಎಂದು ಅವರು ಹೇಳಿದರು.
'ಸದ್ಯದ ಕರ್ನಾಟಕ ಸರ್ಕಾರವು ಅನಗತ್ಯವಾಗಿ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರು ಬೇಕಿದ್ದರೆ, ಮೈಸೂರು ಭಾಗದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಇದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, 18 ಸಾವಿರ ಟಿಎಂಸಿ ನೀರನ್ನು ನೀಡಬೇಕಾಗಿರುವುದರಿಂದ, ಅವರು ಕೃಷ್ಣರಾಜ ಸಾಗರದಿಂದ ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರನ್ನು ಪಡೆಯಬಹುದು. ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರು ನೀಡುವುದಕ್ಕೆ ನಮಗೆ ಯಾವುದೇ ಆಕ್ಷೇಪಣೆಯಿಲ್ಲ. ಬೆಂಗಳೂರು ನಗರದ ಜನರಿಗೆ ನೀರು ಪಡೆಯಲು ಮಾರ್ಗವಿದೆ' ಎಂದು ಅವರು ಹೇಳಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅವಧಿಯಲ್ಲಿ ಸಂಭವಿಸಿದಂತೆ, ತಮಿಳುನಾಡು ಮತ್ತು ಕರ್ನಾಟಕದ ಜನರ ನಡುವೆ ಯಾವುದೇ ಸಂಘರ್ಷ ಉಂಟಾಗಬಾರದು ಎಂದು ದುರೈ ಹೇಳಿದರು.
ಶನಿವಾರದಂದು, ಕಾವೇರಿ ನದಿಯ ನೀರು ರಾಜ್ಯದ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಬೇಕೆಂಬ ಡಿಎಂಕೆ ಬೇಡಿಕೆಯನ್ನು ತಳ್ಳಿಹಾಕಿದರು; ಜೊತೆಗೆ, ಕರ್ನಾಟಕದ ಸಂಸದರು ಈ ವಿಷಯಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ದೇಶದ ಮುಂದೆ ದೃಢವಾಗಿ ಮಂಡಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ರಾಜ್ಯದ ವಿರೋಧವನ್ನು ತಳ್ಳಿಹಾಕಿದರು. ಅಲ್ಲದೆ, ವಿವಾದಿತ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯು ವಾಸ್ತವವಾಗಿ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಪ್ರಯೋಜನಕಾರಿಯಾಗುವಂತೆ ರೂಪಿಸಲಾಗಿದೆ ಎಂದು ಪುನರುಚ್ಚರಿಸಿದರು.
'ಅವರು ಬೇಡಿಕೆ ಇಡುತ್ತಾರೆ; ಅದರಲ್ಲಿ ತಪ್ಪೇನಿಲ್ಲ, ನಾವೂ ಬೇಡಿಕೆ ಇಡುತ್ತೇವೆ. ನಾನು ದೆಹಲಿಗೆ ತೆರಳಿ, ವಾಸ್ತವ ಸಂಗತಿಗಳನ್ನು ಎಲ್ಲರ ಮುಂದಿಡುವಂತೆ ನಮ್ಮ ಸಂಸದರಿಗೆ ಸೂಚಿಸುತ್ತೇನೆ. ಕಾವೇರಿ ವಿಷಯ ಏನೇ ಇರಲಿ, ಅದು ನಮ್ಮ ಹಕ್ಕು' ಎಂದರು.