ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ 
ದೇಶ

ಬೀದಿಗಳಲ್ಲಿ ರಕ್ತ ಚೆಲ್ಲಿದ ಯುವಕರ ಕಣ್ಣಲ್ಲಿ ಕಣ್ಣಿಟ್ಟು ನೋಡಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ಪ್ರಧಾನ ಮಂತ್ರಿಯವರ ಹೇಳಿಕೆಗಳು ಕೇವಲ 'ಕಣ್ಣೊರೆಸುವ ತಂತ್ರ' ಎಂದು ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಟೀಕಿಸಿದ್ದು, ಪ್ರತಿಭಟನೆ ನಡೆಸುವಾಗ ಗಾಯಗೊಂಡ ಯುವ ಪ್ರತಿಭಟನಾಕಾರರ ಕಣ್ಣುಗಳನ್ನು ಒಮ್ಮೆ ನೋಡಿ ಎಂದು ಗುರುವಾರ ಒತ್ತಾಯಿಸಿದ್ದಾರೆ.

ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ತಮ್ಮ ನಿಲುವು ವ್ಯಕ್ತಪಡಿಸಿದ ಬೆನ್ನಲ್ಲೇ, ಯುವಕರಿಗೆ ಎಲ್ಲ ದಾರಿಗಳೂ ಮುಚ್ಚಿಹೋಗಿವೆ ಮತ್ತು ಅವರು ಎಲ್ಲಿಗೆ ಹೋಗಬೇಕು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

'ನರೇಂದ್ರ ಮೋದಿ ಜೀ, ನಿಮ್ಮ ಆಡಳಿತಾವಧಿಯಲ್ಲಿ ಶಿಕ್ಷಣ ವ್ಯವಸ್ಥೆಯು ಹದಗೆಟ್ಟಿದೆ. ನಮಗೆ ಕೇವಲ ಮೇಲ್ನೋಟದ ಮಾತುಗಳಾಗಲಿ ಅಥವಾ ಸದ್ಯದ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಣ್ಣಪುಟ್ಟ ಘೋಷಣೆಗಳಾಗಲಿ ಬೇಕಿಲ್ಲ. ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ, ನಿಮ್ಮ ಸರ್ಕಾರವು ಯುವಕರ ಮೇಲೆ ಲಾಠಿಚಾರ್ಜ್ ನಡೆಸಿತು; ಪೆಲೆಟ್ ಗನ್‌ಗಳು, ಶಾಕ್ ಬ್ಯಾಟನ್‌ಗಳನ್ನು ಬಳಸಿತು ಹಾಗೂ ಯಾವುದೇ ಹಿಂಜರಿಕೆಯಿಲ್ಲದೆ ವಿವೇಚನಾರಹಿತ ದೌರ್ಜನ್ಯ ಎಸಗಿತು- ನೋಡಿದರೆ ಅವರು ನಮ್ಮ ಮಕ್ಕಳಲ್ಲವೇನೋ ಎಂಬಂತೆ ವರ್ತಿಸಲಾಯಿತು' ಎಂದು ಅವರು 'ಎಕ್ಸ್'ನಲ್ಲಿನ ಪೋಸ್ಟ್‌ನಲ್ಲಿ ಹೇಳಿದರು.

'ನಿಮ್ಮ ಹವಾನಿಯಂತ್ರಿತ ಐಷಾರಾಮಿ ನಿವಾಸದಿಂದ ಹೊರಬನ್ನಿ ಮತ್ತು ನಿಮ್ಮ ಸರ್ವಾಧಿಕಾರವನ್ನು ವಿರೋಧಿಸಿ ಬೀದಿಗಳಲ್ಲಿ ರಕ್ತ ಚೆಲ್ಲಿದ ಯುವಕ-ಯುವತಿಯರ ಕಣ್ಣುಗಳಲ್ಲಿ ಕಣ್ಣಿಟ್ಟು ನೇರವಾಗಿ ನೋಡಿ' ಎಂದು ಅವರು ಹೇಳಿದರು.

ಯುವಜನತೆಯು '1) ಶಿಕ್ಷಣ ಸಚಿವ ಪ್ರಧಾನ್ ಅವರನ್ನು ತಕ್ಷಣವೇ ವಜಾಗೊಳಿಸಿ. 2) ದಮನಕಾರಿ ಕ್ರಮಗಳು ಮತ್ತು ದೌರ್ಜನ್ಯಗಳಿಗಾಗಿ ಕ್ಷಮೆಯಾಚಿಸಿ ಹಾಗೂ 3) ತಮ್ಮ ಮೇಲೆ ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂಬ ಕೇವಲ ಮೂರು ಸರಳ ಬೇಡಿಕೆಗಳ ಈಡೇರಿಕೆಯನ್ನು ಬಯಸುತ್ತಿದೆ. ಅಲ್ಲದೆ, ಆರ್‌ಎಸ್‌ಎಸ್ (RSS) ಶಿಕ್ಷಣ ವ್ಯವಸ್ಥೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದೂ ಖರ್ಗೆ ಆರೋಪಿಸಿದರು.

