ಚೆನ್ನೈ: ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಅತ್ತ ತಮಿಳುನಾಡು ಸಂಸದ ತಂಬಿದುರೈ ಕರ್ನಾಟಕಕ್ಕೆ ನೀರು ಬಿಡಲು ನಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ AIADMK ಹಿರಿಯ ಸಂಸದ ಎಂ. ತಂಬಿದುರೈ, 'ತಮಿಳುನಾಡಿನ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯ ಹಾಗೂ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸಬೇಕು' ಎಂದು ಹೇಳಿದರು.
ಅಲ್ಲದೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳು ರಾಜಕೀಯಕ್ಕಿಂತ ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಅವರ ಈ ಹೇಳಿಕೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ನೀಡಿರುವ ನಿರ್ದೇಶನದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಕರ್ನಾಟಕಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ.. ಆದ್ರೆ ಮೇಕೆದಾಟು ಬೇಡ
"ಬೆಂಗಳೂರು ನಗರದ ಕುಡಿಯುವ ನೀರಿಗಾಗಿ 18 ಟಿಎಂಸಿ ನೀರು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಪ್ರಮಾಣದ ನೀರನ್ನು ನೀಡುವುದಕ್ಕೆ ನಮಗೆ ಯಾವುದೇ ವಿರೋಧವಿಲ್ಲ. ಆ ನೀರನ್ನು ಮೇಕೆದಾಟು ಯೋಜನೆ ನಿರ್ಮಿಸುವ ಬದಲು ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯದಿಂದಲೇ ಪಡೆದುಕೊಳ್ಳಬಹುದು. ಆ ನೀರನ್ನು ನೀಡಲು ನಾವು ಸಿದ್ಧರಿದ್ದೇವೆ" ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಬದಲಾಗಿ ಕೆಆರ್ಎಸ್ ಜಲಾಶಯದಿಂದಲೇ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಬಹುದೆಂಬ ಅಭಿಪ್ರಾಯವನ್ನು ತಂಬಿದುರೈ ವ್ಯಕ್ತಪಡಿಸಿದರು. ಅಲ್ಲದೆ "ಅಷ್ಟು ನೀರು ನೀಡುವುದಕ್ಕೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ನ್ಯಾಯಾಲಯದ ಆದೇಶ ಮತ್ತು ಕಾನೂನು ಪ್ರಕಾರವೇ ಎಲ್ಲವೂ ನಡೆಯಬೇಕು" ಎಂದು ತಂಬಿದುರೈ ಹೇಳಿದರು.
ಪ್ರಸ್ತುತ ಕರ್ನಾಟಕದಲ್ಲಿ ಈ ಆದೇಶದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರಿಸುವುದಾಗಿ ಘೋಷಿಸಿದೆ. ಇದೇ ವೇಳೆ, ತಮಿಳುನಾಡಿನ ರಾಜಕೀಯ ವಲಯದಿಂದ ಈ ರೀತಿಯ ಪ್ರತಿಕ್ರಿಯೆಗಳು ಕಾವೇರಿ ವಿವಾದಕ್ಕೆ ಹೊಸ ಆಯಾಮ ನೀಡಿವೆ.