ನವದೆಹಲಿ: ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ತಮ್ಮ 37 ದಿನಗಳ ಪ್ರತಿಭಟನೆಯನ್ನು ಹಿಂಪಡೆದಿದ್ದರೂ, 'ಕಾಕ್ರೋಚ್ ಜನತಾ ಪಾರ್ಟಿ' (CJP) NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ತಮ್ಮ ಹೋರಾಟ ಇನ್ನೂ ಮುಗಿದಿಲ್ಲ ಎಂಬ ಸುಳಿವು ನೀಡಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಸರ್ಕಾರದೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಖಚಿತಪಡಿಸಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ಡಿಪ್ಕೆ, ಸಂಘಟನೆಯು ಶೀಘ್ರದಲ್ಲೇ ತನ್ನ ಮುಂದಿನ ಕಾರ್ಯಯೋಜನೆಯನ್ನು ಪ್ರಕಟಿಸಲಿದೆ ಎಂದು ಹೇಳಿದರು.
ಶೀಘ್ರದಲ್ಲೇ ಮುಂದಿನ ಹಂತ: ಸುದ್ದಿಗಾರರೊಂದಿಗೆ ಮಾತನಾಡಿದ ಡಿಪ್ಕೆ, ಇತ್ತೀಚೆಗೆ ಮುಕ್ತಾಯಗೊಂಡ ಪ್ರತಿಭಟನೆಯ ಫಲಿತಾಂಶವನ್ನು ಪರಿಶೀಲಿಸಲು ಸಮಯ ತೆಗೆದುಕೊಂಡ ನಂತರ ಸಿಜೆಪಿ ತನ್ನ ಭವಿಷ್ಯದ ಕಾರ್ಯತಂತ್ರವನ್ನು ಬಹಿರಂಗಪಡಿಸಲಿದೆ ಎಂದು ಹೇಳಿದರು.
ನಾವು ಶೀಘ್ರದಲ್ಲೇ ಭವಿಷ್ಯದ ಕಾರ್ಯತಂತ್ರವನ್ನು ಪ್ರಕಟಿಸುತ್ತೇವೆ. ಪ್ರತಿಭಟನೆ ನಿನ್ನೆಷ್ಟೇ ಮುಕ್ತಾಯಗೊಂಡಿದೆ. ದಯವಿಟ್ಟು ನಮಗೆ ಸ್ವಲ್ಪ ಸಮಯ ನೀಡಿ ಎಂದು ಅವರು ತಿಳಿಸಿದರು.
ಪಂಜಾಬ್ನಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿಷಯವನ್ನೂ ಸಂಘಟನೆಯು ಕೈಗೆತ್ತಿಕೊಳ್ಳಲಿದೆ ಎಂದು ಅವರು ಸುಳಿವು ನೀಡಿದರು. ಅಲ್ಲದೆ, ಇತ್ತೀಚಿನ ಪ್ರತಿಭಟನೆಯು ಪರೀಕ್ಷಾ ಸುಧಾರಣೆಗಳಿಗಾಗಿನ ವಿಶಾಲ ಹೋರಾಟದ ಆರಂಭವಷ್ಟೇ ಎಂದು ಅವರು ಹೇಳಿದರು.
ನಾವು ಆ ವಿಷಯವನ್ನೂ ಪರಿಗಣಿಸುತ್ತೇವೆ. ಸದ್ಯಕ್ಕೆ ಅದಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ ಎಂದು ಹೇಳುವ ಮೂಲಕ, ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟವು NEET ವಿವಾದದ ನಂತರವೂ ಮುಂದುವರಿಯಲಿದೆ ಎಂದು ಅವರು ಸೂಚಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಕಾನೂನು ಪ್ರಕರಣಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಮುಂದುವರಿದಿದೆ ಎಂದೂ ಡಿಪ್ಕೆ ಖಚಿತಪಡಿಸಿದರು. ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುತ್ತಿವೆ. ಯಾವುದೇ ವಿದ್ಯಾರ್ಥಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಬಾರದು ಎಂದು ಅವರು ಹೇಳಿದರು.
ಕೇಂದ್ರ ಸಚಿವರೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಿದ ನಂತರ ಸಿಜೆಪಿ (CJP) ತನ್ನ ದೇಶವ್ಯಾಪಿ ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂಪಡೆದ ಮರುದಿನವೇ ಅವರ ಈ ಹೇಳಿಕೆ ನೀಡಿದ್ದಾರೆ. ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿನ ವ್ಯಾಪಕ ಸುಧಾರಣೆಗಳ ಕುರಿತು ಚರ್ಚಿಸಲು ನಾಲ್ಕು ವಾರಗಳ ನಂತರ ಮತ್ತೊಮ್ಮೆ ಸಭೆ ಸೇರಲು ಸರ್ಕಾರ ಹಾಗೂ ಸಿಜೆಪಿ ಒಪ್ಪಿಕೊಂಡಿದೆ.