'ಯುವಜನರ ನಿರುದ್ಯೋಗ ದರವು ಶೇ 29ರಷ್ಟು (PLFS) ಗಗನಕ್ಕೇರಿದೆ. ಖಾಸಗಿ ವಲಯದಲ್ಲಿ ಉದ್ಯೋಗಗಳಿಲ್ಲ, ಶಾಶ್ವತ ಸರ್ಕಾರಿ ಉದ್ಯೋಗಗಳೂ ಬೆರಳೆಣಿಕೆಯಷ್ಟು ಮಾತ್ರ ಇವೆ. ಗುತ್ತಿಗೆ ಆಧಾರಿತ ನೇಮಕಾತಿ ಪದ್ಧತಿ ಉತ್ತುಂಗದಲ್ಲಿದೆ. ಎಲ್ಲ ಬಾಗಿಲುಗಳೂ ಮುಚ್ಚಿವೆ. ಹೀಗಿರುವಾಗ, ತಮ್ಮ ಭವಿಷ್ಯಕ್ಕಾಗಿ ಆಗ್ರಹಿಸಲು ಯುವಜನರು ಎಲ್ಲಿಗೆ ಹೋಗಬೇಕು?' ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.

ಕೇವಲ ಕಣ್ಣೊರೆಸುವ ತಂತ್ರ

ಪ್ರಧಾನ ಮಂತ್ರಿಯವರ ಹೇಳಿಕೆಗಳು ಕೇವಲ 'ಕಣ್ಣೊರೆಸುವ ತಂತ್ರ' ಎಂದು ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

'ಯುವಜನರು ಇದಕ್ಕೆ ಸುಮ್ಮನೆ ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಿದರೆ ಅದು ಮೋದಿ ಅವರ ಭ್ರಮೆ ಮಾತ್ರ. ಅವರ ಬೇಡಿಕೆಗಳು ಸ್ಪಷ್ಟವಾಗಿವೆ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಮತ್ತು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಬೇಕು' ಎಂದು ಅವರು ಹೇಳಿದರು.

ನೀಟ್ (NEET) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಯುವಜನರ ಪ್ರತಿಭಟನೆಗಳು ಮುಂದುವರಿದಿರುವ ನಡುವೆಯೇ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದವರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆಯನ್ನು ಖಚಿತಪಡಿಸಲು 'ತ್ವರಿತಗತಿ ನ್ಯಾಯಾಲಯ'ಗಳನ್ನು (fast-track courts) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ತಿಳಿಸಿದರು.

'ನಮ್ಮ ಯುವಜನರ ಕ್ಷೇಮ ಮತ್ತು ಭವಿಷ್ಯಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ! ನಮ್ಮ ಯುವಜನರ ಭವಿಷ್ಯಕ್ಕೆ ಹಾನಿ ಮಾಡಲು ಪ್ರಯತ್ನಿಸುವವರನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಮೋದಿ 'ಎಕ್ಸ್' (X) ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುವಕರ ಭವಿಷ್ಯಕ್ಕಿಂತ ಮುಖ್ಯ ಯಾವುದೂ ಅಲ್ಲ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ತ್ವರಿತ ನ್ಯಾಯಾಲಯ ಸ್ಥಾಪನೆ': PM ನರೇಂದ್ರ ಮೋದಿ

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?

ಅಮೆರಿಕ ಬೆದರಿಕೆಗೆ Iran ತಿರುಗೇಟು: 'ಕಣ್ಣಿಗೆ ಕಣ್ಣು' ಉತ್ತರ, ಮೂಲಸೌಕರ್ಯಗಳ ಮೇಲೆ ದಾಳಿಯಾದರೆ ಪ್ರಬಲ ಪ್ರತೀಕಾರ ಎಂದ ಟೆಹ್ರಾನ್

'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ': ನಮ್ಮತ್ತ ಬೆರಳು ತೋರಿಸುವ ಮೊದಲು ನಿಮ್ಮ ದೇಶ ನೋಡಿಕೊಳ್ಳಿ; ವಿಶ್ವಸಂಸ್ಥೆಯಲ್ಲಿ Pak ವಿರುದ್ಧ ಭಾರತ ಗುಡುಗು..!

ಭಾರತದಲ್ಲಿ ಡೇಟಾ ಸೆಂಟರ್: ಲಾಭವೆಷ್ಟು? ನಷ್ಟವೆಷ್ಟು? (ಹಣಕ್ಲಾಸು)