ದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿರುದ್ಧ ಹೋರಾಟ ಹಾಗು ಸಂಸತ್ ಕಲಾಪಗಳ ನಡುವೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ರಾಜಕೀಯದಲ್ಲಿ ತಮ್ಮ ಚಾಣಿಕ್ಯ ತಂತ್ರವನ್ನ ಮುಂದುವರೆಸಿದ್ದಾರೆ. ಅದರಂತೆ, ನಿನ್ನೆ ದೆಹಲಿಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಎರಡೂ ಬಣಗಳಾದ ಅಜಿತ್ ಪವಾರ್ ಬಣ ಮತ್ತು ಶರದ್ ಪವಾರ್ ಬಣದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಸಂಸತ್ತಿನ ಮುಂಗಾರು ಅಧಿವೇಶನದ ನಡುವೆ ಅಮಿತ್ ಶಾ ಅವರು ಮೊದಲು ಅಜಿತ್ ಪವಾರ್ ಬಣದ ಹಿರಿಯ ನಾಯಕ ಸುನೀಲ್ ತಟ್ಕರೆ ಅವರೊಂದಿಗೆ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಶರದ್ ಪವಾರ್ ಬಣದ ಸಂಸದರಾದ ಸುಪ್ರಿಯಾ ಸುಳೆ ಮತ್ತು ಬಜರಂಗ್ ಮನೋಹರ್ ಸೋನವಾನೆ ಅವರು ಕೂಡ ಅಮಿತ್ ಶಾ ಅವರನ್ನು ಭೇಟಿಯಾಗಿ, ಎರಡು ಬಣಗಳ ವಿಲೀನದ ಬಗ್ಗೆ ಚರ್ಚೆ ನಡಿಸಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ರಾಜಕೀಯ ಮೂಲಗಳ ಪ್ರಕಾರ, ಬಿಜೆಪಿಯು ಎನ್ಸಿಪಿಯ ಎರಡೂ ಬಣಗಳು ಮೊದಲು ಒಂದಾಗಬೇಕು. ಆನಂತರ ಎನ್ಡಿಎಯ ಭಾಗವಾಗಬೇಕು ಎಂದು ಹೈಕಮಾಂಡ್ ನಾಯಕರು ಬಯಸುತ್ತಾರೆ ಎನ್ನಲಾಗಿದೆ.
ಮೋದಿ ಸರ್ಕಾರದಲ್ಲಿ ಸುಪ್ರಿಯಾ ಸಚಿವೆ?
ಎನ್ಸಿಪಿಯ ಎರಡೂ ಬಣಗಳ ಒಂದಾದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸುಪ್ರಿಯಾ ಸುಳೆ ಹಾಗೂ ಪ್ರಫುಲ್ ಪಟೇಲ್ ಅವರಿಗೆ ಸ್ಥಾನ ಸಿಗಬಹುದು ಎನ್ನಲಾಗಿದ್ದು, ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ನೇತೃತ್ವದ ರಾಜ್ಯದ ಮಹಾಯುತಿ ಸರಕಾರದಲ್ಲೂ ಸಚಿವ ಸ್ಥಾನಗಳ ಹೊಂದಾಣಿಕೆಯಾಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಇದಕ್ಕೂ ಮೊದಲು, ಶರದ್ ಪವಾರ್ ಹಾಗು ಪ್ರಫುಲ್ ಪಟೇಲ್ ಅವರು ಪ್ರತ್ಯೇಕವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಎರಡು ಬಣಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ಕೆಲ ದಿನಗಳಿಂದ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಎನ್ಸಿಪಿಯ ಒಂದು ಬಣವನ್ನು ಶರದ್ ಪವಾರ್ ಮುನ್ನಡೆಸುತ್ತಿದ್ದಾರೆ, ಇನ್ನೊಂದು ಬಣವನ್ನು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮುನ್ನಡೆಸುತ್ತಿದ್ದಾರೆ. ಇನ್ನು, ಸುನೇತ್ರಾ ಪವಾರ್ ನೇತೃತ್ವದ ಎನ್ಸಿಪಿ NDAಯ ಭಾಗವಾಗಿದ್ದು, ಸುನೇತ್ರಾ ಫಡ್ನವೀಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಮತ್ತೊಂದೆಡೆ ಶರದ್ ಪವಾರ್ ನೇತೃತ್ವದ ಎನ್ಸಿಪಿ, ವಿರೋಧ ಪಕ್ಷದ ಇಂಡಿಯಾ ಕೂಟದ ಭಾಗವಾಗಿದೆ.