ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಕ್ಕಾಗಿ ಏನನ್ನೂ ಯೋಚಿಸದೆ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡದಂತೆ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಗುರುವಾರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಹಿತಾಸಕ್ತಿಗಿಂತಲೂ ಮಿಗಿಲಾದ ಉದ್ದೇಶಕ್ಕಾಗಿ 26 ದಿನಗಳ ಕಾಲ ನಡೆಸಿದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ವಿಷಯದಲ್ಲಿ ಅವರನ್ನು ಟೀಕಿಸದಂತೆ ಅವರು ಕೋರಿದ್ದಾರೆ. ಅವರು ಇದಕ್ಕಾಗಿ ದೈಹಿಕವಾಗಿ ಭಾರಿ ಬೆಲೆ ತೆತ್ತಿದ್ದು, ಟೀಕೆಗಿಂತ ಹೆಚ್ಚಾಗಿ ಸಹಾನುಭೂತಿಗೆ ಅರ್ಹರಾಗಿದ್ದಾರೆ ಎಂದಿದ್ದಾರೆ.
ಸರ್ಕಾರವು ಅವರ ಪ್ರಮುಖ ಬೇಡಿಕೆಗಳ ಬಗ್ಗೆ ಭರವಸೆ ನೀಡಿದ ನಂತರ ಮತ್ತು ವಿವಿಧ ಪಕ್ಷಗಳ ಸಂಸದರು ಉಪವಾಸವನ್ನು ಕೊನೆಗೊಳಿಸಿ ದೇಶಸೇವೆಯನ್ನು ಮುಂದುವರಿಸುವಂತೆ ಪದೇ ಪದೇ ಮನವಿ ಮಾಡಿದ ನಂತರ, ವಾಂಗ್ಚುಕ್ ಗುರುವಾರ ತಡರಾತ್ರಿ ತಮ್ಮ ಉಪವಾಸವನ್ನು ಕೊನೆಗೊಳಿಸಿದರು. ಇದರ ಬೆನ್ನಲ್ಲೇ ಆಂಗ್ಮೋ ಈ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಉಪವಾಸದ ಅವಧಿಯಲ್ಲಿ ಒಟ್ಟು 11 ಕೆಜಿ ತೂಕವನ್ನು ಕಳೆದುಕೊಂಡಿರುವ ವಾಂಗ್ಚುಕ್ ಈಗ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಅವರ ನಿರ್ಧಾರದ ಹಿಂದಿರುವ ತ್ಯಾಗವನ್ನು ಗುರುತಿಸುವಂತೆ ಜನರನ್ನು ಕೋರಿದ್ದಾರೆ.
ಸೋನಮ್ ವಾಂಗ್ಚುಕ್ ಅವರನ್ನು ಟೀಕಿಸುವ ಮುನ್ನ ನಿಮ್ಮ ಸ್ವಂತ ಹಿತಾಸಕ್ತಿಗಿಂತ ದೊಡ್ಡದಾದ ಉದ್ದೇಶಕ್ಕಾಗಿ 26 ದಿನಗಳ ಕಾಲ ಉಪವಾಸ ಮಾಡುವ ಮನಸ್ಥಿತಿಯನ್ನು ಮೊದಲು ಅರಿತುಕೊಳ್ಳಿ ಎಂದು ಅವರು ಬರೆದುಕೊಂಡಿದ್ದಾರೆ.
'ಸೌಕರ್ಯಕ್ಕಿಂತ ತ್ಯಾಗವನ್ನು ಆರಿಸಿಕೊಂಡಿದ್ದರಿಂದ ಅವರು ಇಂದು 11 ಕೆಜಿ ತೂಕವನ್ನು ಕಳೆದುಕೊಂಡು ಐಸಿಯುನಲ್ಲಿದ್ದಾರೆ. ನಮ್ಮ ನಿರೀಕ್ಷೆಗಳು ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಅವರ ಮೇಲೆ ಹೇರುವ ಮೊದಲು, ನಾವು ಅವರಿಗೆ ಸಹಾನುಭೂತಿ ತೋರಬೇಕಿದೆ. 'ನಿಸ್ವಾರ್ಥ ಸೇವೆಯ ಜೀವನ'ವನ್ನು ನಿರ್ಣಯಿಸಲು ಎಲ್ಲರಿಗೂ ಅರ್ಹತೆ ಇರುವುದಿಲ್ಲ. ಹಾಗೆ ಮಾಡಲು ಮೊದಲು ನೈತಿಕ ಅರ್ಹತೆಯನ್ನು ಗಳಿಸಿಕೊಳ್ಳಬೇಕು. ದಯವಿಟ್ಟು... ಸಹಾನುಭೂತಿ ತೋರಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ನಿನ್ನೆ ಗುರುವಾರ ರಾತ್ರಿ ತಮ್ಮ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಸದ್ಯ ಇವರು ಗುರುಗ್ರಾಮ್ನ ಮೇದಾಂತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.