ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಪಕ್ಷದ ಹಿರಿಯ ನಾಯಕ ನಿತಿನ್ ತಿವಾರಿ ಅವರು ಹಲವು ಕಾರ್ಯಕರ್ತರೊಂದಿಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾದರು.
ಉದ್ಧವ್ ಠಾಕ್ರೆ ಬಣದ ನಾಗ್ಪುರ ನಗರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ತಿವಾರಿ, ಶಿವಸೇನೆಯ ನಗರ ಕಾರ್ಯದರ್ಶಿ, ಯುವಸೇನೆಯ ನಗರ ಮುಖ್ಯಸ್ಥ ಸೇರಿದಂತೆ ಹಲವು ಪ್ರಮುಖ ಕಾರ್ಯಕರ್ತರು ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಅವರ ಸಮ್ಮುಖದಲ್ಲಿ ಶಿಂಧೆ ಬಣ ಸೇರಿದರು.
ಅಜಿತ್ ಪವಾರ್ ನೇತೃತ್ವದ NCP ಹಾಗೂ ಶರದ್ ಪವಾರ್ ನೇತೃತ್ವದ ಬಣ ಮತ್ತೆ ಒಂದಾಗುತ್ತಿರುವ ಮಾತುಗಳು ಕೇಳಿಬರುತ್ತಿರುವಂತೆ ನಾಗ್ಪುರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಈ ಬೆಳವಣಿಗೆಯು ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ.
ತಮ್ಮ ಪಕ್ಷ ಒಗಟ್ಟಿನಿಂದ ಕೂಡಿದ್ದು, ನಾಯಕರು ಪಕ್ಷದೊಂದಿಗೆ ದೃಢವಾಗಿ ನಿಂತಿದ್ದಾರೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿಕೆ ಬೆನ್ನಲ್ಲೇ ನಾಗ್ಪುರದ ಹಲವಾರು ಶಿವಸೇನೆ ನಾಯಕರು ಮತ್ತು ಕಾರ್ಯಕರ್ತರು ಪಕ್ಷ ತೊರೆದಿದ್ದಾರೆ.
ಶಿವಸೇನೆ (ಯುಬಿಟಿ) ಸಂಸದರಲ್ಲಿ ಒಡಕನ್ನು ಸೃಷ್ಟಿಸುವ ಗುರಿ ಹೊಂದಿರುವ "ಆಪರೇಷನ್ ಟೈಗರ್" ಸುತ್ತಲಿನ ಊಹಾಪೋಹಗಳನ್ನು ರಾವತ್ ಇತ್ತೀಚೆಗೆ ತಳ್ಳಿಹಾಕಿದ್ದರು.
ಇತ್ತೀಚಿನ ಬೆಳವಣಿಗೆಯು ಸಂಸತ್ ಸದಸ್ಯರಿಗಿಂತ ನಗರ ಮಟ್ಟದ ನಾಯಕರನ್ನು ಒಳಗೊಂಡಿದ್ದರೂ, ಇದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಉದ್ಧವ್ ಠಾಕ್ರೆ ಬಣದೊಳಗೆ ತನ್ನ ಪ್ರಭಾವವನ್ನು ತಳಮಟ್ಟದಲ್ಲಿ ವಿಸ್ತರಿಸಲು ಪ್ರಾರಂಭಿಸಿದೆ ಎಂಬುದನ್ನು ಸೂಚಿಸುತ್ತದೆ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.