ಚಂಡೀಗಢ: ಪಂಜಾಬ್ ಚುನಾವಣೆಗೂ ಮುನ್ನವೇ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಎದುರಾಗಿದ್ದು, ಸಿಎಂ ಭಗವಂತ್ ಮಾನ್ ಅವರನ್ನು ‘ಗುರು ವಿರೋಧಿ’ 'ಗುರು ದ್ರೋಹಿ' ಎಂದು ಘೋಷಿಸಲಾಗಿದೆ.
ಹೌದು.. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ವಿರುದ್ಧ ಕಠಿಣ ನಿಲುವು ತಳೆದಿರುವ ಅಕಾಲ್ ತಖ್ತ್ (Akal Takht) ಅವರನ್ನು ‘ಗುರು ವಿರೋಧಿ’ (Anti-Guru) ಎಂದು ಘೋಷಿಸಿ, ಸಿಖ್ ಸಮುದಾಯವು ಅವರೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂದು ಕರೆ ನೀಡಿದೆ. ಅಕಾಲ್ ತಖ್ತ್ ಸಿಖ್ಖರ ಅತ್ಯುನ್ನತ ಧಾರ್ಮಿಕ-ಸಾಮಾಜಿಕ ಅಧಿಕಾರ ಕೇಂದ್ರವಾಗಿದೆ.
ಸಿಖ್ ಭಕ್ತರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಹಿನ್ನೆಲೆಯಲ್ಲಿ ಭಗವಂತ್ ಮಾನ್ ಅವರನ್ನು ಅಕಾಲ್ ತಖ್ತ್ ಜನವರಿ 15ರಂದು ಹಾಜರಾಗುವಂತೆ ಸಮನ್ಸ್ ನೀಡಿತ್ತು.
ಇದರ ಜೊತೆಗೆ, ಸಿಖ್ ಗುರುಗಳ ಚಿತ್ರಗಳ ಮೇಲೆ ಮದ್ಯವನ್ನು ಸಿಂಪಡಿಸುತ್ತಿರುವಂತೆ ಕಾಣುವ ವ್ಯಕ್ತಿಯೊಬ್ಬರ ವಿಡಿಯೋ ಕುರಿತು ಕೂಡ ಅಕಾಲ್ ತಖ್ತ್ ಮಾನ್ ಅವರನ್ನು ಪ್ರಶ್ನಿಸಿತ್ತು. ಆ ವಿಡಿಯೋದಲ್ಲಿರುವ ವ್ಯಕ್ತಿ ಭಗವಂತ್ ಮಾನ್ ಅವರನ್ನು ಹೋಲುತ್ತಿದ್ದನು ಎಂದು ಸಂಘಟನೆ ಆರೋಪಿಸಿತ್ತು.
ಆರೋಪ ತಳ್ಳಿ ಹಾಕಿದ ಮಾನ್
ಇನ್ನು ಈ ಆರೋಪವನ್ನು ಮಾನ್ ತಳ್ಳಿಹಾಕಿ, ವಿಡಿಯೋ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾಗಿದೆ ಎಂದು ಹೇಳಿದ್ದರು.
ಆದರೆ ಸೋಮವಾರ ಬಹಿರಂಗವಾದ ಮಾಹಿತಿಯ ಪ್ರಕಾರ, ವಿಧಿವಿಜ್ಞಾನ (Forensic) ಪರೀಕ್ಷೆಯಲ್ಲಿ ವಿಡಿಯೋ ನಿಜವಾದದ್ದು ಎಂದು ಕಂಡುಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಧಾರ್ಮಿಕ ಗುರುಗಳು ಪರೀಕ್ಷೆಯಲ್ಲಿ ವಿಡಿಯೋ ನಕಲಿಯಲ್ಲ ಎಂದು ಮಾತ್ರ ತಿಳಿದುಬಂದಿದ್ದು, ಅದರಲ್ಲಿ ಕಾಣುವ ವ್ಯಕ್ತಿ ಭಗವಂತ್ ಮಾನ್ ಅವರೇ ಎಂದು ಸಾಬೀತಾಗಿಲ್ಲ ಎಂದು ವಾದಿಸಿದೆ.
‘ಗುರು ವಿರೋಧಿ’ ಎಂದು ಘೋಷಣೆ
ಅದೇ ದಿನ ಐವರು ಸಿಂಗ್ ಸಾಹಿಬರ (ಉನ್ನತ ಸಿಖ್ ಧಾರ್ಮಿಕ ಮುಖಂಡರು) ಸಭೆಯ ಬಳಿಕ ಅಕಾಲ್ ತಖ್ತ್ ಜಥೇದಾರ್ ಕುಲದೀಪ್ ಸಿಂಗ್ ಗರ್ಗಾಜ್ (Kuldeep Singh Gargaj) ಅವರು ಈ ತೀರ್ಪು ಪ್ರಕಟಿಸಿದರು.
ಅವರು ಹೇಳುವಂತೆ, “ವಿಡಿಯೋ ಕುರಿತು ನಾವು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾಗ ಅದು AI ಮೂಲಕ ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು. ಅದಕ್ಕೆ ಸಾಕ್ಷ್ಯ ಒದಗಿಸುವಂತೆ ಕೇಳಿದ್ದರೂ ಆರು ತಿಂಗಳ ಕಾಲ ಯಾವುದೇ ಉತ್ತರ ಬಂದಿಲ್ಲ. ಬಳಿಕ ಭಾರತ ಸರ್ಕಾರ ಮಾನ್ಯತೆ ನೀಡಿರುವ ಎರಡು ಪ್ರಯೋಗಾಲಯಗಳಲ್ಲಿ ವಿಡಿಯೋ ಪರಿಶೀಲನೆ ನಡೆಸಲಾಯಿತು. ಪರೀಕ್ಷೆಯಲ್ಲಿ ಅದು ನಕಲಿ ಅಲ್ಲ ಹಾಗೂ AI ಸೃಷ್ಟಿಯೂ ಅಲ್ಲ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಂಥ್ (ಸಿಖ್ ಸಮುದಾಯ) ಕ್ರಮ ಕೈಗೊಂಡು ನಿರ್ಧಾರಕ್ಕೆ ಬಂದಿದೆ' ಎಂದರು.
ಗರ್ಗಜ್ ಅವರ ಪ್ರಕಾರ, ಭಗವಂತ್ ಮಾನ್ ಅಕಾಲ್ ತಖ್ತ್ ಮುಂದೆ ಸುಳ್ಳು ಹೇಳಿದ್ದಾರೆ. ಆದ್ದರಿಂದ ಅವರನ್ನು ಗುರುಗಳ ಎದುರು ತಪ್ಪಿತಸ್ಥರೆಂದು ಹಾಗೂ ‘ಗುರು ವಿರೋಧಿ’ ಎಂದು ಘೋಷಿಸಲಾಗಿದೆ. ಸಿಖ್ಖರಿಗೆ ಮುಖ್ಯಮಂತ್ರಿಯಿಂದ ಯಾವುದೇ ನಿರೀಕ್ಷೆ ಉಳಿದಿಲ್ಲ. ಪಂಥ್ ಹಾಗೂ ಗುರುಗಳ ಅನುಯಾಯಿಗಳು ಅವರೊಂದಿಗೆ ಯಾವುದೇ ಸಂಬಂಧ ಹೊಂದಬಾರದು” ಎಂದು ಅವರು ಹೇಳಿದರು.
ಪಂಜಾಬ್ ಸಚಿವ ಸಂಪುಟಕ್ಕೆ ಸಮನ್ಸ್
ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಮತ್ತೊಂದು ಮಹತ್ವದ ಕ್ರಮವಾಗಿ, ಅಕಾಲ್ ತಖ್ತ್ ಸಂಪೂರ್ಣ ಪಂಜಾಬ್ ಸಚಿವ ಸಂಪುಟವನ್ನು ಜೂನ್ 29ರಂದು ಹಾಜರಾಗುವಂತೆ ಸಮನ್ಸ್ ನೀಡಿದೆ.
ಇದು ಜಾಗತ್ ಜೋತ್ ಶ್ರೀ ಗುರು ಗ್ರಂಥ ಸಾಹಿಬ್ ಸತ್ಕರ್ (ತಿದ್ದುಪಡಿ) ಮಸೂದೆ, 2026 (Jaagat Jot Sri Guru Granth Sahib Satkar (Amendment) Bill, 2026) ಅಂಗೀಕಾರದ ಹಿನ್ನೆಲೆಯಲ್ಲಿ ನೀಡಲಾಗಿದೆ. ಈ ಮಸೂದೆಯಲ್ಲಿ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥಾಸಾಹಿಬ್ (Guru Granth Sahib) ವಿರುದ್ಧ ಅವಮಾನಕಾರಿ ಕೃತ್ಯ ಎಸಗಿದರೆ ಜೀವಾವಧಿ ಶಿಕ್ಷೆ ವಿಧಿಸುವ ಪ್ರಾವಧಾನ್ಯವಿದೆ.
'ಗುರುವಿನ ಸಿಂಹಾಸನವನ್ನು ಪ್ರಶ್ನಿಸುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಪಂಜಾಬ್ ಸರ್ಕಾರ ಸಿಖ್ ಸಮುದಾಯ, ಧಾರ್ಮಿಕ ಸಂಸ್ಥೆಗಳು ಅಥವಾ SGPC ಯೊಂದಿಗೆ ಸಮಾಲೋಚನೆ ನಡೆಸದೆ ಈ ಕಾನೂನನ್ನು ತಂದಿದೆ.
ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರ ಹಠಮಾರಿತನದಿಂದ ವರ್ತಿಸಿ, ವಿಧಾನಸಭೆ ಹಾಗೂ ರಾಜ್ಯಪಾಲರ ಅನುಮೋದನೆ ಪಡೆದಿದೆ. ಈ ಕಾನೂನು ಪಂಥ್ ಒಳಗೆ ವಿಭಜನೆ ಉಂಟುಮಾಡಬಹುದು. ಪಂಥ್ಗೆ ಸಂಬಂಧಿಸಿದ ವಿಷಯಗಳಲ್ಲಿ ಕಾನೂನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ' ಎಂದರು.
ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಈ ನಡುವೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ವಾರಿಂಗ್ ಅವರು ಭಗವಂತ್ ಮಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 'ವಿವಾದಾತ್ಮಕ ವಿಡಿಯೋ ಕುರಿತು ಶ್ರೀ ಅಕಾಲ್ ತಖ್ತ್ ಸಾಹಿಬ್ ನಡೆಸಿದ ವಿಧಿವಿಜ್ಞಾನ ತನಿಖೆಯ ನಂತರ ಭಗವಂತ್ ಮಾನ್ ಅವರನ್ನು ಧಾರ್ಮಿಕ ತಪ್ಪಿತಸ್ಥ (‘ತಂಖಯ್ಯಾ’) ಎಂದು ಘೋಷಿಸಲಾಗಿದೆ. ಸಿಖ್ ಸಂಗತ್ ಅವರಿಗೆ ದೂರವಿರಲು ಸೂಚಿಸಲಾಗಿದೆ. ಇಂತಹ ಗಂಭೀರ ತೀರ್ಮಾನದ ಬಳಿಕ ಭಗವಂತ್ ಮಾನ್ ಅವರು ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಅಕಾಲ್ ತಖ್ತ್ ಸಾಹಿಬ್ನ ಅತ್ಯುನ್ನತ ಅಧಿಕಾರ ಮತ್ತು ಸಿಖ್ ಸಮುದಾಯದ ಭಾವನೆಗಳನ್ನು ಗೌರವಿಸಿ, ಅವರು ತಕ್ಷಣ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.