ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬಂಡಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ವಿವಾದ ಸಂಬಂಧ ವಿಳಂಬ ಮಾಡದೇ ಆದಷ್ಟು ಬೇಗ ತೀರ್ಪು ನೀಡುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಹೌದು... ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸ್ಥಾಪಕಿ ಮಮತಾ ಬ್ಯಾನರ್ಜಿ, ಪಕ್ಷದ ಹೆಸರು, ಚುನಾವಣಾ ಚಿಹ್ನೆ ಮತ್ತು ಸಂಘಟನಾ ನಿಯಂತ್ರಣಕ್ಕೆ ಸಂಬಂಧಿಸಿದ ವಿವಾದದ ವಿಚಾರಣೆಯನ್ನು ಯಾವುದೇ ಮತ್ತಷ್ಟು ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಅಂತೆಯೇ ಪ್ರತಿಸ್ಪರ್ಧಿ ಬಣಕ್ಕೆ ಹಲವು ಬಾರಿ ಕಾಲಾವಕಾಶ ನೀಡಿದ್ದರೂ ಅವರು ಯಾವುದೇ ಉತ್ತರ ಸಲ್ಲಿಸಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.
ಬುಧವಾರ ಚುನಾವಣಾ ಆಯೋಗದ ಕಾರ್ಯದರ್ಶಿ ಅಶ್ವಿನಿ ಕುಮಾರ್ ಮೊಹಲ್ ಅವರಿಗೆ ಬರೆದ ಪತ್ರದಲ್ಲಿ, ಪ್ರತಿಪಕ್ಷದ ಬಣಕ್ಕೆ ಇನ್ನು ಮುಂದೆ ಯಾವುದೇ ಹೆಚ್ಚುವರಿ ಕಾಲಾವಕಾಶ ನೀಡಬಾರದು ಎಂದು ಮಮತಾ ಮನವಿ ಮಾಡಿದ್ದಾರೆ. ಈ ವಿವಾದವು ಪಶ್ಚಿಮ ಬಂಗಾಳದಲ್ಲಿ ಗಂಭೀರ ರಾಜಕೀಯ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇರುವುದರಿಂದ, ವಿಚಾರಣೆಯನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಮತಾ ಅವರ ಬಣವು ಚುನಾವಣಾ ಆಯೋಗ ನಿಗದಿಪಡಿಸಿದ್ದ ಗಡುವಿನೊಳಗೆ ಜುಲೈ 6ರಂದು ತನ್ನ ವಿವರವಾದ ಉತ್ತರವನ್ನು ಸಲ್ಲಿಸಿದ್ದು, ಅದರ ಪ್ರತಿಯನ್ನು ಪ್ರತಿಸ್ಪರ್ಧಿ ಬಣಕ್ಕೂ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪದೇ ಪದೇ ಗಡುವು ವಿಸ್ತರಣೆ ಬೇಡ, ಮತ್ತೆ ಸಮಯ ನೀಡಬೇಡಿ
ಆರಂಭದಲ್ಲಿ ವಿಪಕ್ಷ ನಾಯಕ ರಿತಬ್ರತ ಬ್ಯಾನರ್ಜಿ ಅವರಿಗೆ ಜುಲೈ 6ರೊಳಗೆ ಉತ್ತರಿಸಲು ಆಯೋಗ ಸೂಚಿಸಿತ್ತು. ಆದರೆ ಅವರ ಮನವಿಯ ಮೇರೆಗೆ ಮೊದಲು ಜುಲೈ 10ರವರೆಗೆ, ಬಳಿಕ ಜುಲೈ 25ರವರೆಗೆ ಗಡುವನ್ನು ವಿಸ್ತರಿಸಲಾಗಿತ್ತು ಎಂದು ಮಮತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜುಲೈ 25ರ ಗಡುವು ಮುಗಿದ ಬಳಿಕವೂ ಪ್ರತಿಸ್ಪರ್ಧಿ ಬಣದಿಂದ ಯಾವುದೇ ಉತ್ತರ ಬಂದಿರುವ ಮಾಹಿತಿ ತಮ್ಮ ಬಣಕ್ಕೆ ತಿಳಿಸಿಲ್ಲ. ಇದರಿಂದ ತಮ್ಮ ವಿರುದ್ಧ ಮಾಡಲಾದ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಮತಾ ಹೇಳಿದ್ದಾರೆ.
ಇನ್ನೂ ಕಾಲಾವಕಾಶ ನೀಡಿದರೆ ಪ್ರತಿಸ್ಪರ್ಧಿ ಬಣವು ತನ್ನ ವಾದವನ್ನು ಬಲಪಡಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವ ಅವಕಾಶ ಸಿಗಬಹುದು ಎಂದು ಆರೋಪಿಸಿರುವ ಅವರು, ವಿಚಾರಣೆ ವೇಳೆ ಎರಡೂ ಬಣಗಳಿಗೆ ಸಮಾನ ಅವಕಾಶ ದೊರೆಯುವಂತೆ ಚುನಾವಣಾ ಆಯೋಗ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ, ಪಕ್ಷ ವಿಭಜನೆಯ ಬಳಿಕ ಮಾನ್ಯತೆ ಪಡೆದ ತೃಣಮೂಲ ಕಾಂಗ್ರೆಸ್ನ ನಿಜವಾದ ಹಕ್ಕುದಾರರು ಯಾರು ಎಂಬ ವಿಚಾರವನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ.
ಈ ಪ್ರಕರಣದ ತೀರ್ಪು ಯಾವ ಬಣವನ್ನು ನಿಜವಾದ ಟಿಎಂಸಿ ಎಂದು ಗುರುತಿಸಬೇಕು ಎಂಬುದನ್ನು ನಿರ್ಧರಿಸಲಿದೆ. ಜೊತೆಗೆ ಪಕ್ಷದ ಹೆಸರು, ಚುನಾವಣಾ ಚಿಹ್ನೆ, ಸಂಘಟನಾ ರಚನೆ ಹಾಗೂ ಹಣಕಾಸಿನ ಆಸ್ತಿಗಳ ಮೇಲಿನ ಹಕ್ಕು ಕೂಡ ಇದೇ ತೀರ್ಪಿನಿಂದ ನಿರ್ಧಾರವಾಗಲಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತ ಬಳಿಕ, ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣ ಮಮತಾ ಬ್ಯಾನರ್ಜಿಯವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಬದಲಿಸಿ, ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿತ್ತು.
ನಂತರ ಪ್ರತ್ಯೇಕ ನಾಯಕತ್ವವನ್ನು ಘೋಷಿಸಿದ ಈ ಬಣ ಹಾಗೂ ಮಮತಾ ಬಣ ಎರಡೂ ಚುನಾವಣಾ ಆಯೋಗದ ಮೊರೆ ಹೋಗಿವೆ. ಇದೇ ವೇಳೆ, ವಿಪಕ್ಷ ನಾಯಕನ ಹುದ್ದೆಗೆ ಸಂಬಂಧಿಸಿದ ಪ್ರತ್ಯೇಕ ವಿವಾದ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ.